ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ: ಪ್ರೋಟೋಕಾಲ್ ದುರ್ಬಳಕೆ ವರದಿ ಸಿದ್ದ
ನಟಿ ರನ್ಯಾ ರಾವ್ ಹೇಗೆ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನವನ್ನು ವಿಮಾನ ನಿಲ್ದಾಣದಿಂದ ಹೊರಗೆ ತರುತ್ತಿದ್ದರು ಮತ್ತು ಹೇಗೆ ಪ್ರೋಟೋಕಾಲ್ ದುರ್ಬಳಕೆ ಮಾಡುತ್ತಿದ್ದರು ಎಂಬ ವರದಿ ಸರಕಾರಕ್ಕೆ ಸಲ್ಲಿಕೆಯಾಗಲು ಸಿದ್ಧವಾಗಿದೆ. ಇತ್ತ ಕೋರ್ಟ್ನಲ್ಲಿ ರನ್ಯಾ ರಾವ್ಗೆ ಜಾಮೀನು ಕೊಡಿ ಎಂದು ವಕೀಲರು ವಾದ ಮಾಡಿದ್ದಾರೆ.

ಬೆಂಗಳೂರು, ಮಾರ್ಚ್ 25: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) 14.2 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟಮಾಡುವಾಗ (Gold Smuggling) ಡಿಆರ್ಐ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ರನ್ಯಾ ರಾವ್ (Ranya Rao) ಅವರನ್ನು ಬಂಧಿಸಿದ್ದರು. ಬಳಿಕ ಪ್ರಕರಣದಲ್ಲಿ ಪೊಲೀಸ್ ಪ್ರೋಟೋಕಾಲ್ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಸರ್ಕಾರ, ಈ ಪ್ರಕರಣದಲ್ಲಿ ಪ್ರೋಟೋಕಾಲ್ ದುರ್ಬಳಕೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಗೆ ಆದೇಶಿಸಿತ್ತು. ಈಗ ವರದಿ ಸಿದ್ದವಾಗಿದ್ದು ಇಂದು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ತನಿಖಾ ವರದಿಯಲ್ಲೇನಿದೆ?
ಗೋಲ್ಡ್ ಸ್ಮಗ್ಲಿಂಗ್ ಕೇಸ್ ಬಗ್ಗೆ ಮಾತನಾಡಿರುವ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ, ತನಿಖಾ ವರದಿ ಸಿದ್ಧವಿದೆ. ಇದುವರೆಗೆ ಹಲವರ ವಿಚಾರಣೆ ಮಾಡಿದ್ದೇವೆ. ಕೊನೆ ಹಂತದ ಮಾಹಿತಿ ಸಂಗ್ರಹ ಆಗಿದೆ. ಸರ್ಕಾರಕ್ಕೆ ಇಂದೇ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದುವರೆಗೆ, 10-15 ಜನರ ವಿಚಾರಣೆ ಮಾಡಿದ್ದೇವೆ, ಸರ್ಕಾರಕ್ಕೆ ವರದಿ ಕೊಡುತ್ತೇವೆ. ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಮಾಡಿದ್ದೇವೆ. ಆದರೆ ಈಗ ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಆಗದು ಎಂದಿದ್ದಾರೆ.
ರನ್ಯಾ ರಾವ್ ಗೆ ಜಾಮೀನು ನೀಡಿ: ರನ್ಯಾ ಪರ ವಕೀಲ ವಾದ
ಮತ್ತೊಂದೆಡೆ, 64 ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರನ್ಯಾ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆದಿದೆ. ರನ್ಯಾ ರಾವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಿರಣ್ ಜವಳಿ, ಆಕೆ ಒರ್ವ ಮಹಿಳೆ. ಬೆಂಗಳೂರು ನಿವಾಸಿ. ಆಕೆಯ ಪಾಸ್ ಪೋರ್ಟ್ ಡಿ ಆರ್ಐ ವಶದಲ್ಲಿ ಇದೆ. ಹೀಗಿರುವಾಗ ಆಕೆ ಹೇಗೆ ದೇಶ ಬಿಟ್ಟು ಹೋಗುತ್ತಾಳೆ? ಅದು ಸಾದ್ಯವಾಗದ ಕೆಲಸ ಎಂದು ವಾದ ಮಂಡಿಸಿದ್ದಾರೆ. ಅಲ್ಲದೆ, ಕಸ್ಟಮ್ಸ್ ಕಾಯ್ದೆ 102 ಹಾಗೂ ಎನ್ಡಿಪಿಎಸ್ ಕಾಯ್ದೆ 50 ರನ್ನ ಉಲ್ಲೇಖಿಸಿದ್ದಾರೆ. ಮಹಜರು ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಿಲ್ಲ ಎಂದೂ ವಾದಿಸಿದ್ದಾರೆ.
ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಒಪ್ಪಿಕೊಂಡ ನಟಿ ರನ್ಯಾ ರಾವ್; ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಇಲ್ಲಿದೆ..
ಈ ಪ್ರಕರಣಕ್ಕೆ ಕಸ್ಟಮ್ಸ್ ಕಾಯ್ದೆಯ 102 ಸೆಕ್ಷನ್ ಅನ್ವಯ ಆಗಲ್ಲ. ವಶಕ್ಕೆ ಪಡೆದ ಕೂಡಲೆ ಮ್ಯಾಜಿಸ್ಟ್ರೇಟ್ ಅಥವಾ ಗೆಜೆಟೆಡ್ ಆಫೀಸರ್ ಮುಂದೆ ಹಾಜರುಪಡಿಸಬೇಕಿತ್ತು, ಅದನ್ನು ಮಾಡಿಲ್ಲ. ಆಕೆ ಯಾವ ಸಾಕ್ಷಿಯನ್ನು ನಾಶಮಾಡಲು ಸಾದ್ಯವಿಲ್ಲ. ಇದೊಂದು ಆರ್ಥಿಕ ಅಪರಾಧ, ಆಕೆ ಒರ್ವ ಮಹಿಳೆ ಆಗಿರುವ ಕಾರಣಕ್ಕೆ ಷರತ್ತುಗಳನ್ನು ವಿಧಿಸಿಯಾದರೂ ಜಾಮೀನು ಕೊಡಲೇಬೇಕು ಎಂದು ವಕೀಲರು ವಾದ ಮಂಡಿಸಿದ್ದಾರೆ. ಇಂದು ಡಿಆರ್ಐ ಪರ ವಕೀಲರ ವಾದ ಮಂಡನೆ ನಡೆಯಲಿದ್ದು, ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.