ಸಿದ್ದರಾಮಯ್ಯನವರ ನಾಯಕತ್ವ ಪ್ರಶ್ನಿಸುವ ಅರ್ಹತೆ ಕುಮಾರಸ್ವಾಮಿಗಿಲ್ಲ; ಚೆಲುವರಾಯಸ್ವಾಮಿ

| Updated By: ಸುಷ್ಮಾ ಚಕ್ರೆ

Updated on: Sep 14, 2024 | 9:43 PM

ಮಂಡ್ಯದ ಮಳವಳ್ಳಿಯಲ್ಲಿ ಇಂದು ಗಗನಚುಕ್ಕಿ ಜಲಪಾತೋತ್ಸವ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟಿದ್ದಾರೆ. ಹಾಗೇ, ಹೆಚ್​ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರ ನಾಯಕತ್ವ ಪ್ರಶ್ನಿಸುವ ಅರ್ಹತೆ ಕುಮಾರಸ್ವಾಮಿಗಿಲ್ಲ; ಚೆಲುವರಾಯಸ್ವಾಮಿ
ಚೆಲುವರಾಯಸ್ವಾಮಿ
Follow us on

ಮಂಡ್ಯ: ಕೇಂದ್ರ ಸಚಿವರಾದ ಹೆಚ್​ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾದವರು. ಅವರ ಟೀಕೆ- ಟಿಪ್ಪಣೆಗಳನ್ನು ನೋಡುತ್ತಾ ಇರುತ್ತೀರಿ. ಒಬ್ಬ ಮಾಜಿ ಸಿಎಂ ಹೇಗೆ ಮಾತಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯನವರ ಚರಿತ್ರೆ, ನಾಯಕತ್ವ, ಆಡಳಿತವನ್ನು ಪ್ರಶ್ನೆ ಮಾಡುವ ಅರ್ಹತೆ ಕುಮಾರಸ್ವಾಮಿಯವರಿಗೆ ಇಲ್ಲ. ಗ್ರಾಮಗಳಲ್ಲೂ ನೂರಕ್ಕೆ ನೂರರಷ್ಟು 5 ಗ್ಯಾರೆಂಟಿ ನೀಡಲಾಗುತ್ತಿದೆ. ಅಲ್ಲಿ ಮುಸ್ಲಿಮರು, ಒಕ್ಕಲಿಗರು, ಬೇರೆ ಪಂಗಡದವರೂ ಅಂತ ಕೊಡುತ್ತಾ ಇದ್ದಾರಾ? ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಆದರೆ ಪಕ್ಕದ ತಟ್ಟೆ ನೋಡ್ತಾರೆ. ಇದೆಲ್ಲಾ ಮಾತಾಡೋದಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇ‌ ನೀವು. ಅದಕ್ಕೆ ಅವರು ಬಂದು ಮಾತಾಡ್ತಾ ಇದ್ದಾರೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಗಗನಚುಕ್ಕಿ ಜಲಪಾತೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೇರೆ ಜಿಲ್ಲೆಗೆ ಗಮನ ಹರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಮಂಡ್ಯ ಜಿಲ್ಲೆಯ ಪ್ರತೀ ಕಾರ್ಯಕ್ರಮಕ್ಕೂ ಬರುತ್ತಾರೆ. ಮೊನ್ನೆ ನನ್ನನ್ನು ಅಮೆರಿಕಕ್ಕೆ ಕಳಿಸಿದ್ದರು. ಇಳುವರಿ ಬಗ್ಗೆ ಅಧ್ಯಯನ‌ ಮಾಡೋದಕ್ಕೆ ನಾವು ಹೋಗಿದ್ದೆವು. ನೀವೆಲ್ಲಾ ನೀರು ಜಾಸ್ತಿ ಕೊಟ್ಟರೆ ಜಾಸ್ತಿ ಇಳುವರಿ ಬರುತ್ತೆ ಅಂತ ತಿಳಿದುಕೊಂಡಿದ್ದೀರಿ. ಆದರೆ‌ ಆ ಥರ ಇಲ್ಲ. ಮಣ್ಣಿನ ಪರೀಕ್ಷೆ ಮಾಡಬೇಕು ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶನನ್ನೂ ಕಂಬಿ ಹಿಂದೆ ಹಾಕಲಾಗಿದೆ; ಕುರುಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಜನರಿಗೆ 5 ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಹೇಗೆ ಮಾಡ್ತಾರೆ ಅಂತ ನಮ್ಮನ್ನು ಟೀಕಿಸಿದರು. ಅಭಿವೃದ್ಧಿಗೆ ಹಣ ಇಲ್ಲ ಅಂತಾ ಜನ ಮಾತಾಡಿಕೊಳ್ತಿದ್ದಾರೆ, ಇದಕ್ಕೆಲ್ಲಾ ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳುತ್ತಾರೆ. ಅದೇನೋ ಸಿಎಂ ಸಿದ್ದರಾಮಯ್ಯನವರು ಪವಾಡ ಪುರುಷ. ಸಿಎಂ ಇವೆಲ್ಲ ಅದೆಲ್ಲಿಂದ ಮಾಡ್ತಾರೋ ಅವರಿಗೇ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ಯಾವುದೇ ಕಾಮಗಾರಿಗೆ ಹಣ ಇಲ್ಲ ಅಂದಿಲ್ಲ ಎಂದು ಬಣ್ಣಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಒಂದೇ ಒಂದು ಕಾಮಗಾರಿ ಬಿಲ್ ನಿಲ್ಲಿಸಿಲ್ಲ. ನಮ್ಮ ಜಿಲ್ಲೆಗೆ 1.5 ಸಾವಿರ ಕೋಟಿ ಅನುದಾನ‌ ಕೊಟ್ಟಿದ್ದಾರೆ. ಈ ವರ್ಷ 1.5 ಸಾವಿರ ಕೋಟಿ ಅನುದಾನ‌ ಕೊಟ್ಟಿದ್ದಾರೆ. ನಿಂತು ಹೋಗಿದ್ದ ಶುಗರ್ ಫ್ಯಾಕ್ಟರಿ ಪುನಾರಂಭಗೊಳಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