ಐಪಿಎಲ್​ ಬೆಟ್ಟಿಂಗ್‌ನಿಂದ ಹೆಚ್ಚು ಹಣ ಗಳಿಸೋ ಹುಚ್ಚು.. ಸೋತು ಯುವಕ ಸಾವಿಗೆ ಶರಣು!

ಐಪಿಎಲ್ ಬೆಟ್ಟಿಂಗ್ ದಂಧೆ ರಾಜ್ಯಾದ್ಯಂತ ಜೋರಾಗಿ ನಡೆಯುತ್ತಿದೆ. ಪೊಲೀಸರು ಎಷ್ಟೇ ಜಾಗ್ರತೆವಹಿಸಿದರೂ ಬೆಟ್ಟಿಂಗ್ ದಂಧೆ ತಡೆಯಾಲಾಗುತ್ತಿಲ್ಲ. ಹಣ ಗಳಿಸುವ ದುರಾಸೆಯಿಂದ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿಕೊಳ್ಳುವ ಯುವಕರು ಹಣವೆಲ್ಲ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮೈ ತುಂಬಾ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಇಂತಹದ್ದೇ ಒಂದು ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಐಪಿಎಲ್​ ಬೆಟ್ಟಿಂಗ್‌ನಿಂದ ಹೆಚ್ಚು ಹಣ ಗಳಿಸೋ ಹುಚ್ಚು.. ಸೋತು ಯುವಕ ಸಾವಿಗೆ ಶರಣು!
Edited By:

Updated on: May 19, 2024 | 11:33 AM

ರಾಯಚೂರು, (ಮೇ 19): ಐಪಿಎಲ್‌ (IPL 2024) ಬೆಟ್ಟಿಂಗ್‌ನಲ್ಲಿ (IPL Betting) ಲಕ್ಷ ಲಕ್ಷ ಕಳೆದುಕೊಂಡ ಯುವಕನೊಬ್ಬ ಲಾಡ್ಜ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ 29 ವರ್ಷದ ಮುದಿಬಸವ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಹಣ ಕಳೆದುಕೊಂಡಿದ್ದ. ಸೋತ ಹಣ ಪಾವತಿಸಲಾಗದೆ ಯುವಕ ಕಿರುಕುಳಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ಸಿಂಧನೂರು ನಗರದ ಸಾಯಿ ರೆಸಿಡೆನ್ಸಿ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಮುದಿಬಸವ ಐಪಿಎಲ್ ಬೆಟ್ಟಿಂಗ್‌ಗಾಗಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ. ಆದರೆ ಬೆಟ್ಟಿಂಗ್‌ ಕಟ್ಟಿದ ಎಲ್ಲ ಮ್ಯಾಚ್‌ಗಳು ಸೋತಿದ್ದವು. ಸಾಲದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಸಾಲಗಾರರ ಕಾಟಕ್ಕೆ ಬೇಸತ್ತ ಮುದಿಬಸವ ಲಾಡ್ಜ್‌ ರೂಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೂಮಿನ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡು ಲಾಡ್ಜ್‌ ಸಿಬ್ಬಂದಿ ಒಳಹೊಕ್ಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸಿಂಧನೂರು ನಗರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

.ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Follow Us