
ಬೆಂಗಳೂರು, (ಮೇ 27): ಕರ್ನಾಟಕ ಕಾಂಗ್ರೆಸ್ (Karnataka Congress) ನಾಯಕತ್ವ ಬದಲಾವಣೆ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾಳೆ (ಮೇ 28) ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಲೋಕಭವನದ ಸಮಯ ಕೇಳಿದ್ದಾರೆ. ಈ ಎಲ್ಲಾ ಮಹತ್ವದ ಬೆಳವಣಿಗೆಗಳ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) , ಕೆಪಿಸಿಸಿ ವಕ್ತಾರ ನಿಕೇತ್ ಮೌರ್ಯ, ನಟಿ ಭಾವನಾ ರಾಮಣ್ಣ ಸೇರಿದಂತೆ 31 ಕೆಪಿಸಿಸಿ ಪದಾಧಿಕಾರಿಗಳಿಗೆ ಗೇಟ್ಪಾಸ್ ಕೊಟ್ಟಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR) ಸಭೆಗೆ ಗೈರು ಹಾಜರಿ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿದ್ದಾರೆ.
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಭಾವನಾ ರಾಮಣ್ಣ, ಶಿವಮೂರ್ತಿ ನಾಯಕ್, ಎಂ ಸಿ ವೇಣುಗೋಪಾಲ್, ಷಣ್ಮುಖ ಶಿವಳ್ಳಿ, ಸಿಆರ್ ಮನೋಹರ್ ಸೇರಿದಂತೆ ಮೂವರು ಕೆಪಿಸಿಸಿ ಉಪಾಧ್ಯಕ್ಷರು, 29 ಪ್ರಧಾನ ಕಾರ್ಯದರ್ಶಿಗಳಿಗೆ ಡಿಕೆಶಿವಕುಮಾರ್ ಗೇಟ್ ಪಾಸ್ ನೀಡಿದ್ದಾರೆ.ತಕ್ಷಣವೇ ಈ ನಾಯಕರನ್ನು ಪಕ್ಷದ ಹುದ್ದೆಯಿಂದ ಕೈ ಬಿಡಲಾಗಿದೆ ಎಂದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮೇ 24 ರಂದು ಬೆಂಗಳೂರಿನ ಹೊರವಲಯದಲ್ಲಿಎಸ್ಐಆರ್ ಪ್ರಕ್ರಿಯೆ, ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ, ಪಕ್ಷ ಸಂಘಟನೆ ಕುರಿತ ಪೂರ್ವಭಾವಿ ಸಭೆಯ ನಡೆದಿತ್ತು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಲಾ ಸಹ ಭಾಗಿಯಾಗಿದ್ದರು. ಆದ್ರೆ, ಕೆಲ ಪದಾಧಿಕಾರಿಗಳು ಗೈರಾಗಿದ್ದು, ಇದಕ್ಕೆ ಸುರ್ಜೆವಾಲ ಆಕ್ರೋಶೊಂಡಿದ್ದರು. ಅಲ್ಲದೇ ಅವರು ಪಕ್ಷದ ಸಭೆ ಗೈರಾಗಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಸೂಚನೆಯ ಬೆನ್ನಲ್ಲೇ ಗೈರಾಗಿರುವ ನಾಯಕರಿಗೆ ಗೇಟ್ಪಾಸ್ ನೀಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಕರ್ನಾಟಕದಲ್ಲೂ ಎಸ್ ಐ ಆರ್ ಪ್ರತಿಕ್ರಿಯೆ ಆರಂಭಗೊಳ್ಳುತ್ತಿದೆ. ಎಸ್ ಐ ಆರ್ ಆರಂಭಕ್ಕೂ ಮೊದಲೇ ಈ ಪ್ರಕ್ರಿಯೆಯ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್ ಐ ಆರ್ ಕುರಿತಾಗಿ ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ. ಈಗಾಗಲೇ ತಳಮಟ್ಟದಲ್ಲಿ ಎಸ್ ಐ ಆರ್ ಬಗ್ಗೆ ಜಾಗೃತಿ ಮೂಡಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ಇನ್ನು ಕರ್ನಾಟಕದಲ್ಲಿ ಜೂನ್ 20 ರಂದು ಎಸ್ಐ ಆರ್ ಕುರಿತಾಗಿ ಸಿಬ್ಬಂದಿಗೆ ತರಬೇತಿ ನಡೆಯಲಿದೆ. ಜೂನ್ 30 ರಿಂದ ಬಿ ಎಲ್ ಒ ಗಳು ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಪ್ರಕ್ರಿಯೆ ಜುಲೈ 29ರವರೆಗೆ ನಡೆಯಲಿದೆ.