ಗಣಿಗಾರಿಕೆಯಿಂದ ಕೆಆರ್​ಎಸ್​​ಗೆ ಅಪಾಯ ಆರೋಪ: ಮುಂದಿನ ವಾರ ಟ್ರಯಲ್ ಬ್ಲಾಸ್ಟ್​ಗೆ ಸರ್ಕಾರ ನಿರ್ಧಾರ

2019ರಿಂದಲೂ ಟ್ರಯಲ್ ಬ್ಲಾಸ್ಟ್​ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹೋರಾಟಗಾರರು, ಪ್ರಗತಿಪರರು, ತಜ್ಞರಿಂದಲೂ ವಿರೋಧ ಮಾಡಲಾಗುತ್ತಿದ್ದು, ಪರ-ವಿರೋಧ ಪ್ರತಿಭಟನೆಯಿಂದ ಟ್ರಯಲ್ ಬ್ಲಾಸ್ಟ್ ರದ್ದಾಗಿತ್ತು.

ಗಣಿಗಾರಿಕೆಯಿಂದ ಕೆಆರ್​ಎಸ್​​ಗೆ ಅಪಾಯ ಆರೋಪ: ಮುಂದಿನ ವಾರ ಟ್ರಯಲ್ ಬ್ಲಾಸ್ಟ್​ಗೆ ಸರ್ಕಾರ ನಿರ್ಧಾರ
KRS ಡ್ಯಾಂ
Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2022 | 1:06 PM

ಮಂಡ್ಯ: ಗಣಿಗಾರಿಕೆಯಿಂದ ಕೆಆರ್​ಎಸ್​​ಗೆ (KRS) ಅಪಾಯ ಆರೋಪ ಹಿನ್ನೆಲೆ ಜುಲೈ 25ರಿಂದ 31ರವರೆಗೆ ಟ್ರಯಲ್ ಬ್ಲಾಸ್ಟ್​ ನಡೆಸಲು ನಿರ್ಧಾರ ಮಾಡಲಾಗಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಗಣಿಗಾರಿಕೆ ನಿಷೇಧ ಮಾಡಲಾಗಿದೆ. ಡ್ಯಾಂಗೆ ಅಪಾಯ ಇದೆಯೇ ಎಂಬ ಖಚಿತತೆಗಾಗಿ ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದು, ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಟ್​ಗೆ ಸರ್ಕಾರ ಸಿದ್ಧತೆ ನಡೆಸಿದೆ. ವೈಜ್ಞಾನಿಕ ಮತ್ತು ಸಂಶೋಧನಾ ಕೇಂದ್ರದ ತಜ್ಞರಿಂದ ಪ್ರಯೋಗಕ್ಕೆ ಮುಂದಾಗಿದ್ದು, ಜುಲೈ 24ರಂದು ಕೆಆರ್​ಎಸ್ ಜಲಾಶಯಕ್ಕೆ ಜಾರ್ಖಂಡ್​ನ ಧನಬಾದ್​​​ನಿಂದ ಕೆಆರ್​ಎಸ್​ಗೆ ತಂಡ ಆಗಮಿಸಲಿದೆ. 2019ರಿಂದಲೂ ಟ್ರಯಲ್ ಬ್ಲಾಸ್ಟ್​ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹೋರಾಟಗಾರರು, ಪ್ರಗತಿಪರರು, ತಜ್ಞರಿಂದಲೂ ವಿರೋಧ ಮಾಡಲಾಗುತ್ತಿದ್ದು, ಪರ-ವಿರೋಧ ಪ್ರತಿಭಟನೆಯಿಂದ ಟ್ರಯಲ್ ಬ್ಲಾಸ್ಟ್ ರದ್ದಾಗಿತ್ತು. ಇದೀಗ ಟ್ರಯಲ್ ಬ್ಲಾಸ್ಟ್​ಗೆ ಸರ್ಕಾರ ಅನುಮತಿ ನೀಡಿದೆ.

