Sumalatha Press Meet: ಮಂಡ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ: ಸಂಸದೆ ಸುಮಲತಾ

| Updated By: preethi shettigar

Updated on: Jul 17, 2021 | 2:05 PM

ಸುಮಲತಾ ಸುದ್ದಿಗೋಷ್ಠಿ: ರಾಜ್ಯಪಾಲರಾದ ಥಾವರ್​ ಚಂದ್ ಗೆಹ್ಲೋಟ್​​ ಒಂದಷ್ಟು ಸಲಹೆ ನೀಡಿದ್ದಾರೆ. ಅಲ್ಲದೆ ಗಣಿಗಾರಿಕೆ ಸಮಸ್ಯೆಗಳ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ತಿಳಿಸುವುದಾಗಿಯೂ ಹೇಳಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ತಿಳಿಸಿದ್ದಾರೆ.

Sumalatha Press Meet: ಮಂಡ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ: ಸಂಸದೆ ಸುಮಲತಾ
ಸುಮಲತಾ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆ ( (Illegal Mining) ಬ್ಲಾಸ್ಟಿಂಗ್​ನಿಂದಾಗಿ ಸುತ್ತಮುತ್ತ ಹಳ್ಳಿಗಳಿಗೆ, ರೈತರಿಗೆ ಮತ್ತು ಬಡಜನರಿಗೆ ಯಾವ ರೀತಿಯ ತೊಂದರೆಗಳಾಗಿದೆ ಎಂಬುವುದರ ಬಗ್ಗೆ ರಾಜ್ಯಪಾಲರಾದ (Governor of Karnataka) ಥಾವರ್​ ಚಂದ್ ಗೆಹ್ಲೋಟ್ ಅವರಿಗೆ ನಾನು ಮಾಹಿತಿ ನೀಡಿದ್ದೇನೆ. ಅವರು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಟಾಸ್ಕ್ ಫೋರ್ಸ್​ ಮಾದರಿಯಲ್ಲಿ ತನಿಖೆ ಮಾಡಿ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ  ಎಂದು ಮಂಡ್ಯ ಸಂಸದೆ ಸುಮಲತಾ (Sumalatha Ambareesh) ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕು. ಹಳ್ಳಿ ಮತ್ತು ಅಲ್ಲಿನ ಪರಿಸರಕ್ಕೆ ಅಕ್ರಮ ಗಣಿಗಾರಿಕೆಯ ಕಾರಣದಿಂದಾಗಿ ಯಾವ ಸಮಸ್ಯೆಗಳಾಗುತ್ತಿದೆ, ಕೆಆರ್​ಎಸ್ ಅಣೆಕಟ್ಟಿಗೆ ಯಾವ ರೀತಿಯ ಸಮಸ್ಯೆಯಾಗುತ್ತಿದೆ ಎನ್ನುವುದನ್ನು ಪರಿಶೀಲಿಸಬೇಕು. ಕೆಆರ್​ಎಸ್ ಅಣೆಕಟ್ಟಿನಿಂದ 6.5 ಮೀಟರ್​ ದೂರದಲ್ಲಿಯೇ ಬ್ಲಾಸ್ಟಿಂಗ್ ಆಗುತ್ತಿದೆ. ಹೀಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮ ಗಣಿಗಾರಿಕೆಗೆ ಅಂತ್ಯ ಹಾಡಬೇಕು ಎಂದು ತಿಳಿಸಿದ್ದಾರೆ.

ಬಳಿಕ ಹೋಟೆಲ್​ನಲ್ಲಿ ನಡೆದ ನಟ ದರ್ಶನ್ ಅವರ ಹಲ್ಲೆ ವಿಚಾರವಾಗಿ ಮಾತನಾಡಿದ ಸಂಸದೆ ಸುಮಲತಾ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ವಿಚಾರವಾಗಿ ಗೃಹ ಸಚಿವರಿಗೆ ದೂರು ಕೂಡಾ ಕೊಟ್ಟಿದಾರೆ. ಹೀಗಾಗಿ ಈ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ನಾನು ಈ ವಿಚಾರದಲ್ಲಿ ಹೇಳಿಕೆ ಕೊಡುವುದು ಸರಿಯಲ್ಲ. ತನಿಖೆ ಆಗಲಿ, ಸತ್ಯಾಂಶ ಹೊರಬರಲಿ ನಂತರ ಮಾತಾಡೋಣ ಎಂದು ಹೇಳಿದ್ದಾರೆ.

