ಮುಡಾ ಕಚೇರಿಯಲ್ಲಿ ಇಡಿಗೆ ಸಿಕ್ತು ಅತಿದೊಡ್ಡ ಸಾಕ್ಷ್ಯ: ವೈಟ್ನರ್ ಇರುವ, ಇಲ್ಲದ ಮೂಲ ದಾಖಲೆ ಪತ್ತೆ

ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮೈಸೂರಿನ ಮುಡಾ ಕಚೇರಿ ಸುತ್ತುವರಿದಿರುವ ಅಧಿಕಾರಿಗಳು, ಇಂಚಿಂಚೂ ಜಾಲಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಡೆದ 14 ಸೈಟ್​ನ ಮೂಲಕ ದಾಖಲೆಗಾಗಿ ತೀವ್ರ ಶೋಧ ನಡೆಯುತ್ತಿದೆ. ಈ ಮಧ್ಯೆ ಇದೀಗ 2ನೇ ದಿನದ ತನಿಖೆಯಲ್ಲಿ ಅತಿದೊಡ್ಡ ಸಾಕ್ಷ್ಯವೊಂದು ಸಿಕ್ಕಿದೆ.

ಮುಡಾ ಕಚೇರಿಯಲ್ಲಿ ಇಡಿಗೆ ಸಿಕ್ತು ಅತಿದೊಡ್ಡ ಸಾಕ್ಷ್ಯ: ವೈಟ್ನರ್ ಇರುವ, ಇಲ್ಲದ ಮೂಲ ದಾಖಲೆ ಪತ್ತೆ
ಮುಡಾ ಕಚೇರಿ ಆವರಣ
Edited By:

Updated on: Oct 19, 2024 | 12:50 PM

ಮೈಸೂರು, ಅಕ್ಟೋಬರ್ 19: ಮುಡಾ ಹಗರಣ ಸಂಬಂಧ ಮೈಸೂರಿನ ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎರಡನೇ ದಿನವೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿಯ ಮನವಿ ಪತ್ರದ ಮೇಲೆಯೇ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಪತ್ರದ ಬಗ್ಗೆ ಹತ್ತಾರು ಅನುಮಾನಗಳೇ ಹುಟ್ಟುಕೊಂಡಿವೆ. ಇದನ್ನೇ ಅರಿತ ಇಡಿ ಅಧಿಕಾರಿಗಳು ಮಹತ್ವದ ಸಾಕ್ಷಿಯೊಂದನ್ನ ಕಲೆ ಹಾಕಿದ್ದಾರೆ. ಮುಡಾ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪತ್ನಿ ನೀಡಿದ್ದ ಮನವಿ ಪತ್ರದಲ್ಲಿ ಎರಡು ಅನುಮಾನಗಳು ಉಂಟಾಗಿವೆ. ಮನವಿ ಪತ್ರದಲ್ಲಿ ವೈಟ್ನರ್ ಹಾಕಿರುವುದು ಪತ್ತೆಯಾಗಿದೆ. ಮನವಿ ಪತ್ರದ 2ನೇ ಪುಟದಲ್ಲಿದ್ದ ಖಾಲಿ ಜಾಗಕ್ಕೆ ವೈಟ್ನರ್ ಹಾಕಲಾಗಿತ್ತು. ಆದರೆ, ಇದರ ಮಧ್ಯೆಯೇ ವೈಟ್ನರ್ ಹಾಕದಿರುವ ಪತ್ರ ಕೂಡ ಇಡಿ ಅಧಿಕಾರಿಗಳಿಗೆ ಸಿಕ್ಕಿದೆ.

ವೈಟ್ನರ್ ಹಾಕಿದ ದಾಖಲೆಯಿಂದಲೇ ಸಿದ್ದರಾಮಯ್ಯಗೆ ಸಂಕಷ್ಟ ತರಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಸಿಎಂ ಬಿಡುಗಡೆ ಮಾಡಿರುವ ದಾಖಲೆ ಹಾಗೂ ಆರ್​ಟಿಐನಲ್ಲಿ ನೀಡಿದ್ದ ದಾಖಲೆ ಬೇರೆ ಬೇರೆ ಇದೆ. ವೈಟ್ನರ್​ನಲ್ಲೂ ವ್ಯತ್ಯಾಸ ಕಂಡು ಬಂದಿದೆ. ಇದಿಷ್ಟೇ ಅಲ್ಲ, 2 ದಾಖಲೆಗಳಲ್ಲಿ ಸಿಎಂ ಪತ್ನಿಯ ಸಹಿಯಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ. ಎರಡೂ ದಾಖಲೆಗಳನ್ನು ಮುಂದಿಟ್ಟುಕೊಂಡು ಮುಡಾ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಅಸಲಿ ಪತ್ರ ಯಾವುದು, ನಕಲಿ ಯಾವುದು ಎಂದು ಅಧಿಕಾರಿಗಳ ಬಾಯಿಬಿಡಿಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.

ಮುಡಾ ಶಿಫಾರಸು ಪತ್ರಗಳ ಜಾಡು ಹಿಡಿದ ಇಡಿ

ಮುಡಾದಲ್ಲಿ 50:50 ಅನುಪಾತದಡಿ ಎಷ್ಟೆಲ್ಲಾ ಸೈಟ್​ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಶಿಫಾರಸು ಪತ್ರಗಳ ಜಾಡು ಹಿಡಿದು ತನಿಖೆ ಮಾಡಿರುವ ಇಡಿ ಅಧಿಕಾರಿಗಳು, ಮುಡಾದಲ್ಲಿ ಸದಸ್ಯರಾಗಿದ್ದ ರಾಜಕೀಯ ನಾಯಕರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯಗೆ ಸಂಕಷ್ಟ ತರುತ್ತಾ ವೈಟ್ನರ್ ಹಾಕಿದ ದಾಖಲೆ?

ಯಾರು ಯಾರಿಗೆ 50:50 ಅನುಪಾತದ ಸೈಟ್​ಗೆ ಶಿಫಾರಸು ಮಾಡಿದ್ದರು? ಯಾರು ಯಾರಿಗೆ ಬದಲಿ ನಿವೇಶನಗಳನ್ನು ಕೊಡಿಸಿದ್ದರು? ಹೀಗೆ ಹತ್ತಾರು ಆಯಾಮದ ಮೂಲಕ ಇಡಿ ತನಿಖೆ ಮಾಡುತ್ತಿದೆ. ಇನ್ನು ಹಗರಣ ಬಯಲಿಗೆಳೆಯಬಲ್ಲ ಎಲ್ಲಾ ಮೂಲ ಶಿಫಾರಸು ಪತ್ರಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us