ನೇಪಾಳ ಪ್ರವಾಹ: ಇನ್ಫೋಸಿಸ್ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆ, ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ ನೆರವು ಕೋರಿದ ನೆರೆ ರಾಷ್ಟ್ರ

ನೇಪಾಳದ ಭೀಕರ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಸಿಇಒ ಲಕ್ಷ್ ಗೋಪಿಸೆಟ್ಟಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕಂಪನಿ ತಿಳಿಸಿದೆ. ಇದೇ ವೇಳೆ, ಜಲವಿದ್ಯುತ್ ಸುರಂಗದಲ್ಲಿ ಸಿಲುಕಿರುವ ಸುಮಾರು 1,000 ಕಾರ್ಮಿಕರ ರಕ್ಷಣೆಗೆ ಭಾರತದಿಂದ ನೇಪಾಳ ನೆರವು ಕೋರಿದೆ. ಏತನ್ಮಧ್ಯೆ ಕೇಂದ್ರ ಸರ್ಕಾರವು, ಸುರಂಗ ರಕ್ಷಣಾ ಹಾಗೂ ವೈದ್ಯಕೀಯ ತಂಡಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ.

ನೇಪಾಳ ಪ್ರವಾಹ: ಇನ್ಫೋಸಿಸ್ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆ, ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ ನೆರವು ಕೋರಿದ ನೆರೆ ರಾಷ್ಟ್ರ
ನೇಪಾಳ ಪ್ರವಾಹ: ಇನ್ಫೋಸಿಸ್ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆ
Image Credit source: PTI

Updated on: Aug 29, 2026 | 6:47 AM

ಮುಖ್ಯಾಂಶಗಳು

  • ನೇಪಾಳ ಪ್ರವಾಹದಲ್ಲಿ ಇನ್ಫೋಸಿಸ್ ಸಿಇಒ ನಾಪತ್ತೆ
  • ಜಲವಿದ್ಯುತ್ ಸುರಂಗದಲ್ಲಿ ಸಿಲುಕಿರುವ 1,000 ಕಾರ್ಮಿಕರು
  • ರಕ್ಷಣೆಗೆ ಭಾರತದ ಸಹಾಯ ಕೋರಿದ ನೇಪಾಳ ಸರ್ಕಾರ

ಬೆಂಗಳೂರು, ಆಗಸ್ಟ್ 29: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ (Nepal Flood) ಬಳಿಕ ಇನ್ಫೋಸಿಸ್ (Infosys) ಪಬ್ಲಿಕ್ ಸರ್ವಿಸಸ್‌ನ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಪ್ರವಾಸದ ಹಿನ್ನೆಲೆಯಲ್ಲಿ ನೇಪಾಳಕ್ಕೆ ತೆರಳಿದ್ದ ಅವರು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ದೃಢಪಡಿಸಿದೆ. ಇದೇ ವೇಳೆ ಪ್ರವಾಹದಿಂದ ಉಂಟಾಗಿರುವ ರಕ್ಷಣಾ ಕಾರ್ಯಾಚರಣೆಗಳಿಗೆ ನೇಪಾಳ ಸರ್ಕಾರವು ಭಾರತ ಸೇರಿದಂತೆ ವಿದೇಶಿ ನೆರವು ಕೋರಿದ್ದು, ಜಲವಿದ್ಯುತ್ ಸುರಂಗದಲ್ಲಿ ಸಿಲುಕಿರುವ ಸುಮಾರು 1,000 ಕಾರ್ಮಿಕರ ರಕ್ಷಣೆಗೆ ಭಾರತದ ವಿಶೇಷ ತಂಡ ನೆರವಾಗಲಿದೆ.

ಪ್ರವಾಹದ ಬಳಿಕ ಸಂಪರ್ಕಕ್ಕೆ ಸಿಗದ ಲಕ್ಷ್ ಗೋಪಿಸೆಟ್ಟಿ

ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಸಿಇಒ ಲಕ್ಷ್ ಗೋಪಿಸೆಟ್ಟಿ ವೈಯಕ್ತಿಕ ಕಾರಣಕ್ಕಾಗಿ ನೇಪಾಳಕ್ಕೆ ಭೇಟಿ ನೀಡಿದ್ದರು. ಆದರೆ ಪ್ರವಾಹದ ನಂತರ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ. ಲಕ್ಷ್ ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಕಂಪನಿ ಕಳವಳ ವ್ಯಕ್ತಪಡಿಸಿದೆ. ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು ಅವರ ಕುರಿತು ಮಾಹಿತಿ ಕಲೆಹಾಕಿ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ. ಕುಟುಂಬದವರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ ಎಂದು ಇನ್ಫೋಸಿಸ್ ತಿಳಿಸಿದೆ.

