10ಕ್ಕೂ ಹೆಚ್ಚು ವರ್ಷಗಳಿಂದ ಕೆಮಿಕಲ್ ನೀರೇ ಇಲ್ಲಿನ ಜನರಿಗೆ ಆಧಾರ: ಕುಡಿಯಲು ಯೋಗ್ಯವಲ್ಲದಿದ್ದರೂ ವಿಷಕಾರಿ ಜಲ ಪೂರೈಕೆ
ರಾಯಚೂರು ತಾಲ್ಲೂಕಿನ ಸುತ್ತ ಮುತ್ತಲಿರುವ ಹಳ್ಳಿಗಳಿಗೆ ಕಳೆದ 10 ಕ್ಕೂ ಹೆಚ್ಚು ವರ್ಷಗಳಿಂದ ಕೆಮಿಕಲ್ ನೀರೇ ಇಲ್ಲಿನ ಜನರಿಗೆ ಆಧಾರ. ಕಳೆದೊಂದು ವರ್ಷದಿಂದ ಈ ನೀರು ಕುಡಿಯಲು ಯೋಗ್ಯವಲ್ಲ ಅಂತ ಲ್ಯಾಬ್ ರಿಪೋರ್ಟ್ ಹೇಳಿದರೂ ನೀರು ಪೂರೈಕೆ ಮಾಡಲಾಗುತ್ತಿದೆ. ಜನರು ಮಾತ್ರವಲ್ಲದೇ, ಜಾನುವಾರಗಳು ಸಹ ಮೃತಪಡುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು: ಕಳೆದ 10 ವರ್ಷಕ್ಕೂ ಹೆಚ್ಚು ವರ್ಷಗಳಿಂದ ನೀರು ಕುಡಿಯಲು ಯೋಗ್ಯವಲ್ಲ ಎಂದು ರಿಪೋರ್ಟ್ ಇದ್ದರೂ, ಅದೇ ವಿಷಕಾರಿ ಕೆಮಿಕಲ್ ವೇಸ್ಟೇಜ್ ನೀರನ್ನ (Chemical water) ನೀಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಅಧಿಕಾರಿಗಳಿಗೆ ಚೆಲ್ಲಾಟವಾದರೆ ಐದಾರು ಹಳ್ಳಿ ಗ್ರಾಮಸ್ಥರಿಗೆ ಪ್ರಾಣ ಸಂಕಟ ಎದುರಾಗಿದೆ. ನೀವೇನು ಅಧಿಕಾರಿಗಳಾ, ಇಲ್ಲಾ ಜೀವ ತೆಗೆಯುವ ರಾಕ್ಷಸರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಕೆಮಿಕಲ್ ಫ್ಯಾಕ್ಟರಿಗಳ ಕಿಕ್ ಬ್ಯಾಕ್ಗೆ ಜನರ ಜೀವದ ಜೊತೆ ಕಳ್ಳಾಟ?
ನೀರು ಯೋಗ್ಯವಲ್ಲದಿದ್ದರೂ ಕೆಮಿಕಲ್ ಮಿಶ್ರಿತ ವಿಷ ಜಲವನ್ನೇ ಜನರಿಗೆ ಕುಡಿಸಲಾಗುತ್ತಿದೆ. ಕೆಮಿಕಲ್ ಮಿಶ್ರಿತ ನೀರು ಕುಡಿದು ಜನರು ಕ್ಯಾನ್ಸರ್, ಟಿಬಿ, ಥೈರಾಯ್ಡ್ ರೋಗಗಳಿಗೆ ಗುರಿಯಾಗುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ಮಾಡುವಂತಾಗಿದೆ.
ಇದನ್ನೂ ಓದಿ: Siddaramaiah: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸಚಿವ ಮನ್ಸುಖ್ ಎಲ್. ಮಾಂಡವಿಯಾಗೆ ಪತ್ರ ಬರೆದ ಸಿದ್ಧರಾಮಯ್ಯ
ರಾಯಚೂರು ತಾಲ್ಲೂಕಿನ ವಡ್ಲೂರು ಸುತ್ತ ಮುತ್ತಲಿರುವ ಶಿಲ್ಪಾ ಫಾರ್ಮಾ, ರಾಯ್ಕಮ್, ಜಯಂತಿ ಸೇರಿ ಹತ್ತಕ್ಕೂ ಹೆಚ್ಚು ಕೆಮಿಕಲ್ ಫ್ಯಾಕ್ಟರಿಗಳ ವಿಷಕಾರಿ ವೇಸ್ಟೇಜ್ ನೀರು ಕೃಷ್ಣಾ ನದಿಗೆ ಸೇರುತ್ತದೆ. ತಾಲ್ಲೂಕಿನ ತೆಲಂಗಾಣ ಗಡಿ ಭಾಗದ ಹಳ್ಳಿಗಳಾದ ಗುಂಜಳ್ಳಿ, ಹನುಮನದೊಡ್ಡಿ, ವಡ್ಲೂರು ಸೇರಿ ನಾಲ್ಕೈದು ಹಳ್ಳಿಗಳಿಗೂ ಇದೇ ನೀರು ಪೂರೈಸಲಾಗುತ್ತದೆ.
ಅಕ್ರಮವಾಗಿ ಚರಂಡಿಗಳ ಮೂಲಕ ಹಳ್ಳಗಳಿಗೆ ಕೆಮಿಕಲ್ ವೇಸ್ಟೇಜ್ ನೀರು ಬೀಡಲಾಗುತ್ತಿದೆ. ಇದೇ ಕೃಷ್ಣಾ ನದಿಗೆ ಸೇರುವ ಕಲುಷಿತ ನೀರನ್ನ ಜನರಿಗೆ ಕುಡಿಯಲು ಅಧಿಕಾರಿಗಳು ಪೂರೈಕೆ ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Raichur News: ಶಾಲೆಯ ಕಾಂಪೌಂಡ್ ಕುಸಿದು ಬಿದ್ದು ವಿದ್ಯಾರ್ಥಿಗೆ ಗಂಭೀರ ಗಾಯ
ಮನುಷ್ಯರಷ್ಟೇ ಅಲ್ಲ ಜಾನುವಾರುಗಳು ಸಾವು
ಇತ್ತ ಹಳ್ಳಕ್ಕೆ ಬೀಡುವ ಕೆಮಿಕಲ್ ವೇಸ್ಟೇಜ್ ಸೇವಿಸಿ ಕೇವಲ ಜನರು ಆರೋಗ್ಯ ಸಮಸ್ಯೆ ಎದುರಿಸದೇ ಜಾನುವಾರುಗಳು, ಮೀನುಗಳು, ಕುರಿಗಳು ಕೂಡ ಇದೇ ನೀರಿಗೆ ಮೃತಪಡುತ್ತಿವೆ. ಪ್ರತಿ ಬಾರಿಯೂ ಇಂಥಹ ಘಟನೆಗಳು ಈ ಹಳ್ಳಿಗಳಲ್ಲಿ ಸರ್ವೆ ಸಾಮಾನ್ಯ ಎನ್ನುವಂತಾಗಿದೆ.
ಹೊಲಗಳಿಗೂ ಸಹ ಇದೇ ವಿಷಕಾರಿ ನೀರು ಬಳಕೆ ಮಾಡಲಾಗುತ್ತಿದ್ದು, ಇದರಿಂದ ಇಳುವರಿಯಲ್ಲಿ ಕುಂಠಿತವಾಗಿ ಜಮೀನುಗಳು ಫಲವತ್ತತೆಯನ್ನು ಕಳೆದುಕೊಳ್ಳುತ್ತಿವೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:25 am, Fri, 23 June 23