ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ: ಹಠ ಸಾಧಿಸಿ ಗೆದ್ದ ಡಿಕೆ ಶಿವಕುಮಾರ್
ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಸಂಬಂಧ ಭಾರೀ ವಿರೋಧ, ಆಕ್ಷೇಪಗಳು ವ್ಯಕ್ತವಾಗಿವೆ. ಡಿಕೆ ಶಿವಕುಮಾರ್ ಅವರ ನಡೆಗೆ ವಿರೋಧಗಳು ವ್ಯಕ್ತವಾಗಿವೆ. ಆದರೂ ಹಲವರ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಸರ್ಕಾರ ಗ್ರೀನ್ಸಿಗ್ನಲ್ ನೀಡಿದೆ. ಇದರೊಂದಿಗೆ ಡಿಕೆ ಶಿವಕುಮಾರ್ ತಮ್ಮ ಹಠ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಈ ಬಗ್ಗೆ ಡಿಕೆಶಿ ಏನು ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಮೇ 22): ರಾಮನಗರ ಜಿಲ್ಲೆಯನ್ನ (ramanagara district) ಬೆಂಗಳೂರು ದಕ್ಷಿಣ ಜಿಲ್ಲೆ (Bengaluru South District) ಎಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇಂದು (ಮೇ 22) ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸ ಸಚಿವ ಸಂಪುಟ (karnataka Cabint) ಸಭೆಯಲ್ಲಿ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರೇ ಸ್ಪಷ್ಟಪಡಿಸಿದ್ದು, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸಂಪುಟದಲ್ಲಿ ತೀರ್ಮಾನ ಆಗಿದೆ. ರಾಮನಗರವೇ ಜಿಲ್ಲಾ ಕೇಂದ್ರ ಸ್ಥಾನ ಆಗಿರುತ್ತೆ. ರಾಮನಗರದ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರು ನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದನ್ನು ಖಚಿತಪಡಿಸಿದರು. ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಸಂಬಂಧ ಅಧಿಕೃತವಾಗಿ ಆದೇಶ ಹೊರ ಬೀಳಲಿದೆ. ಜಿಲ್ಲೆಗೆ ರಾಮನಗರವೇ ಜಿಲ್ಲಾಕೇಂದ್ರ ಆಗಿರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಮನಗರ ಇವತ್ತಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಸಿಕೊಳ್ಳುವುದು: ಡಿಕೆ ಶಿವಕುಮಾರ್, ಡಿಸಿಎಂ
ರಾಮನಗರ ಹೆಸರು ಬದಲಾವಣೆಯ ಅಧಿಸೂಚನೆ ಇವತ್ತು ಆಗುತ್ತದೆ. ಹೆಸರು ಬದಲಾವಣೆ ಮಾಡಲು ಯಾವುದೇ ಹಣ ಖರ್ಚಾಗಲ್ಲ. ರಾಮನಗರ ಮೊದಲು ಬೆಂಗಳೂರು ಜಿಲ್ಲೆಗೆ ಸೇರಿತ್ತು. ಕನಕಪುರ, ಚನ್ನಪಟ್ಟಣ ಬೆಂಗಳೂರು ಜಿಲ್ಲೆಗೆ ಸೇರಿತ್ತು. ಹಿಂದೆ ನಾನು ಕೂಡ ಬೆಂಗಳೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಬೆಂಗಳೂರು ಹೆಸರು ಉಳಿಸಬೇಕಿತ್ತು. ಅದಕ್ಕಾಗಿ ಹೆಸರು ಬದಲಾವಣೆ ಮಾಡಿದ್ದೇವೆ ಎಂದರು.
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಜಿಲ್ಲೆ ಈ ಮೊದಲು ಬೆಂಗಳೂರು ಗ್ರಾಮಾಂತರ ಎಂದಿತ್ತು. ನಂತರ ಬೆಂಗಳೂರು ನಗರ ಜಿಲ್ಲೆ ಎಂದಾಗಿತ್ತು. ರಾಮನಗರದ ಹೆಸರನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿ ತೀರ್ಮಾನ ಕೈಗೊಂಡು, ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರು ನಾಮಕರಣ ಮಾಡಲು ಸಂಪುಟದಲ್ಲಿ… pic.twitter.com/vE6DlMu4CR
— DK Shivakumar (@DKShivakumar) May 22, 2025
ನನ್ನನ್ನ ಕೂಡ ನೀವು ಬೆಂಗಳೂರು ದಕ್ಷಿಣ ಜಿಲ್ಲೆಯವರು ಎಂದು ಕರೆಯಬೇಕು. ಹೆಸರು ಬದಲಾವಣೆಗೆ ಕೇಂದ್ರಕ್ಕೆ ಯಾವುದೇ ಅಧಿಕಾರ ಇರಲಿಲ್ಲ. ಕೇಂದ್ರದ ಗಮನಕ್ಕೆ ತರಬೇಕಿತ್ತು, ಹಾಗಾಗಿ ಹೆಸರನ್ನು ಕಳುಹಿಸಿಕೊಟ್ಟಿದ್ದೆವು ಅಷ್ಟೇ. ವಿಶ್ವದಲ್ಲೇ ಬೆಂಗಳೂರು ದಕ್ಷಿಣ ದೊಡ್ಡದಾಗಿ ಬೆಳೆಯುತ್ತಿದೆ. ಕಾನೂನು ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ಹೆಸರು ಬದಲಾವಣೆ ಮಾಡಿದ್ದೇವೆ. ಉಳಿದಂತೆ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗ ಹೇಗಿದೆಯೋ ಹಾಗೆಯೇ ಇರಲಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Thu, 22 May 25








