ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್: ಮತ್ತೋರ್ವನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್​​ಐಎ ಕೋರ್ಟ್

shivamogga Trial blast case: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊಹಮ್ಮದ್ ಜಬಿಯುಲ್ಲಾ, ನದೀಂ ಫೈಜಲ್ ಅಪರಾಧಿಗಳೆಂದು ಸಾಬೀತಾಗಿದ್ದು. ಇಬ್ಬರಿಗೂ 6 ವರ್ಷ ಶಿಕ್ಷೆ ವಿಧಿಸಿ ಎನ್​​​ಐಎ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಇದೇ ಕೇಸಿನ ಮತ್ತೊಬ್ಬ ಅಪರಾಧಿಗೆ ಜೈಲು ಶಿಕ್ಷೆಯಾಗಿದೆ.

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್: ಮತ್ತೋರ್ವನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್​​ಐಎ ಕೋರ್ಟ್
Nia
Edited By:

Updated on: Apr 21, 2026 | 9:26 PM

ಶಿವಮೊಗ್ಗ, (ಏಪ್ರಿಲ್ 21): ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ  (shivamogga Trial blast case) ಸಂಬಂಧಿಸಿದಂತೆ ಅಪರಾಧಿ ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆಯಾಗಿದೆ. ಟ್ರಯಲ್ ಬ್ಲಾಸ್ಟ್ ಕೇಸ್‌ನ 3ನೇ ಆರೋಪಿ ಅರಾಫತ್ ಅಲಿ  ಆರೋಪ ಸಾಬೀತಾಗಿದ್ದು, ಈ ಸಂಬಂಧ ಇಂದು ಏಪ್ರಿಲ್ 21) ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರಕರಣ ಸಂಬಂಧ 12 ಜನ ಆರೋಪಿಗಳ ಪೈಕಿ ಮೂವರಿಗೆ ಶಿಕ್ಷೆಯಾಗಿದ್ದು, ಇನ್ನುಳಿದ 9 ಜನ ಆರೋಪಿಗಳ ವಿಚಾರಣೆ ಮುಂದುವರೆದಿದೆ.

ಕೀನ್ಯಾದಲ್ಲಿ ತಲೆಮರೆಸಿಕೊಂಡಿದ್ದ ಅರಾಫತ್

2020ರಿಂದ ಅರಾಫತ್ ನಾಪತ್ತೆಯಾಗಿದ್ದ. ಕೀನ್ಯಾದಲ್ಲಿ ತಲೆಮರೆಸಿಕೊಂಡು ನಕಲಿ ದಾಖಲೆ ಬಳಸಿ ಮಹಿಳಾ ಅಧಿಕಾರಿಯನ್ನು ಮದುವೆಯಾಗಿದ್ದ. ಬಳಿಕ 2023ರ ಸೆಪ್ಟೆಂಬರ್ 14ರಂದು ಕೀನ್ಯಾದಿಂದ ಬರುವಾಗ ದೆಹಲಿ ಏರ್‌ಪೋರ್ಟ್‌ನಲ್ಲಿ ಅರಾಫತ್ ಎನ್‌ಐಎ ಬಲಿಗೆ ಬಿದ್ದಿದ್ದ.

ಇದನ್ನೂ ಓದಿ: ಶಿವಮೊಗ್ಗ ಟ್ರಯಲ್ ಬ್ಲಾಸ್, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಂದ ಸರ್ವೈವಲ್ ಟಾಸ್ಕ್

ಪ್ರಕರಣದ ಹಿನ್ನೆಲೆ

2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ಸಮೀಪ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟದ ಪ್ರಯೋಗ (ಟ್ರಯಲ್ ಬ್ಲಾಸ್ಟ್) ನಡೆದಿತ್ತು. ಇದು ಐಸಿಸ್ ಪ್ರೇರಿತ ಯುವಕರು ತಯಾರಿಸಿದ ಐಇಡಿ (Improvised Explosive Device) ಬಾಂಬ್‌ಗಳನ್ನು ಪರೀಕ್ಷಿಸಲು ಮಾಡಿದ ಪ್ರಯೋಗವಾಗಿತ್ತು.

ಮೂವರಿಗೆ ಜೈಲು ಶಿಕ್ಷೆ

ಇನ್ನು ಈ ಪ್ರಕರಣ ಸಂಬಂಧ ಎನ್​ಐಎ ಕೋರ್ಟ್​ ಈಗಾಗಲೇ ಇಬ್ಬರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದೀಗ ಮೂರನೇ ಅಪರಾಧಿ ಅರಾಫತ್ ಗೂ ಸಹ ಎನ್​​ಐಎ ಕೋರ್ಟ್ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನುಳಿದಂತೆ ಎನ್​​ಐಎ ಅಧಿಕಾರಿಗಳು 9 ಜನ ಆರೋಪಿಗಳ ವಿಚಾರಣೆ ಮುಂದುವರೆಸಿದೆ.

ಕದ್ರಿ ಮಂಜುನಾಥ ದೇಗುಲ ಟಾರ್ಗೆಟ್

ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳು ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಸಯ್ಯದ್ ಯಾಸೀನ್ ಮುಂತಾದವರು. ಅವರು ಐಸಿಸ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಡಾರ್ಕ್ ವೆಬ್ ಮೂಲಕ ಸ್ಫೋಟಕ ತಯಾರಿಕೆಯ ವೀಡಿಯೊಗಳು ಮತ್ತು ಮಾಹಿತಿ ಪಡೆದಿದ್ದರು. ಟ್ರಯಲ್ ಬ್ಲಾಸ್ಟ್ ನಂತರ ಅವರು ದೊಡ್ಡ ಮಟ್ಟದ ದಾಳಿಗಳಿಗೆ ಪ್ಲಾನ್ ಮಾಡಿದ್ದರು. ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ ಟಾರ್ಗೆಟ್ ಮಾಡಿದ್ದರು ಎಂದು ತಿಳಿದುಬಂದಿತ್ತು.

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಲಿಂಕ್

ಇದೇ ಜಾಲವು 2022ರ ನವೆಂಬರ್‌ನಲ್ಲಿ ನಡೆದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮತ್ತು ಮಂಗಳೂರಿನಲ್ಲಿ ಐಸಿಸ್, ಲಷ್ಕರ್-ಎ-ತೈಬಾ, ತಾಲಿಬಾನ್ ಬೆಂಬಲದ ಗೋಡೆ ಬರಹಗಳ ಪ್ರಕರಣಗಳಿಗೂ ಲಿಂಕ್ ಇತ್ತು. ಈ ಎಲ್ಲಾ ಕೇಸ್‌ಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ (NIA) ಈ ಪ್ರಕರಣದ ತನಿಖೆ ನಡೆಸುತ್ತಿದೆ. ಎನ್‌ಐಎಯು ಇದುವರೆಗೆ ಹಲವು ಆರೋಪಪಟ್ಟಿಗಳನ್ನು ಸಲ್ಲಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Tue, 21 April 26

Follow Us