
ಮೈಸೂರು, ಸೆಪ್ಟೆಂಬರ್ 20: ಟಿ.ನರಸೀಪುರದಲ್ಲಿ ನಡೆದ ಗಣೇಶ ಮೂರ್ತಿ ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಪ್ರಚೋದನೆ ಕೊಟ್ಟಿದ್ದು ಇನ್ಸ್ಪೆಕ್ಟರ್. ಹೀಗಾಗಿ ಆತನ ವಿರುದ್ಧ FIR ಆಗ್ಬೇಕಿತ್ತು. ಇನ್ಸ್ಪೆಕ್ಟರ್ ವರ್ಗಾವಣೆಮಾಡಿ ಕ್ರಮಕೈಗೊಳ್ಳಬೇಕಿತ್ತು. ಧನಂಜಯ ಕೊಟ್ಟ ಚಿತಾವಣೆಗೆ ನಾವು ಸ್ಪಂದಿಸಿದ್ದೇವೆ. ಅವರು ಆಡಿದ್ದ ಮಾತುಗಳನ್ನು ಮಸೀದಿ ಮುಂದೆ ಪ್ರಸ್ತಾಪಿಸಿದ್ದೆ. ಈಗ ನೋಡು ಬಾ ಎಂದು ಕರೆದಿದ್ದೆ. ಪೊಲೀಸರ ಬಗ್ಗೆ ನನಗೆ ಅಪಾರಗೌರವಿದ್ದು, ಟಿ.ನರಸೀಪುರದಲ್ಲಿ ಇದೆಲ್ಲ ಆಗಿರುವುದು ತರ್ಲೆ ಇನ್ಸ್ಪೆಕ್ಟರ್ನಿಂದ ಎಂದವರು ಆರೋಪಿಸಿದ್ದಾರೆ.
ಗೃಹಸಚಿವರ ಒತ್ತಡಕ್ಕೆ ಮಣಿದು ತನ್ನ ವಿರುದ್ಧ FIR ಹಾಕಿದ್ದಾರೆ.ನಾನು ಕಮಿಷನ್ ಹೊಡೆದಿಲ್ಲ, ಅಕ್ರಮವಾಗಿ ಮುಡಾ ಸೈಟ್ ಪಡೆದಿಲ್ಲ. ಎಫ್ಐಆರ್ ವಿರುದ್ಧ ಕೋರ್ಟ್ಗೆ ಹೋಗುವೆ, ನ್ಯಾಯ ಸಿಗುತ್ತದೆ. ನಾನು ಅಪ್ಪನ ಹೆಸರು ಹೇಳಿಕೊಂಡು ಬಂದಿಲ್ಲ. ನನ್ನನ್ನು ರಾಜಕಾರಣಿ ರೀತಿ ನೋಡಬೇಡಿ, ನಾನೊಬ್ಬ ಪತ್ರಕರ್ತ. ಪತ್ರಕರ್ತರು ಸಂವಿಧಾನವನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಟಿ.ನರಸೀಪುರ ಗಣೇಶ ಗಲಾಟೆ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್
ಮತ್ತೊಂದೆಡೆ ಪ್ರತಾಪ್ ಸಿಂಹ ವಿರುದ್ಧ ಕೇಸ್ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಯದುವೀರ್ ಒಡೆಯರ್, ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕಿತ್ತು ಅದನ್ನು ತೆಗೆದುಕೊಂಡಿದ್ದಾರೆ. ನಾವೂ ಕೂಡ ಕಾನೂನಾತ್ಮಕವಾಗಿ ಎದುರಿಸಬೇಕಾಗಿದೆ. ಅವರು ಏನು ಭಾಷಣ ಮಾಡಿದ್ದಾರೆ ನಾನು ನೋಡಿಲ್ಲ. ಇದು ಕೇವಕ ಪ್ರಾರಂಭ, ಕಾನೂನಾತ್ಮಕವಾಗಿ ಎದುರಿಸಲು ನಮಗೂ ಅವಕಾಶ ಇದೆ. ಪ್ರತಾಪ್ ಸಿಂಹ ಹೇಳಿರುವುದು ಅವರ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ ಎಂದು ಯದುವೀರ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:50 pm, Sun, 20 September 26