ರಕ್ಷಣಾ ಕಾರ್ಯಾಚರಣೆಗೆ ಭಾರತದಿಂದ ನೆರವು

ನೇಪಾಳದಲ್ಲಿ ಪ್ರವಾಹದ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ವಿದೇಶಿ ನೆರವು ಸ್ವೀಕರಿಸಲು ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ. ಆರಂಭದಲ್ಲಿ ವಿದೇಶಿ ನೆರವನ್ನು ನಿರಾಕರಿಸಿದ್ದ ನೇಪಾಳ, ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ನೆರವು ಕೋರಿದೆ. ನೇಪಾಳದ ಮನವಿಗೆ ಭಾರತ ತಕ್ಷಣ ಸ್ಪಂದಿಸಿದ್ದು, ವಿಶೇಷ ಸುರಂಗ ರಕ್ಷಣಾ ತಂಡವನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ಮೊದಲು ಸ್ಥಳ ಪರಿಶೀಲನೆಗಾಗಿ ತಂಡವನ್ನು ಕಳುಹಿಸಲಾಗುತ್ತಿದ್ದು, ನೆಲದ ಪರಿಸ್ಥಿತಿ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಉಪಕರಣಗಳ ಕುರಿತು ಅದು ಮಾಹಿತಿ ಸಂಗ್ರಹಿಸಲಿದೆ.

1,000 ಕಾರ್ಮಿಕರ ರಕ್ಷಣೆಗೆ ಭಾರತದ ಸಹಾಯ

ಪ್ರವಾಹದ ಹಿನ್ನೆಲೆಯಲ್ಲಿ ನೇಪಾಳದ ಜಲವಿದ್ಯುತ್ ಸುರಂಗದಲ್ಲಿ ಸುಮಾರು 1,000 ಕಾರ್ಮಿಕರು ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಅವರನ್ನು ಸುರಕ್ಷಿತವಾಗಿ ಹೊರತರಲು ಭಾರತದಿಂದ ವಿಶೇಷ ಸುರಂಗ ರಕ್ಷಣಾ ತಂಡದ ನೆರವು ಪಡೆಯಲಾಗುತ್ತಿದೆ.

ಇದರ ಜತೆಗೆ ಭಾರತ ವೈದ್ಯಕೀಯ ತಂಡವನ್ನೂ ನೇಪಾಳಕ್ಕೆ ಕಳುಹಿಸಲು ಮುಂದಾಗಿದೆ. ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಪುನರ್‌ಸ್ಥಾಪಿಸಲು ಬೈಲಿ ಸೇತುವೆಗಳನ್ನು ಒದಗಿಸುವುದಾಗಿಯೂ ಭಾರತ ಭರವಸೆ ನೀಡಿದೆ.

ಸಂಪರ್ಕ ವ್ಯವಸ್ಥೆ ಪುನರ್‌ಸ್ಥಾಪನೆಗೂ ನೆರವು

ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಹಾಗೂ ಇತರ ಮೂಲಸೌಕರ್ಯಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸಂಪರ್ಕ ವ್ಯವಸ್ಥೆ ಪುನರ್‌ಸ್ಥಾಪನೆಗೂ ಭಾರತ ತಾಂತ್ರಿಕ ನೆರವು ನೀಡಲಿದೆ. ರಕ್ಷಣಾ ಕಾರ್ಯಾಚರಣೆ ದೃಷ್ಟಿಯಿಂದ ತಾತ್ಕಾಲಿಕ ಸೇತುವೆಗಳ ನಿರ್ಮಾಣಕ್ಕೆ ಅಗತ್ಯವಿರುವ ತಾಂತ್ರಿಕ ತಂಡಗಳನ್ನೂ ಕಳುಹಿಸುವುದಾಗಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us