ಗ್ಯಾರಂಟಿಗಳಿಗೆ ಹಣವಿಲ್ಲದೆ 60 ಲಕ್ಷ ರೇಷನ್​ ಕಾರ್ಡ್​​ ರದ್ದುಪಡಿಸಲು ಹೊರಟ ಸರ್ಕಾರ: ಆರ್ ಅಶೋಕ್ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Sep 10, 2024 | 1:07 PM

ಉಚಿತ ಗ್ಯಾರಂಟಿಗಳನ್ನು ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಅದಕ್ಕಾಗಿ ಇದೀಗ ಬಡವರ ರೇಷನ್ ಕಾರ್ಡ್​ ರದ್ದು ಮಾಡಿ ದುಡ್ಡು ಮಾಡಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ. ಜತೆಗೆ, ಕಾಂಗ್ರೆಸ್ ಸರ್ಕಾರ ಉದ್ಯಮಸ್ನೇಹಿ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದೂ ಬಿಜೆಪಿ ಟೀಕಿಸಿದೆ.

ಗ್ಯಾರಂಟಿಗಳಿಗೆ ಹಣವಿಲ್ಲದೆ 60 ಲಕ್ಷ ರೇಷನ್​ ಕಾರ್ಡ್​​ ರದ್ದುಪಡಿಸಲು ಹೊರಟ ಸರ್ಕಾರ: ಆರ್ ಅಶೋಕ್ ವಾಗ್ದಾಳಿ
ಆರ್ ಅಶೋಕ್
Follow us on

ಬೆಂಗಳೂರು, ಸೆಪ್ಟೆಂಬರ್ 10: ಕರ್ನಾಟಕದಲ್ಲಿ 60 ಲಕ್ಷ ರೇಷನ್​ ಕಾರ್ಡ್​​ ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. 5 ಗ್ಯಾರಂಟಿಗಳಿಗೆ ಕೊಡಲು ಇವರ ಬಳಿ ಹಣವಿಲ್ಲ ಎಂದು ಪ್ರತಿಕ್ಷ ನಾಯಕ ಆರ್ ಅಶೋಕ್ ಟೀಕಿಸಿದರು. ದೆಹಲಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ರೇಷನ್ ಕಾರ್ಡ್ ಕಿತ್ತುಕೊಳ್ಳುತ್ತಿದ್ದಾರೆಂದು ಬಡ ಜನರು ಆತಂಕಕ್ಕೀಡಾಗಿದ್ದಾರೆ. ಈ ವಿಚಾರದಲ್ಲಿ ಎಲ್ಲೆಡೆ ಗೊಂದಲ ಸೃಷ್ಟಿಯಾಗಿದೆ ಎಂದರು.

ಗ್ಯಾರಂಟಿಗಳಿಗೆ ಕೊಡಲು ಹಣವಿಲ್ಲ. ಹೀಗಾಗಿ ರೇಷನ್ ಕಾರ್ಡ್ ಕಿತ್ತರೆ ಮೂರು ನಾಲ್ಕು ಸಾವಿರ ಕೋಟಿ ರೂಪಾಯಿ ಹಣ ಸಿಗುತ್ತದೆ ಎಂದು ಅಂತ ಅದಕ್ಕೆ ಕೈ ಹಾಕಿದ್ದಾರೆ. ಸರ್ಕಾರದ ಆಡಳಿತ ಯಂತ್ರ ಪೂರ್ತಿ ಐಸಿಯುನಲ್ಲಿರುವಂತೆ ಕಾಣುತ್ತಿದೆ ಎಂದು ಅಶೋಕ್ ಹೇಳಿದರು.

