ಕರಾವಳಿ ಬೆನ್ನಲ್ಲೇ ಮಲೆನಾಡು ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್: ಸಿಎಂ ಘೋಷಣೆ

ಮಂಗಳೂರಿನಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ 32,611 ಕೋಟಿ ರೂ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ಇದೀಗ ಮಲೆನಾಡು ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್​ ನೀಡಲು ಸಿಎಂ ಡಿಕೆ ಶಿವಕುಮಾರ್​ ನಿರ್ಧರಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಕರಾವಳಿ ಬೆನ್ನಲ್ಲೇ ಮಲೆನಾಡು ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್: ಸಿಎಂ ಘೋಷಣೆ
ಡಿಕೆ ಶಿವಕುಮಾರ್​
Image Credit source: tv9 kannada
Edited By:

Updated on: Sep 19, 2026 | 4:16 PM

ಶಿವಮೊಗ್ಗ, ಸೆಪ್ಟೆಂಬರ್​ 19: ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ, ಈ ಭಾಗಕ್ಕೆ ಆರ್ಥಿಕ ಶಕ್ತಿ ತುಂಬಲು ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ನೀಡಲು ಸರ್ಕಾರ ತೀರ್ಮಾನಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಕಡ್ಡಾಯವಾಗಿ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು’ ಎಂದು ಸಿಎಂ ಡಿಕೆ ಶಿವಕುಮಾರ್​​ ಸೂಚನೆ ನೀಡಿದ್ದಾರೆ.

ನಮ್ಮ ಸರ್ಕಾರ ರೈತರ ಪರವಾಗಿದೆ ಎಂದ ಸಿಎಂ 

ಇಂದು ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ‘ನಮ್ಮ ಸರ್ಕಾರ ಸಂಪೂರ್ಣವಾಗಿ ರೈತರ ಪರವಾಗಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಸಿಎಂ ಇದ್ದ ವೇದಿಕೆ ಮೇಲೆಯೇ ಬಿಜೆಪಿ ಅಸಮಾಧಾನ: ಕೆಲಕಾಲ ಗೊಂದಲ

‘ಪಾರಂಪರಿಕ ಕೃಷಿಗೆ ಸರ್ಕಾರ ಯಾವುದೇ ಅಡ್ಡಿ ಮಾಡುವುದಿಲ್ಲ. ಮಲೆನಾಡಿನ ರೈತರಿಗೆ ಹೊಸದಾಗಿ ನೋಟಿಸ್ ಜಾರಿ ಮಾಡದಂತೆ ಅಧಿಕಾರಿಗಳಿಗೆ ಹೇಳುವೆ. ಅಕ್ರಮ-ಸಕ್ರಮ (94ಸಿ) ವಿಚಾರವಾಗಿ ಶೀಘ್ರದಲ್ಲೇ ಪ್ರತ್ಯೇಕ ಸಭೆ ಮಾಡಲಾಗುವುದು. ಶಾಸಕರು ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲಿ’ ಎಂದು ಅವರು ಹೇಳಿದರು.

‘ತೇಗದ ಸಿರಿ’ ಹೊಸ ಯೋಜನೆ: ರೈತರಿಗೆ ಶೇ. 70ರಷ್ಟು ಲಾಭಾಂಶ

‘ರೈತರ ಆದಾಯ ಹೆಚ್ಚಿಸಲು ಸರ್ಕಾರ ‘ತೇಗದ ಸಿರಿ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಡಿ ರೈತರ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸಲು ನಾವು ಕೊಡುತ್ತೇವೆ. ನಂತರ ಆ ಮರಗಳನ್ನು ಬೆಳೆದು ಮಾರಾಟ ಮಾಡಿದಾಗ ಶೇ. 70ರಷ್ಟು ಪಾಲು ರೈತರಿಗೆ ಹಾಗೂ ಶೇ. 30ರಷ್ಟು ಪಾಲು ಸರ್ಕಾರಕ್ಕೆ ಸಿಗಲಿದೆ. ಜನರ ಬದುಕಿಗೆ ಶಕ್ತಿ ತುಂಬಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಕಸ್ತೂರಿ ರಂಗನ್ ವರದಿ ಚರ್ಚೆ: ದೆಹಲಿಗೆ ಸರ್ವಪಕ್ಷ ನಿಯೋಗ

ಇನ್ನು ಕಸ್ತೂರಿ ರಂಗನ್ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ‘ಕಸ್ತೂರಿ ರಂಗನ್ ವರದಿಯ ಕುರಿತು ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಲಾಗುವುದು. ಈ ಗಂಭೀರ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಿದ್ದು, ರಾಜ್ಯದ ಹಿತದೃಷ್ಟಿಯಿಂದ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವೆ. ಸಂಸದ ಬಿ.ವೈ. ರಾಘವೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ದೆಹಲಿಗೆ ಕರೆದೊಯ್ದು ಪ್ರಧಾನಿ ಬಳಿ ಚರ್ಚಿಸಲಾಗುವುದು’ ಎಂದು ಹೇಳಿದರು.

ಇದನ್ನೂ ಓದಿ: ಬಂದರು ಪ್ರದೇಶದಲ್ಲಿ ಬೋಟ್ ಹತ್ತಿ ಸಮುದ್ರಕ್ಕಿಳಿದೇ ಬಿಟ್ರು ಸಿಎಂ ಡಿಕೆ ಶಿವಕುಮಾರ್

ಇದೇ ವೇಳೆ ತಮ್ಮ ಕರಾವಳಿ ಪ್ರವಾಸವನ್ನು ಟೀಕಿಸಿದ್ದ ಆರ್. ಅಶೋಕ್ ಅವರಿಗೆ ತಿರುಗೇಟು ನೀಡಿರುವ ಸಿಎಂ ‘ಅಶೋಕ್ ಅವರಿಗೆ ನಾಲ್ಕು ಮೀನು ಕಳುಹಿಸಲು ಹೇಳಿದ್ದೇನೆ’ ಎಂದರು.

ದೇವರು ಅವಕಾಶ ಮಾತ್ರ ಕೊಡ್ತಾನೆ: ಜನರ ರಕ್ಷಣೆಗೆ ಒಗ್ಗಟ್ಟಿನ ಕರೆ

‘ದೇವರು ವರವೂ ಕೊಡಲ್ಲ, ಶಾಪವೂ ಕೊಡಲ್ಲ, ಕೇವಲ ಅವಕಾಶ ಮಾತ್ರ ಕೊಡುತ್ತಾನೆ. ಕೈ ಇದೆ ದಾನ ಮಾಡಿದೆವು, ಕೈ ಇಲ್ಲದಿದ್ದರೆ ದಾನ ಮಾಡಲು ಸಾಧ್ಯವೇ? ಜನರ ಬದುಕಿಗೆ ಶಕ್ತಿ ತುಂಬಬೇಕೆಂಬುದೇ ನಮ್ಮ ಆಶಯ. ಜನ ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ. ಜನರ ಹಿತವನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ’ ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us