ಮಂಡ್ಯ ಗಲಭೆ: ನಾಗಮಂಗಲಕ್ಕೆ ಬಾರದಂತೆ ಪ್ರಮೋದ್ ಮುತಾಲಿಕ್​ಗೆ ನಿರ್ಬಂಧ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವದ ವೇಳೆ ಗಲಾಟೆ ನಡೆದು, ಅದು ಕೋಮುಗಲಭೆಯ ರೂಪ ತಾಳಿದೆ. ಈ ಘಟನೆಯ ಬಗ್ಗೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮಂಡ್ಯದಲ್ಲಿ ಶಾಂತಿ ಸ್ಥಾಪನೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು ಪ್ರಮೋದ್ ಮುತಾಲಿಕ್ ಮಂಡ್ಯಕ್ಕೆ ಆಗಮಿಸದಂತೆ ಸೂಚನೆ ನೀಡಿದ್ದಾರೆ.

ಮಂಡ್ಯ ಗಲಭೆ: ನಾಗಮಂಗಲಕ್ಕೆ ಬಾರದಂತೆ ಪ್ರಮೋದ್ ಮುತಾಲಿಕ್​ಗೆ ನಿರ್ಬಂಧ
ಮಂಡ್ಯದ ನಾಗಮಂಗಲದಲ್ಲಿ ಪೊಲೀಸ್ ಭದ್ರತೆ
Follow us
| Updated By: ಸುಷ್ಮಾ ಚಕ್ರೆ

Updated on: Sep 13, 2024 | 3:18 PM

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಉಂಟಾಗಿರುವ ಕೋಮುಗಲಭೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಗಣಪತಿ ಉತ್ಸವದ ಮೆರವಣಿಗೆ ವೇಳೆ ಬುಧವಾರ ರಾತ್ರಿ ಕೆಲವು ಜನರು ಕಲ್ಲು ತೂರಾಟ ನಡೆಸಿದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ಸೃಷ್ಟಿಸಿದ್ದರು. ಬಳಿಕ ಮಚ್ಚು, ಲಾಂಗ್ ತೋರಿಸಿ, ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದರು. ಈ ಕೃತ್ಯಕ್ಕೆ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿ, ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದರು.

ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ನಾಯಕ ಪ್ರಮೋದ್ ಮುತಾಲಿಕ್‌ ಇಂದು ನಾಗಮಂಗಲಕ್ಕೆ ಆಗಮಿಸುವುದಾಗಿ ತಿಳಿಸಿದ್ದರು. ಆದರೆ, ಅವರಿಗೆ ನಾಗಮಂಗಲಕ್ಕೆ ಬಾರದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಹೀಗಾಗಿ, ಇಂದು ನಾಗಮಂಗಲದಲ್ಲಿ ಗಲಭೆ ನಡೆದ ಸ್ಥಳಕ್ಕೆ ಬರುವ ಪ್ಲಾನ್ ಹಾಕಿಕೊಂಡಿದ್ದ ಮುತಾಲಿಕ್ ತಮ್ಮ ಭೇಟಿಯನ್ನು ರದ್ದುಪಡಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಭುಗಿಲೆದ್ದ ಗಲಭೆ: ನಿಷೇಧಾಜ್ಞೆ, ಶಾಲೆ-ಕಾಲೇಜುಗಳಿಗೆ ರಜೆ

ಬದ್ರಿಕೊಪ್ಪಲಿನಲ್ಲೂ ನಿಷೇಧಾಜ್ಞೆ:

ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಗಣಪತಿ ಮಂಟಪ ಇದ್ದ ಬದ್ರಿಕೊಪ್ಪಿನಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬದ್ರಿಕೊಪ್ಪಲು ಹೆಬ್ಬಾಗಿಲಿನಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಬಂಧನದ ಭೀತಿಯಿಂದ ಇಲ್ಲಿನ ಯುವಕರು ಗ್ರಾಮವನ್ನೇ ತೊರೆದು ಹೋಗುತ್ತಿದ್ದಾರೆ. ಹೀಗಾಗಿ, ಬದ್ರಿಕೊಪ್ಪಲು ಗ್ರಾಮ ಬಿಕೋ ಎನ್ನುತ್ತಿದೆ.

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ದರ್ಗಾ ಬಳಿ ನಡೆದ ಗಲಭೆಯಲ್ಲಿ 20ಕ್ಕೂ ಅಧಿಕ ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು. ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂದೂಗಳ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದಂತೆ ಮುಸ್ಲಿಮರ ಗುಂಪು ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಗಲಾಟೆಯೆಬ್ಬಿಸಿದ್ದರು. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು.

ಇದನ್ನೂ ಓದಿ: ಮಂಡ್ಯ ಗಣೇಶ ಮೆರವಣಿಗೆ ಗಲಭೆ ಕೇಸ್​: 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಈಗಾಗಲೇ ಈ ಕೋಮು ಗಲಭೆಗೆ ಸಂಬಂಧಿಸಿದಂತೆ ನಾಗಮಂಗಲ ಪೊಲೀಸ್ ಇನ್​ಸ್ಪೆಕ್ಟರ್ ಅಶೋಕ್ ಅವರನ್ನು ಅಮಾನತು ಮಾಡಲಾಗಿದೆ. ಈ ಗಲಭೆ ಸಂಬಂಧ 150 ಜನರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