ಇದನ್ನೂ ಓದಿ: KRS ಸುತ್ತಮುತ್ತ ಗಣಿಗಾರಿಕೆಗೆ ಬ್ರೇಕ್ ಹಾಕಲು ಬಿಎಸ್​ವೈ ಗ್ರೀನ್ ಸಿಗ್ನಲ್

ಟ್ರಯಲ್ ಬ್ಲಾಸ್ಟ್​ಗೆ ತೀವ್ರ ವಿರೋಧ

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಮುಹೂರ್ತ ಫಿಕ್ಸ್ ಹಿನ್ನಲೆ ಗಣಿಗಾರಿಕೆಯನ್ನ ವಿರೋಧಿಸಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಮುಖ್ಯಮಂತ್ರಿಗಳಿಗೆ ಟ್ವಿಟ್ ಮೂಲಕ ಗಣಿಗಾರಿಕೆ ನಡೆಸದಂತೆ ಸ್ವತಃ ಬಿಜೆಪಿ ಮುಖಂಡನಿಂದಲೇ ಟ್ವೀಟ್ ಮಾಡಲಾಗಿದೆ. ಕನ್ನಾಂಬಾಡಿ ಸುತ್ತಾ ಮುತ್ತಾ 25 ಕಿಲೋ ಮೀಟರ್ ಗಣಿಗಾರಿಕೆ ನಡೆಸದಂತೆ ಮನವಿ ಮಾಡಿದ್ದು, ಜೀವನಾಡಿ ಕೆ.ಆರ್.ಎಸ್ ಡ್ಯಾಂ ಸುತ್ತಾ ಬ್ಲಾಸ್ಟಿಂಗ್ ನಡೆಸದಂತೆ ಟ್ವಿಟ್ ಮಾಡಲಾಗಿದೆ. ಗಣಿಗಾರಿಕೆಗೆ ಅವಕಾಶ ಮಾಡಿ ಕೊಟ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಬೇಬಿ ಬೆಟ್ಟದಲ್ಲಿ ಈಗಾಗ್ಲೆ ಜುಲೈ 25 ರಿಂದ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಸಿದ್ದತೆ ನಡೆದಿದ್ದು, ಜಾರ್ಖಂಡ್​ನಿಂದ ವಿಶೇಷ ಭೂ ವಿಜ್ಞಾನಿಗಳ ತಂಡ ಬರಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂ ಅಸ್ತಿತ್ವಕ್ಕೆ ಅಡ್ಡಿ: ಸಂಸದೆ ಸುಮಲತಾ

ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂ ಅಸ್ತಿತ್ವಕ್ಕೆ ಅಡ್ಡಿಯಾಗಿದೆ ಎಂದು ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ಈ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಪ್ರಸ್ತಾಪ ಮಾಡಿದ್ದರು. ಈ ಕುರಿತು ಸಂಸತ್​ನಲ್ಲಿ ಹಲವು ಬಾರಿ ಚರ್ಚಿಸಿದ್ದೇನೆ. ಈ ವಿಷಯವನ್ನು ಸಚಿವರ ಗಮನಕ್ಕೂ ತಂದಿದ್ದೇನೆ. ಅಕ್ರಮ ಚಟುವಟಿಕೆ ನಿಲ್ಲಿಸಿ ಡ್ಯಾಂ ರಕ್ಷಿಸಬೇಕು. ಅಕ್ರಮ ಚಟುವಟಿಕೆ ನಿಲ್ಲಿಸುವುದು ಜಿಲ್ಲಾಡಳಿತದ ಹೊಣೆಯಾಗಿದ್ದು, ನಾನೂ ಸಹ ಕೈಜೋಡಿಸುತ್ತೇನೆ. ಅಕ್ರಮ ಗಣಿಗಾರಿಕೆಯ ಹಿಂದೆ ಯಾರೇ ಪ್ರಭಾವಿ ಇದ್ದರೂ ತಡೆಗಟ್ಟಲು ನಾನು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದರು.

Published On - 12:48 pm, Fri, 22 July 22