ಮುಡಾ ಹಗರಣ: ಸೈಟ್ ವಾಪಸ್ ಕೊಟ್ಟರೆ ಸಿದ್ದರಾಮಯ್ಯ ಸಂಕಷ್ಟ ಕಡಿಮೆಯಾಗುತ್ತಾ? ಕಾನೂನು ತಜ್ಞರು ಹೇಳಿದ್ದಿಷ್ಟು

ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯರ ಪತ್ನಿ ಪಾರ್ವತಿ ನಿವೇಶನ ವಾಪಸ್ ನೀಡಲು ನಿರ್ಧರಿಸಿದ್ದಾರೆ. ಮುಡಾಕ್ಕೆ ಪತ್ರ ಬರೆದು ಪ್ರಸ್ತಾಪ ಮಾಡಿದ್ದಾರೆ. ಇದಾದ ನಂತರ ಸಿದ್ದರಾಮಯ್ಯ ಅವರಿಗೆ ಇಡಿ ತನಿಖೆಯಿಂದ ರಿಲೀಫ್ ಸಿಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಇಡಿ ಮಾಜಿ ಜಂಟಿ ನಿರ್ದೇಶಕ ಸತ್ಯೇಂದ್ರ ಸಿಂಗ್ ‘ಟಿವಿ9’ ಜತೆ ಮಾತನಾಡಿದ್ದಾರೆ. ವಿವರ ಇಲ್ಲಿದೆ.

ಮುಡಾ ಹಗರಣ: ಸೈಟ್ ವಾಪಸ್ ಕೊಟ್ಟರೆ ಸಿದ್ದರಾಮಯ್ಯ ಸಂಕಷ್ಟ ಕಡಿಮೆಯಾಗುತ್ತಾ? ಕಾನೂನು ತಜ್ಞರು ಹೇಳಿದ್ದಿಷ್ಟು
ಮುಡಾ ಸೈಟ್ ವಾಪಸ್ ಕೊಟ್ಟರೆ ಸಿದ್ದರಾಮಯ್ಯ ಸಂಕಷ್ಟ ಕಡಿಮೆಯಾಗುತ್ತಾ?

Updated on: Oct 01, 2024 | 2:36 PM

ಬೆಂಗಳೂರು, ಅಕ್ಟೋಬರ್ 1: ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಸೈಟ್ ಹಿಂದಿರುಗಿಸುವ ಕ್ರಮದಿಂದ ಪ್ರಯೋಜನವಾಗಲಿದೆಯೇ? ಈ ಪ್ರಶ್ನೆ ಸದ್ಯ ಉದ್ಭವಿಸಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಹಣಕಾಸು ಅವ್ಯವಹಾರದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದೆ. ಈ ನಡುವೆ 14 ಸೈಟ್​ಗಳನ್ನು ಮುಡಾಕ್ಕೆ ಹಿಂದಿರುಗಿಸಲು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮುಂದಾಗಿದ್ದಾರೆ.

ಈ ಸಂಬಂಧ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಮುಡಾದಿಂದ ಪಡೆದಿರುವ ನಿವೇಶನಗಳನ್ನು ಹಿಂದಿರುಗಿಸುತ್ತೇನೆ ಎಂದು ಪಾರ್ವತಿ ಹೇಳಿದ್ದಾರೆ. ನನಗೆ ಪತಿಯೇ ಹೆಚ್ಚು, ಹೀಗಾಗಿ ನನಗೆ ಮಂಜೂರು ಮಾಡಿರುವ 14 ನಿವೇಶನಗಳನ್ನು ವಾಪಸ್ ಕೊಡುತ್ತೇನೆ ಎಂದು ಪಾರ್ವತಿ ಮುಡಾಗೆ ತಿಳಿಸಿದ್ದಾರೆ.

ಪಾರ್ವತಿ ಅವರ ಈ ನಿರ್ಧಾರಕ್ಕೆ ಮುಡಾದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಪತ್ರದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಅವರ (ಪಾರ್ವತಿ) ನಿರ್ಧಾರ. ಆದರೆ ನಾನು ಕೂಡ ಸುದೀರ್ಘ ಕಾನೂನು ಹೋರಾಟಕ್ಕೆ ಸಿದ್ಧ ಎಂದು ಹೇಳಿದ್ದಾರೆ.

ಇಡಿ ತನಿಖೆಯಿಂದ ಸಿಗಲಿದೆಯೇ ರಿಲೀಫ್?

ಸೈಟ್ ವಾಪಸ್ ಕೊಡುವ ಪಾರ್ವತಿಯವರ ನಿರ್ಧಾರದಿಂದ ಸಿದ್ದರಾಮಯ್ಯನವರಿಗೆ ಮುಡಾ ಹಗರಣದಲ್ಲಿ ರಿಲೀಫ್ ಸಿಗುತ್ತಾ ಎಂಬುದೇ ದೊಡ್ಡ ಪ್ರಶ್ನೆ. ಮುಡಾದಲ್ಲಿ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಪಿಎಂಎಲ್‌ಎ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.

