ಕೆಆರ್​ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಯುತ್ತಿದೆ ಬಹುಪಾಲು ನೀರು: ಕುಡಿಯುವ ನೀರಿಗೂ ಎದುರಾಗಲಿದೆ ಸಂಕಷ್ಟ

ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಮೂರು ದಿನದಲ್ಲಿ ಮೂರು ಅಡಿ ಕುಸಿದಿದ್ದು, ಒಳಹರಿವು ಕಡಿಮೆಯಾದರೂ ಹೊರಹರಿವು ಹೆಚ್ಚಾಗಿದೆ. ತಮಿಳುನಾಡಿಗೆ ಹೆಚ್ಚಿನ ನೀರು ಹರಿಯುತ್ತಿರುವ ಹಿನ್ನೆಲೆ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಇದರಿಂದ ಬೆಂಗಳೂರಿಗೆ ಸೇರಿದಂತೆ ವಿವಿಧ ಕಡೆಗಳಿಗೆ ಕುಡಿಯುವ ನೀರಿನ ಪೂರೈಕೆ ಬಗ್ಗೆಯೂ ಆತಂಕ ಹೆಚ್ಚಾಗಿದೆ.

ಕೆಆರ್​ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಯುತ್ತಿದೆ ಬಹುಪಾಲು ನೀರು: ಕುಡಿಯುವ ನೀರಿಗೂ ಎದುರಾಗಲಿದೆ ಸಂಕಷ್ಟ
ಕೆಆರ್​ಎಸ್ ಡ್ಯಾಂ
Image Credit source: tv9
Edited By:

Updated on: Sep 04, 2026 | 11:29 AM

ಮುಖ್ಯಾಂಶಗಳು

  • ಕೆಆರ್‌ಎಸ್ ನೀರಿನ ಮಟ್ಟ ಮೂರು ಅಡಿ ಕುಸಿತ
  • ಕೆಆರ್‌ಎಸ್ನಿಂದ 9 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ
  • ಕುಡಿಯುವ ನೀರಿಗೂ ಎದುರಾಯ್ತು ಆತಂಕ

ಮಂಡ್ಯ, ಸೆಪ್ಟೆಂಬರ್ 4: ಮಳೆ ಕೈಕೊಟ್ಟಿರುವ ಬೆನ್ನಲ್ಲೇ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಡ್ಯಾಂನಿಂದ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕೆಆರ್​ಎಸ್ ಡ್ಯಾಂ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೂ ಸಂಕಷ್ಟ ಎದುರಾಗುವ ಆತಂಕ ವ್ಯಕ್ತವಾಗಿದೆ.

3 ದಿನದಲ್ಲಿ 3 ಅಡಿ ಕುಸಿದ ಕೆಆರ್​ಎಸ್ ನೀರಿನ ಮಟ್ಟ

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕೇವಲ ಮೂರು ದಿನಗಳಲ್ಲಿ ಸುಮಾರು 3 ಅಡಿ ಕುಸಿದಿದೆ. 111 ಅಡಿಯಷ್ಟಿದ್ದ ನೀರಿನ ಮಟ್ಟ ಇದೀಗ 108.16 ಅಡಿಗೆ ಇಳಿಕೆಯಾಗಿದೆ. ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದ್ದರೂ ಹೊರಹರಿವಿನ ಪ್ರಮಾಣ ಹೆಚ್ಚಾಗಿರುವುದು ನೀರಿನ ಮಟ್ಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯ ಕೆಆರ್‌ಎಸ್‌ನಿಂದ ನದಿಗೆ 9,252 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮತ್ತೊಂದೆಡೆ, ಜಲಾಶಯಕ್ಕೆ 2,666 ಕ್ಯೂಸೆಕ್‌ನಷ್ಟು ಮಾತ್ರ ಒಳಹರಿವು ದಾಖಲಾಗುತ್ತಿದೆ.

ಹೇಮಾವತಿಯಿಂದ ಹೊರಹರಿವು ಹೆಚ್ಚಳ, ಕೆಆರ್​ಎಸ್​ಗೆ ಒಳಹರಿವು ಕಡಿಮೆ!

ಹೇಮಾವತಿ ಜಲಾಶಯದಿಂದ ಹರಿಯಬಿಟ್ಟ ನೀರೇ ಕೆಆರ್‌ಎಸ್‌ಗೆ ಬರುವುದು. ಹೀಗಾಗಿ ಸದ್ಯ ಕೆಆರ್‌ಎಸ್‌ಗೆ ಬರುತ್ತಿರುವ ನೀರಿನ ಪ್ರಮುಖ ಮೂಲ ಹೇಮಾವತಿ ಜಲಾಶಯ. ವರದಿಯ ಪ್ರಕಾರ, ಹೇಮಾವತಿ ಜಲಾಶಯದಿಂದ ಸುಮಾರು 4,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕೆಆರ್‌ಎಸ್‌ಗೆ 2,600 ಕ್ಯೂಸೆಕ್ ಒಳಹರಿವು ಎಂದು ಲೆಕ್ಕ ನೀಡಲಾಗುತ್ತಿರುವ ಬಗ್ಗೆ ಪ್ರಶ್ನೆಗಳು ಮೂಡಿವೆ. ನೀರಿನ ಲೆಕ್ಕಾಚಾರದಲ್ಲಿ ಅಧಿಕಾರಿಗಳು ಸ್ಪಷ್ಟತೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

ಕೆಆರ್​​ಎಸ್ ಡ್ಯಾಂ ನೀರಿನ ಮಟ್ಟ ಕುಸಿತದಿಂದ ರೈತರಲ್ಲಿ ಹೆಚ್ಚಿದ ಆತಂಕ

ಕೆಆರ್‌ಎಸ್ ಮಾತ್ರವಲ್ಲದೆ ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಮಳೆ ಕೊರತೆ ಮುಂದುವರಿದರೆ ಜಲಾಶಯಗಳ ನೀರಿನ ಸಂಗ್ರಹ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯ ಬಗ್ಗೆಯೂ ಆತಂಕ ಎದುರಾಗಿದೆ. ವಿಶೇಷವಾಗಿ ಬೆಂಗಳೂರಿನ ಕುಡಿಯುವ ನೀರಿನ ಪ್ರಮುಖ ಮೂಲಗಳಲ್ಲಿ ಒಂದಾಗಿರುವ ಕೆಆರ್‌ಎಸ್‌ನ ಜಲಾಶಯವೂ ಒಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಆರ್​ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ

ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಸದ್ಯ ನೀರಿನ ಮಟ್ಟ 108.16 ಅಡಿಯಲ್ಲಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿಯಾಗಿದ್ದು, ಪ್ರಸ್ತುತ 29.911 ಟಿಎಂಸಿ ನೀರು ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹಾಗೂ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗದಿದ್ದರೆ ನೀರಿನ ಸಂಗ್ರಹ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿವು, ಕೃಷಿ ಬಳಕೆ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳ ನಡುವೆ ನೀರಿನ ನಿರ್ವಹಣೆ ಸವಾಲಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:05 am, Fri, 4 September 26

Loading...
Unable to load recommendations.
Follow Us