ಬೆಂಗಳೂರು, ಮೇ 23: ಬೆಂಕಿ, ಕಾಲ್ತುಳಿತ ಮತ್ತು ವೈದ್ಯಕೀಯ ಬಿಕ್ಕಟ್ಟುಗಳಂತಹ ಸಂಭಾವ್ಯ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ತರಬೇತಿ ನೀಡಲು ದೇವಾಲಯ ಕಾರ್ಯಪಡೆ (TTF) ರಚನೆ ಮಾಡುವ ಬಗ್ಗೆ ಹಿರಿಯ ಶಾಸಕ ಆರ್ವಿ ದೇಶಪಾಂಡೆ ನೇತೃತ್ವದ ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2’ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆಯೋಗವು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಎಂಟನೇ ಶಿಫಾರಸು ವರದಿಯನ್ನು ಸಲ್ಲಿಸಿದೆ. ದೇವಾಲಯ ಕಾರ್ಯಪಡೆಯು ಭಕ್ತರ ಸಂದಣಿಯನ್ನು ಉತ್ತಮವಾಗಿ ನಿರ್ವಹಿಸಬಹುದು ಮತ್ತು ಸುರಕ್ಷತೆ, ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನೆರವಾಗಬಹುದು. ಇದರಿಂದ ಕಾಲ್ತುಳಿತದಂಥ ಅವಘಡಗಳನ್ನು ತಡೆಯಬಹುದು ಎಂದು ಆಯೋಗ ಶಿಫಾರಸಿನಲ್ಲಿ ತಿಳಿಸಿದೆ.
ಕಾರ್ಯಪಡೆಯು ದೇವಾಲಯ ಸೇವೆಗಳ ದಕ್ಷ ನಿರ್ವಹಣೆಯನ್ನು ಉತ್ತೇಜಿಸಲಿದೆ. ಟಿಕೆಟ್ ಕೌಂಟರ್ಗಳು, ದರ್ಶನದ ಸರದಿ ಸಾಲುಗಳು ಮತ್ತು ಪ್ರಸಾದ ವಿತರಣೆಗೆ ಕ್ರಮಬದ್ಧವಾದ ಸರದಿ ಸಾಲುಗಳನ್ನು ನಿರ್ವಹಿಸುವುದನ್ನು ಖಾತರಿಪಡಿಸಲಿದೆ ಎಂದು ಆಯೋಗ ಹೇಳಿದೆ.
ದೇಗುಲಗಳಲ್ಲಿ ಪ್ರವೇಶ ಕೇಂದ್ರಗಳನ್ನು ನಿಯಂತ್ರಿಸುವುದು, ಬ್ಯಾರಿಕೇಡ್ಗಳನ್ನು ಸ್ಥಾಪಿಸುವುದು, ಅಡಚಣೆಗಳು ಮತ್ತು ದಟ್ಟಣೆಯನ್ನು ತಪ್ಪಿಸಲು ನಿರ್ದೇಶನ ನೀಡುವಂಥ ಸುರಕ್ಷತಾ ಪ್ರೋಟೋಕಾಲ್ಗಳನ್ನು ದೇವಾಲಯ ಕಾರ್ಯಪಡೆ ಜಾರಿಗೆ ತರುತ್ತದೆ. ಸಮಗ್ರ ತುರ್ತು ಪ್ರತಿಕ್ರಿಯೆ ಯೋಜನೆಯನ್ನು ರಚಿಸಲು ಇದು ಸ್ಥಳೀಯ ಅಧಿಕಾರಿಗಳು, ವೈದ್ಯಕೀಯ ಸೇವೆಗಳು ಮತ್ತು ಅಗ್ನಿಶಾಮಕ ಸುರಕ್ಷತಾ ಸಿಬ್ಬಂದಿಯೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ. ದೊಡ್ಡ ಕಾರ್ಯಕ್ರಮಗಳ ಸಮಯದಲ್ಲಿ, ತಾತ್ಕಾಲಿಕ ವೈದ್ಯಕೀಯ ಬೂತ್ಗಳನ್ನು ಸ್ಥಾಪಿಸುವುದು ಮತ್ತು ದೇವಾಲಯದ ಒಳಗೆ ಮತ್ತು ಸುತ್ತಮುತ್ತ ಭದ್ರತಾ ಉಪಸ್ಥಿತಿಯನ್ನು ಹೆಚ್ಚಿಸುವುದು ಅಗತ್ಯವಾಗಬಹುದು. ಆ ನಿಟ್ಟಿನಲ್ಲಿಯೂ ದೇವಾಲಯ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ ಎಂದು ಶಿಫಾರಸು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ: ಹಠ ಸಾಧಿಸಿ ಗೆದ್ದ ಡಿಕೆ ಶಿವಕುಮಾರ್
ಸರದಿ ಸಾಲು ವ್ಯವಸ್ಥೆ, ಪ್ರವೇಶ ಮತ್ತು ನಿರ್ಗಮನ ಸ್ಥಳ, ಸುರಕ್ಷತಾ ಪ್ರೋಟೋಕಾಲ್ಗಳು ಮತ್ತು ದೇವಾಲಯದ ಸಮಯ ಅಥವಾ ಕಾರ್ಯವಿಧಾನಗಳಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಭಕ್ತರಿಗೆ ತಿಳಿಸಲು ಕಾರ್ಯಪಡೆ ಸ್ಪಷ್ಟ ಸೂಚನಾ ಫಲಕಗಳು, ಧ್ವನಿವರ್ಧಕಗಳು ಮತ್ತು ಇತರ ಸಂವಹನ ಸಾಧನಗಳನ್ನು ಬಳಸಲಿದೆ. ಅದಕ್ಕೆ ಅನುಗುಣವಾಗಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದತ್ತಿ ನಿಯಮಗಳಿಗೆ ಸೂಕ್ತ ನಿಬಂಧನೆಗಳನ್ನು ತಿದ್ದುಪಡಿ ಮಾಡಬಹುದು ಎಂದು ಆಯೋಗ ಶಿಫಾರಸು ಮಾಡಿದೆ.