ಹಾಸ್ಟೆಲ್ನಲ್ಲಿ ಆತ್ಮಹತ್ಯೆಗೆ ಶರಣಾದ ನರ್ಸಿಂಗ್ ವಿದ್ಯಾರ್ಥಿನಿ: ಆಡಳಿತ ಮಂಡಳಿ ವಿರುದ್ಧ ಕಿರುಕುಳ ಆರೋಪ
ರಾಮನಗರದ ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ 19 ವರ್ಷದ ಕೇರಳ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜು ಆಡಳಿತ ಮಂಡಳಿಯ ಕಿರುಕುಳ ಮತ್ತು ಕೇರಳದ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುವ ಮನೋಭಾವದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿದೆ. ಸದ್ಯ ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟಿಸಿದ್ದು, ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ರಾಮನಗರ, ಫೆಬ್ರವರಿ 05: ಅವಳಿಗೆ ವೈದ್ಯೆ ಆಗುವ ಆಸೆ ಇತ್ತು. ದೂರದ ಊರು ಕೇರಳದ ಕಣ್ಣೂರು ಬಿಟ್ಟು ರಾಮನಗರಕ್ಕೆ ಬಂದಿದ್ದಳು. ಹಾಸ್ಟೆಲ್ನಲ್ಲಿ ಎಲ್ಲರಿಗೂ ಫೇವರಿಟ್ ಆಗಿದ್ದ 19 ವರ್ಷದ ಅನಾಮಿಕ, ನಿನ್ನೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾಳೆ. ಇಷ್ಟಕ್ಕೂ ಈ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿ (student) ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ನಿಮ್ಮ ಪ್ರಶ್ನೆಗೆ ಮುಂದೆ ಉತ್ತರ ಇದೆ ಓದಿ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಕನಕಪುರ ಬೆಂಗಳೂರು ರಸ್ತೆಯಲ್ಲಿರುವ ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆ ಈಗ ಎರಡು ರಾಜ್ಯಗಳ ವಿದ್ಯಾರ್ಥಿಗಳ ನಡುವೆ ಜಟಾಪಾಟಿಗೆ ಕಾರಣವಾಗುವ ಪರಿಸ್ಥಿತಿಗೆ ಬಂದು ನಿಂತಿದೆ. ಕಳೆದ ನಾಲ್ಕು ತಿಂಗಳ ಹಿಂದೆ ರಾಮನಗರಕ್ಕೆ ಬಂದಿದ್ದ 19 ವರ್ಷದ ಅನಾಮಿಕ, ಹಾರೋಹಳ್ಳಿ ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು.
ಇದನ್ನೂ ಓದಿ: ಇನ್ನೇನು ಮದ್ವೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಇಂಜಿನಿಯರ್ ದುರಂತ ಸಾವು!
ಖುಷಿಯಾಗಿಯೇ ಇದ್ದ ಅನಾಮಿಕ, ನಿನ್ನೆ ಹೊತ್ತೇರಿದರೂ ಕಾಲೇಜಿಗೆ ಬಂದಿರಲಿಲ್ಲ. ಊಟಕ್ಕೂ ಬಂದಿರಲಿಲ್ಲ, ಎಷ್ಟೇ ಕರೆ ಮಾಡಿದರೂ ರೆಸ್ಪಾನ್ಸ್ ಮಾಡಿರಲಿಲ್ಲ. ಇದನ್ನು ಗಮನಿಸಿ ಸಹಪಾಠಿಗಳು ಹಾಸ್ಟೆಲ್ ಕಿಟಕಿಯಲ್ಲಿ ಇಣುಕಿ ನೋಡಿದಾಗ ಅನಾಮಿಕ ನೇಣಿಗೆ ಶರಣಾಗಿದ್ದು ಕಂಡು ಬಂದಿದೆ. ದಯಾನಂದ್ ಸಾಗರ್ ಮೆಡಿಕಲ್ ಕಾಲೇಜಿನ ಮ್ಯಾನೆಜ್ಮೆಂಟ್ ಕಿರುಕುಳದಿಂದಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಮಾಡುತ್ತಿದ್ದ ಹಲವು ಹೇಳಿಕೆಗಳಿಗೆ ಮಾನಸಿಕವಾಗಿ ಜರ್ಜರಿತಳಾಗಿದ್ದಳು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಕೇರಳದವರಿಗೆ ಕೆಳ ದರ್ಜೆಯ ವ್ಯಕ್ತಿಯಂತೆ ಕಾಣುತ್ತಾರೆ
