
ಹಾಸನ/ಕಾರವಾರ, ಸೆಪ್ಟೆಂಬರ್ 15: ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಭವಿಸಿದ ದುರಂತದಲ್ಲಿ ನೀರಲ್ಲಿ ಮುಳುಗಿ ಒಟ್ಟು ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಹೊಳೆನರಸೀಪುರದಲ್ಲಿ ಜಾನುವಾರು ಮೈತೊಳೆಯಲು ಹೋದವರು ನೀರುಪಾಲಾಗಿದ್ದರೆ, ಇತ್ತ ಶಿರಸಿಯಲ್ಲಿ ಗೆಳೆಯರ ಜೊತೆ ಈಜಲು ತೆರಳಿದ್ದ 17 ವರ್ಷದ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಪ್ರಕರಣಗಳು ದಾಖಲಾಗಿವೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಂಡಿಶೆಟ್ಟಿಹಳ್ಳಿಯಲ್ಲಿ ಜಾನುವಾರು ಮೈತೊಳೆಯಲು ಹೋಗಿದ್ದ ಇಬ್ಬರು ಕೆರೆಪಾಲಾಗಿದ್ದಾರೆ. ಕೆಂಗೇಗೌಡ(60) ಮತ್ತು ಕುಮಾರ(30) ಮೃತರಾಗಿದ್ದು, ಕೆರೆಯಲ್ಲಿ ಮುಳುಗುತ್ತಿದ್ದ ಕೆಂಗೇಗೌಡ ರಕ್ಷಣೆಗೆ ಕುಮಾರ ತೆರಳಿದ್ದರು. ಆದರೆ ಕೆರೆಯಿಂದ ಹೊರಬರಲಾಗದೆ ಇಬ್ಬರೂ ಮೃಪಟ್ಟಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಇವರಿಬ್ಬರೂ ಕೆರೆ ಬಳಿ ತೆರಳಿದ್ದರು ಎನ್ನಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶವಗಳಿಗಾಗಿ ಶೋಧ ಕಾರ್ಯ ನಡೆದಿದ್ದು, ಹೊಳೆನರಸೀಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಗಣೇಶ ಹಬ್ಬದ ಬೆನ್ನಲ್ಲೇ ಸೂತಕದ ಛಾಯೆ: ಕರ್ನಾಟಕದ ವಿವಿಧೆಡೆ ಪ್ರತ್ಯೇಕ ಅವಘಡಗಳಲ್ಲಿ 12 ಮಂದಿ ಸಾವು
ಶಿರಸಿ ತಾಲೂಕಿನ ಬನವಾಸಿಯ ಸುಗಾವಿ ಗ್ರಾಮದಲ್ಲಿ ಭಟ್ರಕೆರೆಗೆ ಈಜಲು ಹೋಗಿದ್ದ ಮೂವರ ಪೈಕಿ ಓರ್ವ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸುನೀಲ ಅಲಿಯಾಸ್ ಸುಜಯ್ ಕೃಷ್ಣ ಚೆನ್ನಯ್ಯ (17) ಮೃತ ದುರ್ದೈವಿ. ಕೆರೆಯ ಮಧ್ಯದಲ್ಲಿ ಮುಳುಗಿ ಸುಜಯ್ ಕೃಷ್ಣ ಪ್ರಾಣಬಿಟ್ಟಿದ್ದು, ಶವಕ್ಕಾಗಿ ಶೋಧ ನಡೆಸಿ ಮಾರಿಕಾಂಬಾ ಲೈಫ್ ಗಾರ್ಡ್ ತಂಡ 15 ಅಡಿ ಆಳದಲ್ಲಿದ್ದ ಮೃತದೇಹ ಹೊರಕ್ಕೆ ತೆಗೆದಿದೆ. ಸ್ಥಳಕ್ಕೆ ಬನವಾಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.