ಈ ವಿಚಾರವಾಗಿ ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ಸತ್ಯೇಂದ್ರ ಸಿಂಗ್ ‘ಟಿವಿ-9 ಭಾರತ್ ವರ್ಷ್‌’ಗೆ ಪ್ರತಿಕ್ರಿಯಿಸಿದ್ದಾರೆ. ಸೈಟ್ ಹಿಂದಿರುಗಿಸುವುದು ಈ ಪ್ರಕರಣದಲ್ಲಿ ಇಡಿ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಸೈಟ್ ಹಿಂದಿರುಗಿಸುವುದರಿಂದ ಕೃತ್ಯ ನಡೆದಿಲ್ಲ ಎಂದು ಹೇಳಲಾಗುವುದಿಲ್ಲ. ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಸುಳ್ಳು ದಾಖಲೆ ನೀಡಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ ಎಂಬ ಆರೋಪವಿದ್ದು, ತನಿಖೆ ಮುಂದುವರಿಯಲಿದೆ ಎಂದು ಸತ್ಯೇಂದ್ರ ಸಿಂಗ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ದಾಖಲಾಗಿರುವ ಮೂಲ ಎಫ್ಐಆರ್ ಅನ್ನು ಲೋಕಾಯುಕ್ತರು ದಾಖಲಿಸಿದ್ದಾರೆ. ಈಗ ಅದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದ್ದು, ಸಂಪೂರ್ಣ ತನಿಖೆ ನಡೆಸಲಿದೆ. ಇಲ್ಲಿ, ಸೈಟ್ ವಾಪಸ್ ಕೊಡುವುದು ಮುಖ್ಯವಾದ ವಿಚಾರವೇ ಅಲ್ಲ ಎಂದು ಸತ್ಯೇಂದ್ರ ಸಿಂಗ್ ಹೇಳಿದ್ದಾರೆ.

ತನಿಖೆ ಪ್ರಾರಂಭವಾದ ನಂತರ, ಹೇಗಾದರೂ ಮುಡಾಗೆ ಸೇರಿದ ಭೂಮಿಯನ್ನು ಇಡಿ ವಶಪಡಿಸಿಕೊಳ್ಳುತ್ತದೆ. ಏಕೆಂದರೆ ಪ್ರಕರಣವು ಭೂಮಿಗೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದ, ಸಿಎಂ ಕುಟುಂಬದವರು ಈಗಾಗಲೇ ಭೂಮಿಯನ್ನು ಹಿಂದಿರುಗಿಸಲು ನಿರ್ಧರಿಸಿರುವ ಸಾಧ್ಯತೆಯಿದೆ ಎಂದೂ ಸತ್ಯೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮುಡಾ ಪ್ರಕರಣದಲ್ಲಿ ಮುಂದೇನಾಗಲಿದೆ?

ಸದ್ಯ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಇಡಿ ಈ ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆಗೆ ಕರೆಸಲಿದೆ. ಇದಾದ ನಂತರ ತನಿಖೆ ಮುಂದುವರಿಯಲಿದೆ ಎಂದು ಕುರಿತು ಸತ್ಯೇಂದ್ರ ಸಿಂಗ್ ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಎ1 ಆರೋಪಿ ಎಂದು ಹೆಸರಿಸಲಾಗಿದೆ. ಹೀಗಿರುವಾಗ ತನಿಖಾ ಸಂಸ್ಥೆ ಮೊದಲು ಸಿದ್ದರಾಮಯ್ಯನವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಬಹುದು ಎನ್ನಲಾಗುತ್ತಿದೆ.

ಬಂಧನಕ್ಕೊಳಗಾಗುತ್ತಾರಾ ಸಿದ್ದರಾಮಯ್ಯ?

ಸಿದ್ದರಾಮಯ್ಯ ಅವರನ್ನು ಇಡಿ ಬಂಧಿಸಬಹುದೇ ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಮೂಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಇಡಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕಾರಣ ಈ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: ಮುಡಾ ಹಗರಣ: 14 ಸೈಟ್​ಗಿಂತ ಹಳೆ ದೊಡ್ಡ ಕೇಸ್ ಇದೆಯೆಂದು ದಾಖಲೆ ತೋರಿಸಿದ ಕುಮಾರಸ್ವಾಮಿ

ಇಡಿ ಎರಡು ಸಂದರ್ಭಗಳಲ್ಲಿ ಆರೋಪಿಗಳನ್ನು ಬಂಧಿಸುತ್ತದೆ. ಮೊದಲನೆಯದಾಗಿ, ಆರೋಪಿಯು ತನಿಖೆಗೆ ಸಹಕರಿಸುವುದಿಲ್ಲ ಎಂದಾಗ ಮತ್ತು ಎರಡನೆಯದಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದಾಗ. ಹಿಗಾಗಿ ಮುಡಾದಲ್ಲಿ ಸಿದ್ದರಾಮಯ್ಯ ಬಂಧನವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:23 pm, Tue, 1 October 24

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us