ಕೇರಳದ ಕಣ್ಣೂರಿನಿಂದ ಬಂದಿದ್ದ ಅನಾಮಿಕ, ಎಲ್ಲರಿಗೂ ಪ್ರೇರೇಪಿಸುತ್ತಿದ್ದಳು. ಬಹಳ ಪಾಸಿಟಿವ್ ಆಗಿದ್ದಳು. ಆದರೆ ಕಾಲೇಜಿನ ಮಂಡಳಿ ಕೇರಳದವರಿಗೆ ಕೆಳ ದರ್ಜೆಯ ವ್ಯಕ್ತಿಯಂತೆ ನೋಡುತ್ತಾರೆ, ಲಕ್ಷಾಂತರ ಹಣದ ಬೇಡಿಕೆ ಇಡುತ್ತಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಮೊನ್ನೆಯಷ್ಟೇ ಇಡೀ ದೇಶದಲ್ಲಿ ಸುದ್ದಿ ಮಾಡಿದ ಗ್ರೀಷ್ಮಾ ಕೇಸನ್ನು ಹಿಡಿದು ನಮ್ಮನ್ನು ಜರಿಯುತ್ತಾರೆ ಅಂತ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಳೆ. ನೀವೆಲ್ಲಾ ಗ್ರೀಷ್ಮಾಳ ರೀತಿ ವಿಷ ಹಾಕುವವರು ಎಂದೆಲ್ಲಾ ಹೀಯಾಳಿಸಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿಗೆ ಜೀವಾವಧಿ ಶಿಕ್ಷೆ ಪಡೆದ ಅಪಖ್ಯಾತಿಗೆ ಒಳಗಾಗಿರುವ ಗ್ರೀಷ್ಮಾ, ಸದ್ಯ ಜೈಲಿನಲ್ಲಿದ್ದಾಳೆ. ತನ್ನ ಬಾಯ್ ಫ್ರೆಂಡ್ಗೆ ವಿಷವುಣಿಸಿ ಸಾವಿಗೆ ಕಾರಣಳಾದ ಸೌಂದರ್ಯ ಚೆಲುವೆ ಗ್ರೀಷ್ಮಾಳಂತೆ ಕೇಳರದಿಂದ ಬಂದ ನೀವೆಲ್ಲಾ ಹಾಗಾಯೇ ಎಂದು ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಶಾಂತಂ ಸ್ವೀಟ ರೋಸ್ ಹೇಳಿದ್ದಾರೆ ಎಂಬುದು ವಿದ್ಯಾರ್ಥಿನಿಯರ ಆರೋಪವಾಗಿದೆ.
ಇದನ್ನೂ ಓದಿ: ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ಪತ್ನಿಯನ್ನ ಏಳೆಂಟು ಬಾರಿ ಚುಚ್ಚಿ…ಚುಚ್ಚಿ ಕೊಂದ
ಹಾಗೆಯೇ ಕ್ಲಾಸ್ ಕೋ ಅರ್ಡಿನೇಟರ್ ಸುಜಿತಾ ಕೂಡ ಕೇಳರ ವಿದ್ಯಾರ್ಥಿಗಳಿಗೆ ಎರಡನೇ ದರ್ಜೆ ವ್ಯಕ್ತಿಗಳಂತೆ ನೋಡುತ್ತಾರೆ. ಹೀಗಾಗಿಯೇ ಮಾನಸಿಕವಾಗಿ ನೊಂದಿದ್ದ ಅನಾಮಿಕ ತನ್ನ ಜೀವವನ್ನೇ ಬಲಿ ಕೊಟ್ಟಿದ್ದಾಳೆ ಅಂತ ವಿದ್ಯಾರ್ಥಿಗಳು ಆಕ್ರೋಶಗೊಂಡು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಹಿಂದೆಯೂ ಇದೇ ರೀತಿ ಘಟನೆಗಳಾದರೂ ಕೂಡ ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಈಗಲೂ ಅದೇ ಪರಿಸ್ಥಿತಿ ಇದೆ ಎಂಬುದು ವಿದ್ಯಾರ್ಥಿಗಳ ನೋವಿನ ಮಾತಾಗಿದೆ. ಅದೇನೇ ಇರಲಿ ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ ಮಾಡಲು ಬಂದ ಸ್ಟೂಡೆಂಟ್ಗಳಿಗೆ ಭದ್ರತೆ ಕೊಡಬೇಕಾದ ಮಂಡಳಿಯೇ ಆರೋಪಿ ಸ್ಥಾನದಲ್ಲಿ ಇರೋದು ದುರಂತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:49 pm, Wed, 5 February 25