ರಾಜ್ಯಸಭಾ ಸದಸ್ಯ ಜಗ್ಗೇಶ್ ಯಾಕೆ ಹುಲಿ ಉಗುರು ಧರಿಸಿದ್ದರು ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

| Updated By: Digi Tech Desk

Updated on: Oct 26, 2023 | 12:40 PM

ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್​ ಅವರು ಸಹ ಹುಲಿ ಉಗುರು ಹೊಂದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಜಗ್ಗೇಶ್ ಯಾಕೆ ಹುಲಿ ಉಗುರು ಧರಿಸಿದ್ದರು ಅನ್ನೋದು ಗೊತ್ತಿಲ್ಲ. ಪೊಲೀಸ್ ಇಲಾಖೆ ಜೊತೆ ಮಾಹಿತಿ ಪಡೆದು ಮಾತಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯ ಜಗ್ಗೇಶ್ ಯಾಕೆ ಹುಲಿ ಉಗುರು ಧರಿಸಿದ್ದರು ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ
ರಾಜ್ಯಸಭಾ ಸದಸ್ಯ ಜಗ್ಗೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಮೈಸೂರು, ಅಕ್ಟೋಬರ್​​​ 25: ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಬಿಗ್​​ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್​ಗೆ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಮನೆಯಿಂದಲೇ ಬಂಧನವಾಗಿದ್ದ ಸಂತೋಷ್ ಸದ್ಯ ಜೈಲಿನಲ್ಲಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹುಲಿ ಉಗುರು ವಿಚಾರವಾಗಿ ಸದ್ಯ ಬೇರೆ ಬೇರೆ ಅವರ ಹೆಸರುಗಳು ಸಹ ಕೇಳಿಬರುತ್ತಿವೆ. ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್​ (Jaggesh) ಅವರು ಸಹ ಹುಲಿ ಉಗುರು ಹೊಂದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಜಗ್ಗೇಶ್ ಯಾಕೆ ಹುಲಿ ಉಗುರು ಧರಿಸಿದ್ದರು ಅನ್ನೋದು ಗೊತ್ತಿಲ್ಲ. ಪೊಲೀಸ್ ಇಲಾಖೆ ಜೊತೆ ಮಾಹಿತಿ ಪಡೆದು ಮಾತಾಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ಪುತ್ರ ಧರಿಸಿದ್ದು ಹುಲಿ ಉಗುರು ಅಲ್ಲ: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್

ವಿಜಯಪುರ ಜಿಲ್ಲೆಯಲ್ಲೂ ಕೆಲವರು ಹುಲಿ ಉಗುರು ಧರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರನಿಂದ ಹುಲಿ ಉಗುರು ಹೊಂದಿದ್ದ ಪೆಂಡೆಂಟ್ ಧರಿಸಿದ್ದ ಫೋಟೋಗಳು ವೈರಲ್​ ಆಗಿದ್ದವು. ಸದ್ಯ ಈ ಕುರಿತಾಗಿ ವಿಜುಗೌಡ ಪ್ರತಿಕ್ರಿಯೆ ನೀಡಿದ್ದು, ನನ್ನ ಪುತ್ರ ಧರಿಸಿದ್ದು ಹುಲಿ ಉಗುರು ಅಲ್ಲ. ಅದು ನಕಲಿ ಹುಲಿ ಉಗುರು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಹುಲಿ ಚರ್ಮದ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ವಿನಯ್ ಗುರೂಜಿ, ಅದು ಎಲ್ಲಿಂದ ಬಂತು? ಈಗ ಎಲ್ಲಿದೆ? ಇಲ್ಲಿದೆ ವಿವರ

7 ವರ್ಷಗಳ ಹಿಂದೆ ನಕಲಿ ಹುಲಿ ಉಗುರು ಖರೀದಿಸಿ ಪೆಂಡೆಂಟ್, ಚೈನ್ ಮಾಡಿದ್ದೇವು. ಅರಣ್ಯ ಇಲಾಖೆ ಅಧಿಕಾರಿಗಳು ಬೇಕಾದರೆ ತನಿಖೆ ಮಾಡಲಿ. ನಾವು ತನಿಖೆಗೆ ಸಿದ್ಧ. ಸಂಬಂಧಿಸಿದ ಅಧಿಕಾರಿಗಳು ಕೇಳಿದರೆ ಚೈನ್ ತೋರಿಸುತ್ತೇವೆ. ನಮಗೆ ಕಾನೂನಿನ ಅರಿವು ಇದೆ. ನಮ್ಮ ಕುಟುಂಬ ಕಾನೂನು ಪಾಲಿಸುತ್ತದೆ. ನಾನು ಚಿಲ್ಲರೇ ರಾಜಕಾರಣ ಮಾಡಲ್ಲ ಎಂದು ಹೇಳಿದ್ದಾರೆ.

ನಮ್ಮ ಮಗನ ಫೋಟೋ ಇಟ್ಟುಕೊಂಡು ಕೆಲವರು ಚಿಲ್ಲರೇ ರಾಜಕಾರಣ ಮಾಡುತ್ತಿದ್ದಾರೆ. ಅವರದ್ದು ನನ್ನ ಬಳಿ ಬಹಳ ಇದೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಎಂ.ಬಿ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನತಾ ಪಕ್ಷದದಿಂದ ಮುಖ್ಯ ಅರಣ್ಯಾಧಿಕಾರಿಗಳಿಗೆ ದೂರು

ಕಾಡು ಪ್ರಾಣಿಯ ಚರ್ಮ, ಉಗುರು ಯಾರೇ ಬಳಸುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಬಿಜೆಪಿ ರಾಜ್ಯ‌ಸಬಾ ಸದಸ್ಯ ಜಗ್ಗೇಶ್ ಅವರೇ ಹುಲಿ ಉಗುರು ಬಳಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸರ್ಕಾರ ಕೇವಲ ಬಡವರ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದೆ ಎಂದು ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್ ಹೇಳಿದ್ದಾರೆ.

ಇದನ್ನೂ ಓದಿ: ಹುಲಿ ಉಗುರಿನ ಲಾಕೆಟ್ ಧರಿಸಿದವರ ಫೋಟೋ ವೈರಲ್: ಖಡಕ್ ಎಚ್ಚರಿಕೆ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ

ಈ ಹಿಂದೆ ಮಂತ್ರಿಯ ಮನೆಯಲ್ಲಿ ಕಾಡು ಪ್ರಾಣಿ ಪತ್ತೆಯಾಗಿತ್ತು. ಏನು ಕ್ರಮ ಕೈಗೊಂಡಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಅಧ್ಯಕ್ಷರಾಗಿರುವ ಪ್ರಧಾನಿ ಮೋದಿಗೂ ನಾವು ನೋಟಿಸ್ ಕೊಡುತ್ತೇವೆ. ಅರಣ್ಯ ಸಚಿವರಿಗೂ‌ ನಾವು ಮನವಿ ಕೊಡುತ್ತೇವೆ. ಹುಲಿ ಉಗುರು ಎಲ್ಲಾ ರಾಜಕಾರಣಿಗಳ ಬಳಿ ಇದೆ. ಹುಲಿ ಉಗುರು ಬಳಸಿದರೆ ರಾಜನಂತೆ ಮೆರೆಯಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅದೇ ಕಾರಣಕ್ಕೆ ರಾಜಕಾರಣಿಗಳು ಹುಲಿ ಉಗುರು ಬಳಸುತ್ತಾರೆ. ಎಲ್ಲರ ಮೇಲೂ ಕ್ರಮವನ್ನ ಜರುಗುಸಿಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:06 pm, Wed, 25 October 23