ಮಂಡ್ಯದಲ್ಲಿ ಹನುಮ ಧ್ವಜ ವಿವಾದ: ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ವಿಪಕ್ಷ ನಾಯಕ ಅಶೋಕ್ ಕರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 28, 2024 | 6:28 PM

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲೂ ಹನುಮ ಧ್ವಜ ಹಾಕಿ ಸಂಭ್ರಮಿಸಲಾಗಿತ್ತು. ಅದೇ ಧ್ವಜವೀಗ ಇವತ್ತು ದೊಡ್ಡ ಕೋಲಾಹಲವನ್ನ ಎಬ್ಬಿಸಿದೆ. ಸದ್ಯ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ವಿಪಕ್ಷನಾಯಕ ಆರ್​. ಅಶೋಕ್ ಕರೆ ನೀಡಿದ್ದಾರೆ. ನಾಳೆಯ ಪ್ರತಿಭಟನೆಯಲ್ಲಿ ಜೆಡಿಎಸ್‌ ಸಹ ಭಾಗಿಯಾಗುತ್ತೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಹನುಮ ಧ್ವಜ ವಿವಾದ: ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ವಿಪಕ್ಷ ನಾಯಕ ಅಶೋಕ್ ಕರೆ
ವಿಪಕ್ಷ ನಾಯಕ ಆರ್.ಅಶೋಕ್
Follow us on

ಮಂಡ್ಯ, ಜನವರಿ 28: ಜಿಲ್ಲೆಯ ಕೆರಗೋಡು ಗ್ರಾಮದಲ್ಲೂ ಹನುಮ ಧ್ವಜ (Hanuman flag controversy) ಹಾಕಿ ಸಂಭ್ರಮಿಸಲಾಗಿತ್ತು. ಅದೇ ಧ್ವಜವೀಗ ಇವತ್ತು ದೊಡ್ಡ ಕೋಲಾಹಲವನ್ನ ಎಬ್ಬಿಸಿದೆ. ಜಿಲ್ಲಾಡಳಿತ ಧ್ವಜ ತೆರವು ಮಾಡಿದ್ದಕ್ಕೆ ಆಕ್ರೋಶ ಭುಗಿಲೆದ್ದಿದೆ. ಸದ್ಯ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ವಿಪಕ್ಷನಾಯಕ ಆರ್​. ಅಶೋಕ್ ಕರೆ ನೀಡಿದ್ದಾರೆ. ನಾಳೆಯ ಪ್ರತಿಭಟನೆಯಲ್ಲಿ ಜೆಡಿಎಸ್‌ ಸಹ ಭಾಗಿಯಾಗುತ್ತೆ. ಸರ್ಕಾರದ ಹಿಂದೂ ವಿರೋಧಿ ನೀತಿ, ದುರಾಡಳಿತ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಆರ್​. ಅಶೋಕ್​ ಹೇಳಿದ್ದಾರೆ.

ರಾಷ್ಟ್ರಧ್ವಜ ಇಳಿಸಿ ಹನುಮ ಧ್ವಜ ಹಾರಿಸಲು ತೆರಳುತ್ತಿದ್ದ ಬಿಜೆಪಿ ನಾಯಕರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಶೋಕ್‌, ಅಶ್ವತ್ಥ್‌ ನಾರಾಯಣ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ನಾಯಕರು, ಕಾರ್ಯಕರ್ತರನ್ನು ವಾಹನದಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದ ಬಿವೈ ವಿಜಯೇಂದ್ರ

ಯಾದಗಿರಿಯ ಶಹಾಪುರ‌ದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ನಾಳೆ ರಾಜ್ಯ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಫೆಬ್ರವರಿ 9ರಂದು ಮಂಡ್ಯ ನಗರ ಬಂದ್‌

ಹನುಮ ಧ್ವಜ ವಿವಾದ ಪ್ರಕರಣ ಹಿನ್ನೆಲೆ ಫೆಬ್ರವರಿ 9ರಂದು ಮಂಡ್ಯ ನಗರ ಬಂದ್‌ಗೆ ಬಜರಂಗದಳ ಕರೆ ನೀಡಿದೆ. ನಾಳೆ ಮಂಡ್ಯದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುತ್ತಿದ್ದು, ಕೆರಗೋಡು ಗ್ರಾಮದಿಂದ ಡಿಸಿ ಕಚೇರಿವರೆಗೂ ಪಾದಯಾತ್ರೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ.

ಸಿದ್ದರಾಮಯ್ಯ ರಾಮ, ಹನುಮ ವಿರೋಧಿ: ಆರ್.ಅಶೋಕ್ ಆಕ್ರೋಶ

ಸಿದ್ದರಾಮಯ್ಯ ರಾಮ, ಹನುಮ ವಿರೋಧಿ. ಈ ಹಿಂದೂಗಳ ವಿರೋಧಿ ಸರ್ಕಾರ ಉಳಿಯಬಾರದು. ಹನುಮ ಧ್ವಜ ಇಳಿಸುವುದಕ್ಕೆ ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ. ಹನುಮ ಹುಟ್ಟಿದ ನಾಡಲ್ಲಿ ಹನುಮನಿಗೆ ಈ ಸರ್ಕಾರ ಅವಮಾನ, ದ್ರೋಹ ಮಾಡಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Video:ಕೆರಗೋಡು ಹನುಮ ಧ್ವಜ ಗಲಾಟೆ; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಬೆಳಿಗ್ಗೆ 9 ಗಂಟೆಗೆ ಒಳಗೆ ರಾಷ್ಟ್ರ ಧ್ವಜ‌ಹಾರಿಸಬೇಕು. ಆದರೆ ನಾನು ಬರ್ತೀನಿ ಎಂದು ಮಧ್ಯಾಹ್ನ 3 ಗಂಟೆಯಲ್ಲಿ ಧ್ವಜ ಹಾರಿಸಿದ್ದಾರೆ. ಪೊಲೀಸರು ಶೂ ಧರಿಸಿ ಧ್ವಜಾರೋಹಣ ನಡೆಸಿದ್ದಾರೆ. ಗೂಂಡಾಗಿರಿ, ದೌರ್ಜನ್ಯ ಎಸಗಿ, ಹನುಮ ಧ್ವಜ ಇಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕೆರಗೋಡು ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ: ಅಶೋಕ್‌, ಅಶ್ವತ್ಥ್‌ ನಾರಾಯಣ ಪೊಲೀಸರ ವಶಕ್ಕೆ

ಕಳ್ಳರ ರೀತಿ ರಾತ್ರಿ ಹೊತ್ತು ಬಂದು ಧ್ವಜ ಇಳಿಸಿದ್ದಾರೆ. ದರೋಡೆ ಮಾಡುವವರ ರೀತಿ ಪೊಲೀಸರು ನಡೆದುಕೊಂಡಿದ್ದಾರೆ. ಇವತ್ತು ಮತ್ತೆ ಹನುಮ ಧ್ವಜ ಹಾರಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.

ಸದ್ಯದ ಬೆಳವಣಿಗೆಗಳಿಂದ ಕೆರೆಗೋಡು ಗ್ರಾಮ ಬೂದಿಮುಚ್ಚಿದ ಕೆಂಡದಂತಿದ್ದು, ನೂರಾರು ಸಂಖ್ಯೆಯ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 6:27 pm, Sun, 28 January 24