
ಮೈಸೂರು, ಆಗಸ್ಟ್ 27: ಮೈಸೂರು (Mysuru) ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿರುವ ಪ್ರಸಿದ್ಧ ಶ್ರೀ ನಂಜುಂಡೇಶ್ವರ ದೇವಾಲಯದ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಹಣಕಾಸಿನ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಆದಾಯ-ವೆಚ್ಚದ ಲೆಕ್ಕದಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಆದೇಶಿಸಲಾಗಿದೆ.
ದೇವಾಲಯದ 2024-25ನೇ ಸಾಲಿನಲ್ಲಿ ಒಟ್ಟು ₹25.86 ಕೋಟಿ ಆದಾಯ ಬಂದಿದ್ದು, ₹25.68 ಕೋಟಿ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಕೇವಲ ₹17.84 ಲಕ್ಷ ಉಳಿತಾಯ ಉಳಿದಿದೆ. ಈ ಲೆಕ್ಕದ ಬಗ್ಗೆ ಸ್ಥಳೀಯರು ಹಾಗೂ ರೈತ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದು, ಈ ಹಿಂದಿನ ವರ್ಷಗಳಲ್ಲಿ ಸುಮಾರು ₹4 ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದ್ದ ಸಂದರ್ಭದಲ್ಲಿ 2024-25ರಲ್ಲಿ ಮಾತ್ರ ಉಳಿತಾಯ ಇಷ್ಟು ಕಡಿಮೆಯಾಗಿರುವುದೇಕೆ ಎಂಬ ಪ್ರಶ್ನೆ ಎತ್ತಿದ್ದಾರೆ.
ದೇವಾಲಯದ ವಿವಿಧ ಖರ್ಚುಗಳ ಬಗ್ಗೆಯೂ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಒಂದೇ ಹೊತ್ತು ಪ್ರಸಾದ ವಿತರಣೆ ನಡೆದ ವರ್ಷದಲ್ಲಿ ಸುಮಾರು ₹73 ಲಕ್ಷ ವೆಚ್ಚವಾಗಿದ್ದರೆ, ಮೂರು ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಕೇವಲ ₹46 ಲಕ್ಷ ವೆಚ್ಚವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಅದೇ ರೀತಿ, ಭಕ್ತರಿಂದ ಹಾಲು ಮತ್ತು ಮೊಸರು ಕೊಡುಗೆಯಾಗಿ ಬರುತ್ತಿದ್ದರೂ ₹3.18 ಲಕ್ಷ ಮೌಲ್ಯದ ಹಾಲು-ಮೊಸರು ಖರೀದಿ ಮಾಡಿರುವ ಲೆಕ್ಕದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಲಾಡು ತಯಾರಿಕೆಗೆ ₹3.50 ಕೋಟಿ, ಬಾಳೆಹಣ್ಣಿಗೆ ₹6.55 ಲಕ್ಷ, ಶಾಮಿಯಾನಕ್ಕೆ ₹17.84 ಲಕ್ಷ, ಪಾರ್ಕಿಂಗ್ಗೆ ₹37.88 ಲಕ್ಷ ಹಾಗೂ ಸಿಸಿ ಕ್ಯಾಮೆರಾ ದುರಸ್ತಿಗೆ ₹29.89 ಲಕ್ಷ ವೆಚ್ಚ ತೋರಿಸಿರುವುದನ್ನೂ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.
ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎನ್ನಲಾಗುತ್ತಿರುವ ಕಳಲೆ ದೇವಸ್ಥಾನಕ್ಕೂ ₹18 ಲಕ್ಷ ವೆಚ್ಚದ ಲೆಕ್ಕ ತೋರಿಸಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದರಲ್ಲಿ ₹14 ಲಕ್ಷ ಕಾಮಗಾರಿಗೆ ಹಾಗೂ ₹4 ಲಕ್ಷ ಜಾತ್ರೆ ಖರ್ಚಿಗೆ ಸಂಬಂಧಿಸಿದೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಮೈಸೂರು ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ: ಅಭಿಮನ್ಯುಗೆ ಭಾವುಕ ಬೀಳ್ಕೊಡುಗೆಯ ಕ್ಷಣಗಳು
ಒಟ್ಟಾರೆ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಸುಮಾರು ₹4ರಿಂದ ₹5 ಕೋಟಿ ದುರುಪಯೋಗವಾಗಿರುವ ಶಂಕೆ ಇದೆ ಎಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ನಂಜುಂಡೇಶ್ವರ ದೇವಾಲಯದ ಆದಾಯ-ವೆಚ್ಚದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿ, ತಪ್ಪು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ತನಿಖೆಗೆ ಆದೇಶಿಸಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