ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ: ಅರಣ್ಯ ಸಿಬ್ಬಂದಿ, ಪೊಲೀಸರ ದೌಡು

| Updated By: ಗಣಪತಿ ಶರ್ಮ

Updated on: Mar 04, 2023 | 3:50 PM

ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಡ್ಗಿಚ್ಚಿನಿಂದ ಬೆಂಕಿ ಹಬ್ಬಿರುವ ಶಂಕೆ ವ್ಯಕ್ತವಾಗಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ: ಅರಣ್ಯ ಸಿಬ್ಬಂದಿ, ಪೊಲೀಸರ ದೌಡು
ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ
Follow us on

ಮೈಸೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಕಾಡ್ಗಿಚ್ಚಿನ (fire) ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಕೆಲದಿನಗಳಲ್ಲಿ ನೂರಾರಾ ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಅದೇ ರೀತಿಯಾಗಿ ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಡ್ಗಿಚ್ಚಿನಿಂದ ಬೆಂಕಿ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಕುರುಬರಹಳ್ಳಿಯ ಕಾವೇರಿ ನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸುಬ್ರಹ್ಮಣ್ಯ ಎಂಬುವರಿಗೆ ಸೇರಿದ ಕಾರು ಮತ್ತು ಬೈಕ್​ಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿ ಪರಾರಿಯಾಗಿದ್ದಾರೆ. ಬೆಂಕಿ ಹೊತ್ತಿ ಉರಿಯುವಾಗ ಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎರಡು ಜನ ದುಷ್ಕರ್ಮಿಗಳು ಸೇರಿ ಸುಬ್ರಹ್ಮಣ್ಯ ಅವರ ಟಿಯುವಿ 300(TUV 300) ಕಾರು ಹಾಗೂ ಬೈಕ್​ಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.

ಬಂಡಿಪುರ ಅರಣ್ಯದಲ್ಲಿ ಕಾಡ್ಗಿಚ್ಚು

ಚಾಮರಾಜನಗರ: ಬಂಡಿಪುರ ಅರಣ್ಯದಲ್ಲಿ ಕಾಡ್ಗಿಚ್ಚಿನಿಂದ ಬೆಂಕಿ ಹೊತ್ತುಕೊಂಡಿದ್ದು, ಹತ್ತಾರು ಎಕರೆ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು  ಅರಣ್ಯ ಸಿಬ್ಬಂದಿಗಳು ಹರಸಾಹಸಪಟ್ಟಿದ್ದಾರೆ. ದಟ್ಟ ಹೊಗೆಯಿಂದ ಆತಂಕ ಹೆಚ್ಚಿದೆ.

ಹೊತ್ತಿ ಉರಿದ ನೂರಾರು ಎಕರೆ ಅರಣ್ಯ ಪ್ರದೇಶ

ಬೆಂಗಳೂರು ಗ್ರಾಮಾಂತರ: ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿರುವಂತಹ ಘಟನೆ ಜಿಲ್ಲೆ‌ಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಳೆದ ಅರ್ಧ ಗಂಟೆಗೂ ಹೆಚ್ಚುಕಾಲದಿಂದ ಬೆಂಕಿ ಉರಿಯುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ ಮರ ಗಿಡ ಸೇರಿ ಅರಣ್ಯ ಸಂಪತ್ತು ನಾಶವಾಗಿದೆ. ಹೆದ್ದಾರಿಯಲ್ಲಿ ಬಂದ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Video: ಟ್ರಕ್​​ನಲ್ಲಿ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಎಲೆಕ್ಟ್ರಿಕ್​ ಸ್ಕೂಟರ್​​ಗಳಿಗೆ ಬೆಂಕಿ; ಧಗಧಗನೆ ಹೊತ್ತಿ ಉರಿದ 20 ವಾಹನಗಳು !

ಸ್ಥಳಿಯರಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಯಿಂದ ಅರಣ್ಯ ಪ್ರದೇಶ ನಾಶ ತಪ್ಪಿದೆ. ಸಕಾಲದಲ್ಲಿ ಬೆಂಕಿ ನಂದಿಸಿದ ಕಾರಣ ಅರಣ್ಯಕ್ಕೆ ಹಾನಿಯಾಗಿಲ್ಲ ಅಂತ ಅರಣ್ಯಾಧಿಕಾರಿ ಪುಪ್ಪಲತಾ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.

ಬೆಟ್ಟದ ತಪ್ಪಲಿನಲ್ಲಿ ಧಗಧಗಿಸಿದ ಬೆಂಕಿ

ರಾಯಚೂರು: ಬೆಟ್ಟದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿರುವ ಘಟನೆ ನಗರದ ಐಡಿಎಸ್​ಎಂಡಿ ಲೇಔಟ್​ ಬಳಿ ನಡೆಯುತ್ತಿದೆ. ಸಂಜೆ ವೇಳೆ ಬೆಟ್ಟದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಈವರೆಗೆ ಸ್ಥಳಕ್ಕೆ ಬಾರದೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಆಕಸ್ಮಿಕ ಬೆಂಕಿಯಿಂದ ಅಪಾರ ಪ್ರಮಾಣದ ವನ್ಯಸಂಪತ್ತು ಭಸ್ಮವಾಗುತ್ತಿರುವುದನ್ನು ನೋಡಿದ ಮೂವರು ಯುವಕರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅದಾಗ್ಯೂ, ಒಂದು ಬದಿಯಿಂದ ಮತ್ತೊಂದು ಬದಿಗೆ ಬೆಂಕಿ ವ್ಯಾಪಿಸುತ್ತಿರುವುದನ್ನು ನೋಡಿ ಸ್ಥಳೀಯರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಎಲ್ಲೇ ಬೆಂಕಿ ಬಿದ್ರೂ ಮೊಬೈಲ್​ಗೆ ಮೆಸೇಜ್: ಕಾಡ್ಗಿಚ್ಚು ನಿಯಂತ್ರಣಕ್ಕೆ ಹೊಸ ಪ್ಲಾನ್!

ಆಕಾಶದೆತ್ತರದ ಬೆಂಕಿ ಕೆನ್ನಾಲಿಗೆಗೆ ಗಿಡಗಳು ಸುಟ್ಟು ಹೋಗುತ್ತಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಾರದ ಹಿನ್ನಲೆ ಕಗ್ಗತ್ತಲಲ್ಲಿ ನಡೆದುಕೊಂಡು ಬೆಟ್ಟವೇರಿದ ಮೂವರು ಯುವಕರು ಕೈಯಲ್ಲಿ ಹಸಿ ಗಿಡಗಳನ್ನ ಹಿಡಿದುಕೊಂಡು ಬೆಂಕಿ ಆರಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:35 pm, Sat, 4 March 23