ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹುಲಿ ದಾಳಿ: ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 01, 2023 | 3:11 PM

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹುಲಿ ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಹೆಚ್​.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಬಳಿ ನಡೆದಿದೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹುಲಿ ದಾಳಿ: ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು
ಪ್ರಾತಿನಿಧಿಕ ಚಿತ್ರ
Image Credit source: prajavani.net
Follow us on

ಮೈಸೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹುಲಿ ದಾಳಿ (Tiger attack) ಮಾಡಿರುವಂತಹ ಘಟನೆ ಜಿಲ್ಲೆಯ ಹೆಚ್​.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಬಳಿ ನಡೆದಿದೆ. ಮುನೇಶ್ವರ(27) ಗಾಯಗೊಂಡ ಕಾರ್ಮಿಕ. ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಮೂವರು ಕಾರ್ಮಿಕರು ಬಂದಿದ್ದು, ಬಾಳೆಗೊನೆ ಕತ್ತರಿಸುವಾಗ ಪೊದೆಯಲ್ಲಿದ್ದ ಹುಲಿ ಸಡನ್​ ಆಗಿ ದಾಳಿ ಮಾಡಿದೆ. ಗಾಬರಿಯಿಂದ ಕೂಲಿ ಕಾರ್ಮಿಕರು ಕೂಗಾಡುತ್ತಿದ್ದಂತೆ ಹುಲಿ ಓಡಿ ಹೋಗಿದೆ. ಈ ವೇಳೆ ಮುನೇಶ್ವರ ಬಲಗೈ ಬೆರಳಿಗೆ ಗಾಯವಾಗಿದ್ದು, ಹೆಚ್​​.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್. ಡಿ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದಲ್ಲಿ ಮುಂದುವರೆದ ಚಿರತೆ ದಾಳಿ

ಮಂಡ್ಯ: ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣ ಮತ್ತೆ ಮುಂದುವರಿದಿದೆ. ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಮಳವಳ್ಳಿ ತಾಲೂಕಿನ ಬ್ಲಫ್ ಬಳಿ ನಡೆದಿದ್ದು, ಪ್ರೀತಿಯಿಂದ ಸಾಕಿದ ಹಸುವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಸುರಿಸುತ್ತಿದ್ದಾರೆ. ತಾಲೂಕಿನಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಸಹಜವಾಗಿ ಜನರಲ್ಲಿನ ಆತಂಕವನ್ನು ಹೆಚ್ಚಿಸಿದೆ. ಮಳವಳ್ಳಿ ತಾಲೂಕಿನ ಬ್ಲಫ್ ಬಳಿಯ ನಂಜಪ್ಪ ಎಂಬುವವರು ಸಾಕಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮಂಡ್ಯ: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ; ಖಾಸಗಿ ಆಸ್ಪತ್ರೆಗೆ ದಾಖಲು

ಗ್ರಾಮದಲ್ಲಿ ಕತ್ತಲಾದರೆ ಸಾಕು ಜನರು ಒಂಟಿಯಾಗಿ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಬಳಿ ಸಮರ್ಪಕ ಬೋನು ಇಲ್ಲದೆ ಇರುವ ಹಿನ್ನೆಲೆ ಚಿರತೆಗಳು ಸೆರೆಯಾಗದೆ ಅಲ್ಲೆಂದರಲ್ಲಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಚಿರತೆ ಪ್ರತ್ಯಕ್ಷಗೊಂಡ ಸ್ಥಳದಲ್ಲಿ ಬೋನ್ ಅಳವಡಿಸಿದರೆ ಅನಾಹುತಕ್ಕೆ ಕಡಿವಾಣ ಹಾಕ ಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಕರು ಬಲಿ

ಚಾಮರಾಜನಗರ: ಚಿರತೆ ದಾಳಿಗೆ ಕರು ಬಲಿಯಾದ ಘಟನೆ ತಾಲೂಕಿನ ಬಂಡೀಪುರ ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ಕಿಲಗೆರೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ಪ್ರಜ್ವಲ್ ಎಂಬವರಿಗೆ ಸೇರಿದ ಕರುವಿನ ಮೇಲೆ ಹುತ್ತೂರು ಕಿಲಗೆರೆ ಗೇಟ್ ಹಾಗೂ ಮಾದಲವಾಡಿ ಗ್ರಾಮದ ಮಾರ್ಗಮಧ್ಯೆ ಇರುವ ಜಮೀನಿನಲ್ಲಿ ತಡರಾತ್ರಿ ದಾಳಿ ನಡೆಸಿ ಕೊಂದು ಹಾಕಿದೆ.

ಇದನ್ನೂ ಓದಿ: ಟಿ.ನರಸೀಪುರದಲ್ಲಿ ಚಿರತೆ ಸೆರೆಗೆ ಟಾಸ್ಕ್ ಫೋರ್ಸ್ ರಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

ಬೋನ್​ಗೆ ಬಿದ್ದ 2 ವರ್ಷದ ಗಂಡು ಚಿರತೆ

ಮೈಸೂರು: ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಇದೀಗ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರಾಮತುಂಗಾ ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿದೆ. ರೈತ ನಾಗೇಶ್​ಗೆ ಸೇರಿದ 2 ಮೇಕೆಗಳನ್ನು ಈ ಚಿರತೆ ಕೊಂದು ತಿಂದಿತ್ತು. ಈ ಕಾರಣಕ್ಕೆ ಚಿರತೆ ದಾಳಿ ಮಾಡಿದ್ದ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಯು ಬೋನ್ ಇರಿಸಿದ್ದು, ಇದೀಗ 2 ವರ್ಷದ ಗಂಡು ಚಿರತೆ ಬೋನ್​ಗೆ ಬಿದ್ದಿದೆ. ಸೆರೆ ಸಿಕ್ಕ ಗಂಡು ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಚಿಪ್ ಅಳವಡಿಕೆ ಮಾಡಲಾಗಿದೆ. ನಂತರ ದೇವಮಾಚಿ ಅರಣ್ಯಕ್ಕೆ ಚಿರತೆಯನ್ನ ಬಿಡಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.