ರಾಹುಕಾಲ ಬಿಟ್ಟು ಬಜೆಟ್ ಮಂಡಿಸಿದ್ದು ನಿಜವೆಂದ ಸಿದ್ದರಾಮಯ್ಯ! ಕೊಟ್ಟ ಕಾರಣ ಏನು ಗೊತ್ತಾ?

ಬಜೆಟ್ ಮಂಡನೆಗೆ ರಾಹುಕಾಲದ ಅಡ್ಡಿ ಇತ್ತೇ? ಈ ಹಿಂದೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಎತ್ತಿದ್ದ ಪ್ರಶ್ನೆಯನ್ನೇ ಪ್ರತಿಪಕ್ಷ ನಾಯಕ ಅಶೋಕ್ ಸಹ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರಿಸಿದ್ದು, ಸಮಯ ನೋಡಿ ಬಜೆಟ್ ಮಂಡಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಕಾರಣ ಇಲ್ಲಿದೆ.

ರಾಹುಕಾಲ ಬಿಟ್ಟು ಬಜೆಟ್ ಮಂಡಿಸಿದ್ದು ನಿಜವೆಂದ ಸಿದ್ದರಾಮಯ್ಯ! ಕೊಟ್ಟ ಕಾರಣ ಏನು ಗೊತ್ತಾ?
ಸಿಎಂ ಸಿದ್ದರಾಮಯ್ಯ
Image Credit source: ವಾರ್ತಾ ಇಲಾಖೆ
Edited By:

Updated on: Mar 25, 2026 | 1:19 PM

ಬೆಂಗಳೂರು, ಮಾರ್ಚ್ 25: ರಾಹುಕಾಲವನ್ನು (Rahu Kaal) ತಪ್ಪಿಸುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆಳಗ್ಗೆ 10.15ಕ್ಕೆ ಬಜೆಟ್ (Karnataka Budget) ಮಂಡನೆ ಸಮಯ ನಿಗದಿಪಡಿಸಿದ್ದು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದರು. ಇದೀಗ ವಿಧಾನಸಭೆಯಲ್ಲಿ ಕೂಡ ಆ ವಿಚಾರ ಚರ್ಚೆಯಾಗಿದೆ. ರಾಹುಕಾಲ ತಪ್ಪಿಸುವುದಕ್ಕಾಗಿಯೇ ಆ ಸಮಯ ನಿಗದಿ ಮಾಡಿದ್ದು ನಿಜ ಎಂದು ಖುದ್ದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ! ಅಲ್ಲದೆ, ಅದಕ್ಕೆ ಕಾರಣವನ್ನು ಕೂಡ ಕೊಟ್ಟಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬುಧವಾರ ಉತ್ತರ ನೀಡಿದರು. ಇದೇ ವೇಳೆ, ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಹುಕಾಲ ನೋಡಿಕೊಂಡು ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದ ಬಗ್ಗೆ ಉಲ್ಲೇಖಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹೌದು, ‘ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಾರೆ’ ಎಂಬುದು ನಿಜ ಎಂದರು.

ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಕ್ಕೆ ಸಿದ್ಧರಾಮಯ್ಯ ಕೊಟ್ಟ ಕಾರಣವೇನು?

ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂಬುದು ನಿಜ. ಮನೆಯವರು, ಅಧಿಕಾರಿಗಳ ಮಾತು ಕೇಳಬೇಕು ಅಲ್ಲವೇ? ನಿಮ್ಮಂಥವರ ಮಾತು ಕೇಳಬೇಕು ಅಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಅಶೋಕ್, ಅವತ್ತಿನ ಪರಿಸ್ಥಿತಿ ಬೇರೆ ಇತ್ತು. ಇಂದಿನ ಪರಿಸ್ಥಿತಿ ಬೇರೆ ಇದೆ. ಮುಂದೆಯೂ ನೀವು ಬಜೆಟ್ ಮಂಡನೆ ಮಾಡಬೇಕು ಅಲ್ಲವೇ? ಅದಕ್ಕಾಗಿ ಈ ಬಾರಿ ಕಾಲ ನೋಡಿದ್ದೀರಿ ಎಂದರು.

ಸಿದ್ದರಾಮಯ್ಯ ಹೇಳಿದ್ದೇನು? ವಿಡಿಯೋ ನೋಡಿ


ಅಶೋಕ್ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ರಾಹುಕಾಲ, ಯಮಗಂಡಕಾಲ ಮತ್ತು ಗುಳಿಕಕಾಲ ಇದನ್ನೆಲ್ಲಾ ನಾನು ನಂಬಲ್ಲ. ಅಧಿಕಾರಿಗಳ ಹಾಗೂ ಮನೆಯವರ ಮಾತು ಕೇಳಿ ಸಮಯ ನೋಡಿದ್ದೇನೆ ಅಷ್ಟೇ. ನಾನು ಶಿವರಾತ್ರಿ ಹಾಗೂ ಯುಗಾದಿಯಲ್ಲಿ ಮಾಂಸ ತಿಂದಿದ್ದೇನೆ. ನೀವು ತಿಂದಿದ್ದೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 10.15ಕ್ಕೇ ಸಿದ್ದರಾಮಯ್ಯ ಬಜೆಟ್ ಮಂಡನೆ ಏಕೆ? ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೊಟ್ಟರು ಅಚ್ಚರಿಯ ಕಾರಣ! ನಿಜವಿರಬಹುದೇ?

ಸಾಮಾನ್ಯವಾಗಿ ಬಜೆಟ್ ಮಂಡನೆ ಬೆಳಗ್ಗೆ 10 ಗಂಟೆ ಅಥವಾ 11 ಗಂಟೆಗೆ ಮಾಡುತ್ತಾರೆ. ಆದರೆ ಈ ಬಾರಿ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ ಸಮಯ ನಿಗದಿ ಮಾಡಿಕೊಂಡಿದ್ದಾರೆ. ಏಕೆಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು, ಬೆಳಗ್ಗೆ 10. 30 ರಿಂದ ರಾಹು ಕಾಲ ಇದೆ ಎಂಬುದು. ಬೆಳಗ್ಗೆ 7.30 ಗಂಟೆ ಯಿಂದ 9 ಗಂಟೆಯವರೆಗೂ ಗುಳಿಕಾಲ. #ಮೂಢನಂಬಿಕೆ ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಬಜೆಟ್ ದಿನವೇ ಫೇಸ್​​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Wed, 25 March 26

Follow Us