ಟಿ.ನರಸೀಪುರ ಗಣೇಶ ಗಲಾಟೆ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್
ಮೈಸೂರಿನ ಟಿ ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಅಂತ್ಯವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇನ್ಸ್ಙಪೆಕ್ಟರ್ ಧಮ್ಕಿಯನ್ನು ಸವಾಲಾಗಿ ಸ್ವೀಕರಿಸಿದ್ದ ಹಿಂದೂ ಸಂಘಟನೆಗಳು ಅದ್ಧೂರಿಯಾಗಿ ಗಣೇಶ ಮೂರ್ತಿ ಶೋಭಾಯಾತ್ರೆ ಮಾಡಿ ತೋರಿಸಿವೆ. ಆದ್ರೆ, ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಗ, ಇನ್ಸ್ಪೆಕ್ಟರ್ಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಇದೀಗ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮೈಸೂರು, (ಸೆಪ್ಟೆಂಬರ್ 20): ಟಿ.ನರಸೀಪುರದಲ್ಲಿ ನಡೆದ ಗಣೇಶ ಮೂರ್ತಿ ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೆಕ್ಷನ್ 132, 191, 194, 196(1)(a)(b), 299, 353(1)(b)(c) ಹಾಗೂ ಸೆಕ್ಷನ್ 190ರ ಅಡಿಯಲ್ಲಿ ಟಿ.ನರಸೀಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಟಿ.ನರಸೀಪುರದಲ್ಲಿ ಗಣೇಶ ಕೂರಿಸುವ ವಿಚಾರಕ್ಕೆ ಇನ್ಸ್ಪೆಕ್ಟರ್ ಧಮ್ಕಿಗೆ ಸವಾಲಾಗಿ ನಡೆದ ಶೋಭಾಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರು. ಹೀಗಾಗಿ ಸಾರ್ವಜನಿಕ ಸೇವಕರು ಮತ್ತು ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಹಾಗೂ ಗುಂಪುಗಳು ಹಾಗೂ ಜಾತಿಗಳ ನಡುವೆ ದ್ವೇಷ ಉತ್ತೇಜನೆ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮತ್ತು ಪ್ರಚೋದನಕಾರಿ ಭಾಷಣಗಳ ಆರೋಪ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ನೋಡಿ: ಟಿ ನರಸೀಪುರದಲ್ಲಿ ಮಸೀದಿ ಮುಂದೆಯೇ ಗಣೇಶ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮ
ನಾವು ಬಗ್ಗಲ್ಲ, ಜಗ್ಗಲ್ಲ ಎಂದ ಅಶೋಕ್
ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ಪ್ರತಾಪ್ ಸಿಂಹನಿಗೆ 25 ಕೇಸ್ ಇವೆ, ಮತ್ತೊಂದು ಕೇಸ್ ಅಷ್ಟೇ. ಇದಕ್ಕೆ ಪ್ರತಾಪ್ ಸಿಂಹ ಹೆದರಲ್ಲ. ಇನ್ ಪೆಕ್ಟರ್ ವಿರುದ್ದ ದಲಿತರ ಮೇಲೆ ಹಲ್ಲೆ, ರೇಪ್, ಭ್ರಷ್ಟಾಚಾರದ ಕೇಸ್ ಇದೆ. ನೀವು ಇರೋದು ಒಂದು ವರ್ಷ. ಎಷ್ಟು ಕುಣಿತಿರಿ ಕುಣಿರಿ. ನಾವು ಬಗ್ಗಲ್ಲ, ಜಗ್ಗಲ್ಲ. ಗೊತ್ತು ಗುರಿ ಇಲ್ಲದ ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಏಕವಚನದಲ್ಲೇ ಇನ್ಸ್ಪೆಕ್ಟರ್ ವಿರುದ್ಧ ವಾಗ್ದಾಳಿ
ಗಣೇಶ್ ಮೂರ್ತಿ ಶೋಭಾಯಾತ್ರೆಯನ್ನು ಮಸೀದಿಯೊಂದರ ಮುಂಭಾಗದಲ್ಲಿ ನಿಲ್ಲಿಸಿ ಪ್ರತಾಪ್ ಸಿಂಹ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಧನಂಜಯ ಅವರ ವಿರುದ್ಧ ಅತ್ಯಂತ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. “ಹೇ ಧನಂಜಯ, ಮಸೀದಿ ಮುಂದೆ ಹೋದ್ರೆ ಎದ್ದು ಬಿಡುತ್ತಾ ಅಂದೇಯಲ್ಲಾ? ಬಾರೋ ಧನಂಜಯ ಇಲ್ಲಿಗೆ, ಬಂದು ನೋಡು ಬಾರೋ!” ಎಂದು ಏಕವಚನದಲ್ಲೇ ಗುಡುಗಿದರು. ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರ ಬಳಿ ನಡೆದುಕೊಂಡ ರೀತಿಯನ್ನು ತೀವ್ರವಾಗಿ ಪ್ರಶ್ನಿಸಿದ ಅವರು, “ಹೇ ಅಯೋಗ್ಯ ಧನಂಜಯ” ಎಂದು ಕಟು ಪದಗಳಿಂದ ಕುಟುಕಿದ್ದರು, ಅಲ್ಲದೇ ಮುಂದಿನ ಒಂದೂವರೆ ವರ್ಷದಲ್ಲಿ ತಾವು ಅಧಿಕಾರಕ್ಕೆ ಬಂದಾಗ ಲೆಕ್ಕ ಚುಕ್ತಾ ಮಾಡುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದರು. ಮೈಸೂರು ಜಿಲ್ಲೆಯ ಟಿ ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು ಹೊಡೆದ ಹಿಂದೂ ಮಹಾಸಭಾ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಶುಕ್ರವಾರ ಗಣೇಶ ಶೋಭಾಯಾತ್ರೆ ನಡೆಸಿದೆ. ಈ ಶೋಭಾಯಾತ್ರೆ ವೇಳೆ ಧಮ್ಕಿ ಹಾಕಿದ್ದ ಇನ್ಸ್ಪೆಕ್ಟರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಮೈಸೂರು ಕಾಂಗ್ರೆಸ್ ಖಂಡಿಸಿದ್ದು, ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Sun, 20 September 26




