ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ವರದಿ ಸಿದ್ಧಪಡಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳ ಬಗ್ಗೆ ವರದಿ ತಯಾರಿಸಲು ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ವರದಿ ಸಿದ್ಧಪಡಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ
Edited By:

Updated on: Oct 06, 2021 | 6:24 PM

ಮೈಸೂರು: ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳ ಬಗ್ಗೆ ವರದಿ ತಯಾರಿಸಲು ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು. ರಸ್ತೆ ಗುಣಮಟ್ಟದ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಕಳಪೆ ಕಾಮಗಾರಿಯಿಂದ ಗುಂಡಿಗಳು ಬಿದ್ದಿದ್ದರೆ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದು ಬೊಮ್ಮಾಯಿ ಎಚ್ಚರಿಸಿದರು.

ಯಾವ ಅವಧಿಯಲ್ಲಿ ರಸ್ತೆ ಆಗಿದೆ? ರಸ್ತೆಗಳನ್ನು ನಿರ್ಮಿಸುವಾಗ ಗುಣಮಟ್ಟ ಕಾಪಾಡಲಾಗಿದೆಯೇ ಎಂಬ ಬಗ್ಗೆ ವಿಸ್ತೃತ ವರದಿ ತರಿಸಿಕೊಳ್ಳುತ್ತೇನೆ‌. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದು ಘೋಷಿಸಿದರು. ಮಳೆ ಬಂದಾಗ ಮಾತ್ರ ಈ ವಿಚಾರ ಚರ್ಚೆ ಮಾಡಿ ನಂತರ ಸುಮ್ಮನಾಗುವುದಿಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ನುಡಿದರು.

ಮಳೆ ಬಂದಾಗ ನಿರಂತರ ನೀರು ತುಂಬುವ ಪ್ರದೇಶ ಗುರುತು ಮಾಡಲಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ಬೆಂಗಳೂರಲ್ಲಿ ಕೇವಲ 194 ರಸ್ತೆ ಗುಂಡಿ ಇವೆ ಎಂದ ಬಿಬಿಎಂಪಿ
ರಸ್ತೆ ಗುಂಡಿಗಳ ಬಗ್ಗೆ ಬಿಬಿಎಂಪಿ ಸುಳ್ಳು ಲೆಕ್ಕ ನೀಡಿದೆ. ಬೆಂಗಳೂರಲ್ಲಿ ಕೇವಲ 194 ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ (BBMP) ವರದಿ ನೀಡಿತ್ತು. ಆದರೆ ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಿಬಿಎಂಪಿ ಸುಳ್ಳು ಲೆಕ್ಕ ಬಯಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟಿದ್ದಾರೆ. ಸೆಪ್ಟೆಂಬರ್ 6 ರಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಅದರಂತೆ ಸೆಪ್ಟೆಂಬರ್ 21 ರ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದರು. ಆದರೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿನ ರಸ್ತೆಯಲ್ಲಿ ಕೇವಲ 194 ಗುಂಡಿಗಳಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ ಗುಪ್ತ ಅವರಿಗೆ ಲೆಕ್ಕ ತೋರಿಸಿದೆ.

ಸೆಪ್ಟೆಂಬರ್ 6 ರಂದು ಬೆಂಗಳೂರಿನಲ್ಲಿ 1138 ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ನಂತರ ಸೆಪ್ಟೆಂಬರ್ 21 ರಂದು ಎಲ್ಲಾ ಗುಂಡಿಗಳನ್ನು ಮುಚ್ಚಿದ್ದು, 194 ರಸ್ತೆ ಗುಂಡಿಗಳು ಮಾತ್ರ ಬಾಕಿ ಇವೆ ಎಂದು ಲೆಕ್ಕ ನೀಡಿದ್ದಾರೆ. ಸದ್ಯ ಬಿಬಿಎಂಪಿ ಲೆಕ್ಕ ಸುಳ್ಳು ಎಂಬುವುದು ರೂಜುವಾಗಿದೆ. ಏಕೆಂದರೆ ಬೆಂಗಳೂರಿನ ಹೃದಯ ಭಾಗದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಎಣಿಕೆಗೆ ಸಿಗದಂತಾಗಿದೆ.

ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿ ಎದುರೇ ರಸ್ತೆ ಗುಂಡಿ
ಮಂತ್ರಿ ಮಾಲ್ ಎದುರು ಇರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿ ಎದುರಿನಲ್ಲಿ ಇರುವ ಮುಖ್ಯ ರಸ್ತೆಯಲ್ಲಿಯೇ ರಸ್ತೆ ಗುಂಡಿಗಳಿವೆ. ಇನ್ನು ಸಂಪಿಗೆ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಅಧಿಕಾರಿಗಳು ಮುಚ್ಚದೆ ಲೆಕ್ಕ ನೀಡಿದ್ದಾರೆ. ಕೆ.ಆರ್.ಮಾರ್ಕೆಟ್​ನ ಫ್ಲೈ ಓವರ್ ಮೇಲೆ ಒಂದೇ ಕಡೆ ಹತ್ತು ರಸ್ತೆ ಗುಂಡಿ ಕಂಡುಬಂದಿದೆ. ವಾಹನ ಸವಾರರು ಈ ಗುಂಡಿಗಳಿಂದಾಗಿ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಒಡಿಶಾ: ಆಳವಾದ ಗುಂಡಿಯಲ್ಲಿ ಬಿದ್ದ ಆನೆಯನ್ನು ರಕ್ಷಿಸಿ ಕರ್ತವ್ಯ ಮೆರೆದ ಅರಣ್ಯ ಇಲಾಖೆ
ಇದನ್ನೂ ಓದಿ: ರಸ್ತೆ ಗುಂಡಿಯಲ್ಲಿ ಬಿದ್ದು ಬೈಕ್ ಓಡಿಸುತ್ತಿದ್ದ ಬಿಜೆಪಿ ಮುಖಂಡ ಸಾವು

Web contact

TV9 Kannada

Read More
Follow Us