
ಶಿವಮೊಗ್ಗ, ಆಗಸ್ಟ್ 03: ಭದ್ರಾವತಿ ಪಟ್ಟಣದ ಜನ್ನಾಪುರದಲ್ಲಿರುವ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಮಲ್ಲೇಶ್ವರ ಸಭಾಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಉಮೇಶ್ ಅವರು ಸಾರ್ವಜನಿಕರಿಗೆ ಅನ್ನದಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಭದ್ರಾವತಿ ಶಾಸಕರ ಮಗ ಗಣೇಶ್ ಅವರು ಕೂಡ ವೇದಿಕೆಯಲ್ಲಿದ್ದರು.
ಅನ್ನದಾನ ಮಾಡುತ್ತಿದ್ದ ಉಮೇಶ್ ಅವರನ್ನು ವೇದಿಕೆ ಮೇಲೆ ಬರುವಂತೆ ಆಯೋಜಕರು ಹಾಗೂ ಶಾಸಕರ ಮಗ ಗಣೇಶ್ ಆಹ್ವಾನ ನೀಡಿದ್ದರು. ಆದರೆ, ಈ ಆಹ್ವಾನವನ್ನು ಉಮೇಶ್ ಸಮ್ಮತಿಸಲಿಲ್ಲ. ಭ್ರಷ್ಟರ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿ ಉಮೇಶ್ ವೇದಿಕೆ ಏರಲು ನೇರವಾಗಿ ನಿರಾಕರಿಸಿದರು ಎನ್ನಲಾಗಿದೆ.
ಉಮೇಶ್ ಅವರ ಈ ಹೇಳಿಕೆಯಿಂದ ಆಕ್ರೋಶಗೊಂಡ ಶಾಸಕ ಗಣೇಶ್ ಅವರ ಬೆಂಬಲಿಗರು ಮತ್ತು ಉಮೇಶ್ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಶಾಸಕರ ಬೆಂಬಲಿಗರು ಪೊಲೀಸ್ ಉಮೇಶ್ ಹಾಗೂ ಅವರ ಜೊತೆಯಲ್ಲಿದ್ದ ಸಹೋದರನ ಮಗ ಸುಹಾಸ್ ಮೇಲೆ ಕರುಣೆಯಿಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹಲ್ಲೆಯ ಕುರಿತಂತೆ ಸಂತ್ರಸ್ತರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ನಡೆದ ಈ ಪುಂಡಾಟಿಕೆಯನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