ಮುಂದಿನ ಎರಡು ತಿಂಗಳು ರಾಜ್ಯದಲ್ಲಿ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ: ಸಚಿವ ಆರ್ ಅಶೋಕ್

ಪಾಸಿಟಿವ್ ಬಂದ ಸೋಂಕಿತರ ಕುಟುಂಬಕ್ಕೆ ಜಿಂಕ್ ಗುಳಿಗೆಗಳನ್ನು ಕಳುಹಿಸುತ್ತೇವೆ. ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ತಕ್ಷಣದಿಂದ ನಿರತರಾಗಲಿದ್ದಾರೆ ಎಂದು ಅವರು ತಿಳಿಸಿದರು.

ಮುಂದಿನ ಎರಡು ತಿಂಗಳು ರಾಜ್ಯದಲ್ಲಿ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ: ಸಚಿವ ಆರ್ ಅಶೋಕ್
ಸಚಿವ ಆರ್. ಅಶೋಕ್

Updated on: Apr 27, 2021 | 5:53 PM

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಯಾವುದೇ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆಗಳನ್ನು ನಡೆಸುವಂತಿಲ್ಲ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್‌ ತಿಳಿಸಿದ್ದಾರೆ. ಪಾಸಿಟಿವ್ ಬಂದ ಸೋಂಕಿತರ ಕುಟುಂಬಕ್ಕೆ ಜಿಂಕ್ ಗುಳಿಗೆಗಳನ್ನು ಕಳುಹಿಸುತ್ತೇವೆ. ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ತಕ್ಷಣದಿಂದ ನಿರತರಾಗಲಿದ್ದಾರೆ ಎಂದು ಅವರು ತಿಳಿಸಿದರು.

ಖಾಸಗಿ ಪ್ರಯೋಗಾಲಯದವರು ಟೆಸ್ಟ್‌ ರಿಪೋರ್ಟ್​ನ್ನು ಜನರಿಗೆ ನೀಡುತ್ತಿದ್ದಾರೆ. ಆದರೆ ಬಿಬಿಎಂಪಿ ವಾರ್ ರೂಮ್‌ಗೆ ಈಬಗ್ಗೆ ಮಾಹಿತಿ ನೀಡುತ್ತಿಲ್ಲ. ಇದರಿಂದ ಸೋಂಕಿತರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅಂತಹ ಖಾಸಗಿ ಪ್ರಯೋಗಾಲಯದವರಿಗೆ ಎಚ್ಚರಿಕೆ ನೀಡಿದ್ದೇವೆ. ಖಾಸಗಿ ಪ್ರಯೋಗಾಲಯದವರು ಮೊದಲು ಬಿಬಿಎಂಪಿ ಪೋರ್ಟಲ್‌ಗೆ ಮಾಹಿತಿ ನೀಡಬೇಕು. ಬೆಡ್ ವ್ಯವಸ್ಥೆಯ ಮಾಹಿತಿಯನ್ನು ಪಬ್ಲಿಕ್‌ ಡೊಮೈನ್‌ಗೆ ಹಾಕುತ್ತೇವೆ. ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿರುವ ಬಗ್ಗೆ ಅಲ್ಲಿ ಸೂಕ್ತ ಮಾಹಿತಿ ಸಿಗಲಿದೆ. ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ತಿಳಿಸಿದರು.

ವಿವಿಧ ಇಲಾಖೆ ಸಿಬ್ಬಂದಿಗೆ ಹಾಜರಾತಿ ಕಡ್ಡಾಯ
ಕಂದಾಯ, ಗೃಹ, ಒಳಾಡಳಿತ, ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳ ಶೇಕಡಾ 100ರಷ್ಟು ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ-ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ, ಇಂಧನ, ಆರ್ಥಿಕ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ), ಪಶುಸಂಗೋಪನೆ-ಮೀನುಗಾರಿಕೆ ಇಲಾಖೆ, ಕೃಷಿ, ಕಾರ್ಮಿಕ, ತೋಟಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳಿಗೆ ವಿನಾಯತಿ ನೀಡಲಾಗಿದ್ದು, ಶೇ 50ರಷ್ಟು ಅಧಿಕಾರಿ, ಸಿಬ್ಬಂದಿ ವರ್ಗ ಕೆಲಸಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಆದರೆ ಅಗತ್ಯ ಇದ್ದಾಗ ಸೂಚನೆ ನೀಡಿದ ತಕ್ಷಣ ಕೆಲಸಕ್ಕೆ ಹಾಜರಾಗಬೇಕು ಎಂಬ ನಿಯಮ ವಿಧಿಸಲಾಗಿದೆ. ದೃಷ್ಟಿಹೀನ, ದೈಹಿಕ ಅಂಗವೈಕಲ್ಯ, ಗರ್ಭಿಣಿ ಮಹಿಳಾ ಸಿಬ್ಬಂದಿಗಳು ಕಚೇರಿಗೆ ಹಾಜರಾತಿ ವಿನಾಯಿತಿ ನೀಡಲಾಗಿದ್ದು, ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇರತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಆದೇಶವು ಮೇ 12 ರವರೆಗೂ ಜಾರಿಯಲ್ಲಿ ಇರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

(The inauguration and stone laying ceremony prohibited for the next two months in Karnataka says revenue Minister R Ashok )