‘ಕಾಂಗ್ರೆಸ್‌ ಆಡಳಿತದಲ್ಲಿ ಉದ್ಯಮವೂ ಇಲ್ಲ, ಉದ್ಯೋಗವೂ ಇಲ್ಲ’

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉದ್ಯಮಸ್ನೇಹಿ ವಾತಾವರಣವನ್ನು ಹಾಳು ಮಾಡಿದೆ ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಸರ್ಕಾರದ ನೀತಿಗಳು ಹಾಗೂ ಅಸಮರ್ಪಕ ಆಡಳಿತದಿಂದ ಅನೇಕ ಉದ್ಯಮಗಳು ರಾಜ್ಯ ತೊರೆದು ಬೇರೆ ಕಡೆ ಹೋಗುತ್ತಿವೆ ಎಂದೂ ಬಿಜೆಪಿ ಎಕ್ಸ್ ಸಂದೇಶದ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಎಕ್ಸ್ ಸಂದೇಶ


‘ಕಾಂಗ್ರೆಸ್‌ ಆಡಳಿತದಲ್ಲಿ ಉದ್ಯಮವೂ ಇಲ್ಲ, ಉದ್ಯೋಗವೂ ಇಲ್ಲ! ನಮ್ಮ ಬಿಜೆಪಿ ಸರ್ಕಾರದ ಆಡಳಿತದ ನೀತಿ, ನಾವು ರಾಜ್ಯದಲ್ಲಿ ಮೂಡಿಸಿದ್ದ ಉದ್ಯಮಸ್ನೇಹಿ ವಾತಾವರಣದಿಂದ ಇಡೀ ಭಾರತದಲ್ಲೇ ಅತಿ ಹೆಚ್ಚಿನ ವಿದೇಶೀ ಬಂಡವಾಳ ಹೂಡಿಕೆ ನಮ್ಮ ಕರ್ನಾಟಕಕ್ಕೆ ಹರಿದು ಬಂದಿತ್ತು. ಜಗತ್ತೇ ಕೋವಿಡ್‌ ಮಹಾಮಾರಿಯಿಂದ ತತ್ತರಿಸಿ ಆರ್ಥಿಕವಾಗಿ ಕುಸಿದ ಸಮಯದಲ್ಲೂ ನಮ್ಮ ಆಡಳಿತ ವೈಖರಿಯಿಂದ ಅವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಎಫ್‌ಡಿಐ ನೀತಿ ಸುಧಾರಣೆಗಳ ಕುರಿತು ನಾವು ಕೈಗೊಂಡ ಕ್ರಮಗಳಿಂದ ಕರ್ನಾಟಕವನ್ನು ಎಫ್‌ಡಿಐ ನಲ್ಲಿ ದೇಶದಲ್ಲಿಯೇ ನಂಬರ್-1 ಸ್ಥಾನಕ್ಕೆ ಏರಿಸಿದ್ದೆವು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತದಿಂದ ಉದ್ಯಮಗಳಿಗೆ ಸರಿಯಾದ ಮೂಲಸೌಕರ್ಯ ಕಲ್ಪಿಸದೇ ಹಲವಾರು ಉದ್ಯಮಗಳು ರಾಜ್ಯ ತೊರೆದು ಬೇರೆ ಕಡೆ ಹೋದವು. ಹಾಗೂ ಉದ್ಯಮಿಗಳ ಕುರಿತ ಕಡೆಗಣನೆಯಿಂದ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ತಗ್ಗಿದ ಪರಿಣಾಮ ಕರ್ನಾಟಕವು ಇಂದು ಎರಡನೇ ಸ್ಥಾನಕ್ಕೆ ಕುಸಿದಿದೆ’ ಎಂದು ಬಿಜೆಪಿ ಟೀಕಿಸಿದೆ.

ಬಿಜೆಪಿ ಎಕ್ಸ್ ಸಂದೇಶ


ಅತಿ ಹೆಚ್ಚು ರಸ್ತೆ ಗುಂಡಿಗಳು ಹಾಗೂ ಅಲ್ಲಲ್ಲೇ ಬಿದ್ದಿರುವ ಕಸದ ರಾಶಿಗಳನ್ನು ಕಂಡರೆ ಕರ್ನಾಟಕ ಎಂದು ತಿಳಿಯಿರಿ ಎಂದು ಮತ್ತೊಂದು ವ್ಯಂಗ್ಯಚಿತ್ರದ ಮೂಲಕ ಬಿಜೆಪಿ ತಿವಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