
ಮಂಡ್ಯ, ಆ.26: ವಿಚಾರಣಾಧೀನ ಕೈದಿಯೊಬ್ಬ ಬೆನ್ನು ನೋವಿನ ನೆಪ ಹೇಳಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಗೆಳತಿಯೊಂದಿಗೆ ರಾಜ್ಯಾತಿಥ್ಯ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು (DAR) ಪಡೆಯ ಪೇದೆ ಚಂದ್ರು ಎಂಬುವವರನ್ನು ಸಸ್ಪೆಂಡ್ ಮಾಡಿ ಮಂಡ್ಯ ಎಸ್ಪಿ ಡಾ. ಶೋಭಾರಾಣಿ ಅವರು ಆದೇಶ ಹೊರಡಿಸಿದ್ದಾರೆ.
ಆರೋಪಿ ಮಹಮದ್ ಹುಸೇನ್ ಎಂಬಾತ ಬೆನ್ನು ನೋವಿನ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದನು. ಬಳಿಕ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ತನ್ನ ಗೆಳತಿಯೊಂದಿಗೆ ಉಳಿದುಕೊಂಡು ರಾಜ್ಯಾತಿಥ್ಯ ಅನುಭವಿಸುತ್ತಿದ್ದನು.
ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ್ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಇದನ್ನು ಕಂಡು ಆಕ್ರೋಶಗೊಂಡ ನ್ಯಾಯಾಧೀಶರು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ದೆಹಲಿಯಲ್ಲಿ 2,300 ದಾಟಿದ ಹಂದಿ ಜ್ವರ ಪ್ರಕರಣಗಳು: ಭಯಪಡಬೇಡಿ, ಇದು ಹೊಸ ತಳಿಯಲ್ಲ ಎಂದ ಐಸಿಎಂಆರ್
ನ್ಯಾಯಾಧೀಶರ ಸೂಚನೆಯ ಬೆನ್ನಲ್ಲೇ ಸಕ್ರಿಯರಾದ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ತಕ್ಷಣ ಮಂಡ್ಯ ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕರ್ತವ್ಯ ಲೋಪದ ಬಗ್ಗೆ ಸ್ವತಃ ಪರಿಶೀಲಿಸಿದ ಡಿಜಿಪಿ, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರತರಲು ಡಿಐಜಿ ಕಾರಾಗೃಹ (ದಕ್ಷಿಣ ವಲಯ) ದಿವ್ಯಾಶ್ರೀ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