ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಮುನಿರತ್ನ

|

Updated on: Sep 14, 2024 | 5:08 PM

ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ವಿರುದ್ಧ ಸದ್ಯ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಟಿವಿ9 ಜೊತೆ ಮಾತನಾಡಿರುವ ಶಾಸಕ ಮುನಿರತ್ನ, ನಾನು ಎಲ್ಲೂ ನಾಪತ್ತೆಯಾಗಿಲ್ಲ. ಆಡಿಯೋ ನನ್ನದೇ ಎಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಮುನಿರತ್ನ
ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಮುನಿರತ್ನ
Follow us on

ಬೆಂಗಳೂರು, ಸೆಪ್ಟೆಂಬರ್​ 14: ತ್ಯಾಜ್ಯ ವಿಲೇವಾರಿ ಗುತ್ತಿಗೆ ವಿಚಾರವಾಗಿ ಗುತ್ತಿಗೆದಾರ ಚಲುವರಾಜುಗೆ ಶಾಸಕ ಮುನಿರತ್ನ (Munirathna) ಅವಾಚ್ಯವಾಗಿ ನಿಂದಿಸಿರೋದು ಆಡಿಯೋದಲ್ಲಿ ಬಯಲಾಗಿತ್ತು. ಶಾಸಕ ಮುನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ 2 ಎಫ್​ಐಆರ್​ ಕೂಡ ದಾಖಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದು, ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ನನ್ನನ್ನು ಮುಗಿಸಲು ಷಡ್ಯಂತ್ರ

ಟಿವಿ9 ಜೊತೆ ಮಾತನಾಡಿದ ಅವರು, ಆಡಿಯೋ ತಗೊಂಡು ಈಗಲೇ ಸ್ಪೀಕರ್‌ ಕಚೇರಿಗೆ ಚಲುವರಾಜ್ ಬರಲಿ. 2 ಸಮುದಾಯ ಸೇರಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಇದೇ ಚಲುವರಾಜ್‌ ನನ್ನನ್ನು ಶ್ಲಾಘಿಸಿದ್ದರು. 7-8 ವರ್ಷಗಳಿಂದ ನನ್ನ ಜೊತೆಯಲ್ಲಿದ್ದರು, ಈಗ ನಾನು ಹಣ ಕೇಳ್ತೀನಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ಮುನಿರತ್ನ ನಮ್ಮ ಅಭ್ಯರ್ಥಿಗೆ ಬೆದರಿಕೆ ಹಾಕಿದ್ದರು: ಡಿಕೆ ಸುರೇಶ್​​

ರಾಜಕೀಯ ಪಿತೂರಿಯಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತಿಂಗಳ ಹಿಂದೆ ನನ್ನ ಬಳಿ ಬಂದು ಯಾರೋ ಹಲ್ಲೆ ಮಾಡಿದ್ದರು ಅಂದಿದ್ದರು. ನಾನು ಎಲ್ಲೂ ನಾಪತ್ತೆಯಾಗಿಲ್ಲ. ನನ್ನ ಸ್ನೇಹಿತರ ಮೂಲಕ ಭೇಟಿ ಮಾಡಲು ಚಲುವರಾಜ್‌ ಯತ್ನಿಸಿದ್ದರು ಎಂದಿದ್ದಾರೆ.

ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದಕ್ಕೆ ನಾನು ಕೆಟ್ಟವನಾಗಿದ್ದೇನೆ

ನನ್ನ ಬಾಯಿ ಶುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿಎಂರವರು ಮೊದಲು ತಮ್ಮ ಜೊತೆ ಇರುವವರ ಬಾಯಿ ಮುಚ್ಚಿಸಲಿ. ನಾನು ಕಾನೂನಿನ ಮೊರೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರನಿಗೆ ಜೀವ ಬೆದರಿಕೆ: ಮುನಿರತ್ನ ವಿರುದ್ಧ ಎರಡು ಎಫ್ಐಆರ್​​

ನಾನು ಯಾವುದೇ ರೀತಿ ಭ್ರಷ್ಟಾಚಾರ ನಡೆಸಿಲ್ಲ. ಕಾಂಗ್ರೆಸ್‌ನಲ್ಲಿದ್ದಾಗ ನಾನು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದೆ. ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದಕ್ಕೆ ನಾನು ಕೆಟ್ಟವನು ಆಗಿಬಿಟ್ಟಿದ್ದೇನೆ ಎಂದಿದ್ದಾರೆ.

ಬಂಧನ ಭೀತಿ

ವೈಯಾಲಿಕಾವಲ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾದ ಹಿನ್ನೆಲೆ ಶಾಸಕ ಮುನಿರತ್ನಗೆ ಬಂಧನ ಭೀತಿ ಶುರುವಾಗಿದೆ. ನಾಪತ್ತೆಯಾಗಿರುವ ಶಾಸಕ ಮುನಿರತ್ನಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುನಿರತ್ನ ಕುರಿತು ಕೇಂದ್ರ ವಿಭಾಗ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.