
ಬೆಂಗಳೂರು, (ಆಗಸ್ಟ್ 30): ವಾಲ್ಮೀಕಿ ಹಗರಣ ಪ್ರಕರಣದ (karnataka Valmiki Scam Case) ಆರೋಪಿಯಾಗಿರುವ ನಾಗೇಂದ್ರ (B Nagendra) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕೆಂದು ವಿಪಕ್ಷ ಬಿಜೆಪಿ (BJP) ಸದನದ ಒಳಗೆ ಹೊರಗೆ ಪ್ರತಿಭಟನೆ ನಡೆಸಿದ್ದು, ಬಳ್ಳಾರಿಗೆ ಪಾದಯಾತ್ರೆ ಸಹ ಹಮ್ಮಿಕೊಂಡಿತ್ತು. ಆದ್ರೆ, ಪಾದಯಾತ್ರೆಗೂ ಮೊದಲೇ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಇದೀಗ ಪಾದಯಾತ್ರೆ ಮಾಡಬೇಕಾ ಬೇಡ್ವಾ ಎನ್ನುವ ಗೊಂದಲ ಬಿಜೆಪಿಯಲ್ಲಿ ಶುರುವಾಗಿದೆ. ಹೌದು..ನಾಗೇಂದ್ರ ರಾಜೀನಾಮೆ ನೀಡಿದ ಮೇಲೆ ಯಾಕೆ ಪಾದಯಾತ್ರೆ ಎನ್ನುವುದು ಕೆಲವ ಅಭಿಪ್ರಾಯವಾಗಿದ್ದರೆ, ಇನ್ನೂ ಕೆಲವರು ಪಾದಯಾತ್ರೆ ಮಾಡೋಣ ಎನ್ನುವ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಪಕ್ಷದಲ್ಲೇ ಪಾದಯಾತ್ರೆ ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಈ ಬಗ್ಗೆ ಸ್ವತಃ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ನಾಗೇಂದ್ರ ರಾಜೀನಾಮೆಗಾಗಿ ಪಾದಯಾತ್ರೆ ಘೋಷಣೆ ಮಾಡಲಾಗಿತ್ತು. ನಾಗೇಂದ್ರ ರಾಜೀನಾಮೆ ಕೊಟ್ಟಾಗಿದೆ. ಪಾದಯಾತ್ರೆ ಉದ್ದೇಶ ಪಾದಯಾತ್ರೆ ಆರಂಭಕ್ಕೂ ಮೊದಲೇ ಈಡೇರಿದೆ. ಈಗ ಪಾದಯಾತ್ರೆಯ ಅಗತ್ಯವೇನು ಎಂದು ಕೆಲವು ನಾಯಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾಯಕರ ಅಪಸ್ವರದ ನಡುವೆಯೇ ಪಾದಯಾತ್ರೆ ನಡೆಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ಸಿದ್ಧತೆ ನಡೆಸಿದ್ದಾರೆ. ನಾಗೇಂದ್ರ ಒಂದೆ ವಿಚಾರ ಅಲ್ಲ, ಪಾದಯಾತ್ರೆಗೆ ಹತ್ತು ಹಲವು ಉದ್ದೇಶವಿದೆ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಸೆಪ್ಟೆಂಬರ್ 1ರಿಂದ ನಮ್ಮ ಪಾದಯಾತ್ರೆ ಆರಂಭವಾಗುತ್ತೆ. ಬರ ಮತ್ತು ಉತ್ತರಕರ್ನಾಟಕ ಅಭಿವೃದ್ಧಿ ಕುರಿತು ಪಾದಯಾತ್ರೆ ಮಾಡುತ್ತೇವೆ. ವಾಲ್ಮೀಕಿ ನಿಗಮದ ಹಣ ಸಂಪೂರ್ಣ ವಾಪಸಾಗಬೇಕು. ಸೆ.10ರಂದು ಬಳ್ಳಾರಿಯಲ್ಲಿ ಪಾದಯಾತ್ರೆ ಅಂತ್ಯವಾಗಲಿದೆ ಎಂದರು.
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆಯನ್ನ ಕೊಟ್ಟಿದ್ದಾರೆ. ಮತ್ಯಾಕೆ ಪಾದಯಾತ್ರೆ ಎಂಬ ಅನುಮಾನ ನಾಯಕರಲ್ಲಿತ್ತು. ಹೈಕಮಾಂಡ್ನವರ ಜತೆ ಚರ್ಚಿಸಿ ಕ್ಲಿಯರ್ ಮಾಡಿದ್ದೇವೆ. ಕುಮಾರಸ್ವಾಮಿಯವರ ಬಳಿಯೂ ನಾನು ಚರ್ಚೆ ಮಾಡುತ್ತೇನೆ. ನಮ್ಮ ಪಾದಯಾತ್ರೆಯಲ್ಲಿ ನಾಗೇಂದ್ರ ವಿಚಾರ ಒಂದೇ ಅಲ್ಲ. ಈ ಪಾದಯಾತ್ರೆಯಲ್ಲಿ ಹತ್ತು ಹಲವು ವಿಷಯಗಳು ಇವೆ ಎಂದು ಸ್ಪಷ್ಟಪಡಿಸಿದರು.
ಇನ್ನು ಈ ಬಿಜೆಪಿಯ ಬಳ್ಳಾರಿ ಪಾದಯಾತ್ರೆಗೆ ಮಿತ್ರ ಪಕ್ಷದ ನಾಯಕ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸಹ ಅಪಸ್ವರ ಎತ್ತಿದ್ದಾರೆ. ಬಿ.ನಾಗೇಂದ್ರ ರಾಜೀನಾಮೆ ಬಳಿಕವೂ ಪಾದಯಾತ್ರೆ ಯಾಕೆ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಪಾದಯಾತ್ರೆ ಏಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಪಾದಯಾತ್ರೆ ಬಗ್ಗೆ ಬಿಜೆಪಿಯವರು ನನ್ನ ಜೊತೆ ಚರ್ಚಿಸಿಲ್ಲ. ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟಾಗಿದೆ. ಯಾವ ವಿಚಾರ ಇಟ್ಕೊಂಡು ಪಾದಯಾತ್ರೆ ಮಾಡ್ತಾರೋ ಗೊತ್ತಿಲ್ಲ. ಬಿಜೆಪಿಯವರ ಪಾದಯಾತ್ರೆ ಸಂದರ್ಭದಲ್ಲಿ ನಾನು ಇರಲ್ಲ. ನಾನು ವಾಪಸ್ ಬರುವುದೇ ಸೆಪ್ಟೆಂಬರ್ 12ಕ್ಕೆ . ನಮ್ಮ ಮುಖಂಡರಿಗೆ ಸಾಂಕೇತಿಕವಾಗಿ ಹೋಗಲು ಹೇಳಿದ್ದೇನೆ ಎಂದಿದ್ದಾರೆ.