 ಅಕ್ರಮ ಗಣಿಗಾರಿಕೆ ಕುರಿತು ರಾಜ್ಯಪಾಲರಿಗೆ ದೂರು
ಮಂಡ್ಯ ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಅದರಿಂದಾಗಿ ಕೆಆರ್​ಎಸ್ ಅಣೆಕಟ್ಟಿಗೂ  ಸಮಸ್ಯೆಯಾಗುತ್ತಿದೆ ಎಂದು ಧ್ವನಿ ಎತ್ತಿದ್ದ ಸಂಸದೆ ಸುಮಲತಾ ಅಂಬರೀಶ್  ಈ ಬಗ್ಗೆ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಹತ್ತಿಕ್ಕಲೇ ಬೇಕು ಅದಕ್ಕಾಗಿ ಕಾನೂನುಬದ್ಧವಾಗಿ ಹೋರಾಡಲು ಶತಸಿದ್ಧ, ಯಾವುದೇ ಬೆದರಿಕೆಗಳಿಗೂ ಜಗ್ಗುವುದಿಲ್ಲ ಎಂದು ಹೇಳಿದ್ದ ಸುಮಲತಾ ಅಂಬರೀಶ್, ಗಣಿಗಾರಿಕೆ ನಡೆಸಲಾಗುತ್ತಿರುವ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಅವರು, ದೊಡ್ಡ ದೊಡ್ಡವರೇ ಬೇನಾಮಿ ಹೆಸರಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ. ಇಷ್ಟೊಂದು ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ? ಇದೆಲ್ಲಾ ತಡೆಹಿಡಿಯಬೇಕಲ್ಲವಾ ಎಂದು ಪ್ರಶ್ನೆ ಎತ್ತಿದ್ದರು. ಗಣಿಗಾರಿಕೆ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮೌನವಾಗಿರುವುದೇಕೆ ಎಂದು ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದರು.

ಜನರಿಗೆ ಉಸಿರಾಟ ಸಮಸ್ಯೆ, ಹೃದ್ರೋಗ ಸಮಸ್ಯೆಯಾಗಿದೆ. ಹಂಗರಹಳ್ಳಿಯಲ್ಲಿ ದಿನಕ್ಕೆ 500 ಗಣಿ ಲಾರಿಗಳು ಹೋಗ್ತಿದೆ. ಸರ್ಕಾರಕ್ಕೆ ರಾಜಧನವನ್ನೂ ಕಟ್ಟದೆ, ಯಾರೇನು ಮಾಡಿಕೊಳ್ತಾರೆ ಎಂಬ ಭಾವನೆ ಶಾಸಕರಿಗಿದೆ. ನೀವು ರಾಜಕೀಯದಲ್ಲೇ ಸಿನಿಮಾ ತೋರಿಸುತ್ತಿದ್ದೀರಾ. ಒಂದೇ ದಿನಕ್ಕೆ ಇಷ್ಟೊಂದು ಪ್ರಮಾಣದ ಅಕ್ರಮ ನನಗೆ ಕಂಡಿದೆ. ಇದು ನಿಮಗೆ ಕಂಡಿಲ್ಲವೇ ಎಂದು ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:
ಅಕ್ರಮ ಗಣಿಗಾರಿಕೆ ಹತ್ತಿಕ್ಕಲು ರಾಜಭವನದ ಕದ ತಟ್ಟಿದ ಸುಮಲತಾ; ರಾಜ್ಯಪಾಲರಿಗೆ ದೂರು

ಬೇಬಿಬೆಟ್ಟದಲ್ಲಿ ಸಂಸದೆ ಸುಮಲತಾ ಪರಿಶೀಲನೆ: ಗಣಿಗಾರಿಕೆ ಪರ, ವಿರೋಧ ಘೋಷಣೆ ಕೂಗಿದ ಜನರು

Published On - 1:34 pm, Sat, 17 July 21