25 ವರ್ಷದಲ್ಲಿ ಒಂದೂ ರಜೆ ಪಡೆಯದ ಮೋದಿಗೆ ಗೌರವ ಸಲ್ಲಿಸಲು ಸೇವಾ ಸಂಕಲ್ಪ ಅಭಿಯಾನ: ನಡ್ಡಾ
ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ರಾಜಕೀಯ ಜೀವನದ ಅಂಗವಾಗಿ, ಎನ್ಡಿಎ ಮೈತ್ರಿಕೂಟ ಸೆ.17ರಿಂದ ಒಂದು ತಿಂಗಳ 'ಸೇವಾ ಸಂಕಲ್ಪ' ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದಡಿ ದೇಶಾದ್ಯಂತ ಸರ್ಕಾರಿ ಯೋಜನೆಗಳ ಜಾಗೃತಿ, ರಕ್ತದಾನ, ಸ್ವಚ್ಛತೆ, ಸಂವಾದ, ಯಾತ್ರೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ಜೆಪಿ ನಡ್ಡಾ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸೇವಾ ಸಂಕಲ್ಪ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 15): ರಾಜಸ್ಥಾನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಮತ್ತೊಮ್ಮೆ ಪ್ರಧಾನಿ ಮೋದಿ ಕಾರ್ಯಕ್ರಮಗಳಿಗೆ ಜನ ಒಪ್ಪಿದ್ದಾರೆ.ಡಬಲ್ ಎಂಜಿನ್ ಸರ್ಕಾರ ಅಲ್ಲಿ ಮತ್ತೆ ಜನಾಧಿಕಾರ ಪಡೆದಿದೆ. ಸೆ. 17 ರಿಂದ ಸೇವಾ ಸಂಕಲ್ಪ ಅಭಿಯಾನ ನಡೆಸುತ್ತಿದ್ದು, ಸುಶಾಸನ, ಜನ ಕಲ್ಯಾಣ ಪ್ರಧಾನಿ ಮೋದಿಯವರ ಆದ್ಯತೆಯಾಗಿದೆ. ಸೇವೆ, ಬದ್ಧತೆ, ಸಮರ್ಪಣಾ ಮನೋಭಾವದ ಮೂಲಕ ಮೋದಿ ಕೆಲಸ ಮಾಡುತ್ತಿದ್ದಾರೆ. 2047ಕ್ಕೆ ವಿಕಸಿತ ಭಾರತ ಮೋದಿಯವರ ಗುರಿ. ಜನರಿಗಾಗಿ ಸೇವೆ ಮಾಡುತ್ತಿರುವ ವ್ಯಕ್ತಿಯ ಸೇವೆ 25 ವರ್ಷಗಳನ್ನು ಪೂರೈಸಿದೆ. ಈ 25 ವರ್ಷಗಳ ಯಾತ್ರೆ ಸೇವೆಯ ಯಾತ್ರೆ. ರಾಜ್ಯದಿಂದ ಕೇಂದ್ರದವರೆಗೆ ಅವರ ಬದ್ದತೆ, ಸೇವಾ ಮನೋಭಾವ ಬದಲಾಗಲಿಲ್ಲ. ಪ್ರಧಾನಮಂತ್ರಿ ಕಳೆದ 25 ವರ್ಷಗಳಲ್ಲಿ ಒಂದೂ ರಜೆ ಪಡೆಯದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಪ್ರಧಾನ ಸೇವಕನ ರೂಪದಲ್ಲಿ ಮೋದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಗೌರವ ಸಲ್ಲಿಸಲು ಒಂದು ತಿಂಗಳ ಸೇವಾ ಸಂಕಲ್ಪ ಅಭಿಯಾನ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಮೋದಿ ಹೇಳಿದ್ದನ್ನು ಮಾಡಿದ್ರು, ಹೇಳದಿರುವುದನ್ನು ಮಾಡಿ ತೋರಿಸಿದ್ರು
1 ತಿಂಗಳ ಬಿಜೆಪಿ ಸೇವಾ ಸಂಕಲ್ಪ ಅಭಿಯಾನದ ಕುರಿತಾಗಿ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ನಡ್ಡಾ, ಅಕ್ಟೋಬರ್ 17ರಂದು ಸುಶಾಸನ ಸಂವಾದ ನಡೆಸುತ್ತೇವೆ. ಈ ಒಂದು ತಿಂಗಳಲ್ಲಿ ದೇಶಾದ್ಯಂತ 12 ಕಾರ್ಯಕ್ರಮ ನಡೆಸುತ್ತಿದ್ದೇವೆ. ಸೇವಾ ಸುಶಾಸನ ಮತ್ತು ಬಡವರ ಕಲ್ಯಾಣ ಮೋದಿಯವರ ಸಂಕಲ್ಪ. ಮೋದಿಯವರು ರಾಜಕೀಯದ ದಿಕ್ಕು, ದೆಸೆಗಳನ್ನೇ ಬದಲಾಯಿಸಿದ್ದಾರೆ. ತುಷ್ಟೀಕರಣ, ಕುಟುಂಬ ರಾಜಕಾರಣ, ಅಸಮಾನತೆ, ಅಭಿವೃದ್ಧಿ ಶೂನ್ಯ ಜನವಿರೋಧಿ ಆಡಳಿತದಿಂದ ದೇಶದ ರಾಜಕೀಯ ಸಿಲುಕಿತ್ತು. ಮೋದಿ ಬಂದ ನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಜನರ ಬಳಿ ರಿಪೋರ್ಟ್ ಕಾರ್ಡ್ ತೆಗೆದುಕೊಂಡು ಹೋಗುವ ಸಂಪ್ರದಾಯ ಶುರುಮಾಡಿದ್ದು ಮೋದಿ. ಮೋದಿ ಹೇಳಿದ್ದನ್ನು ಮಾಡಿದರು, ಹೇಳದಿರುವುದನ್ನು ಮಾಡಿ ತೋರಿಸಿದರು ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ಸಾರ್ವಜನಿಕ ಸೇವೆಗೆ 25ರ ಮೈಲಿಗಲ್ಲು: ಸೆ.17 ರಿಂದ ಅ.17ರವರೆಗೆ ‘ಸೇವಾ ಸಂಕಲ್ಪ’ ಅಭಿಯಾನ
ಭಾರತ ಬೇಡುವ ದೇಶ ಅಲ್ಲ, ನೀಡುವ ದೇಶ
ರಾಷ್ಟ್ರೀಯ ಬದ್ದತೆಯ ವಿಷಯದಲ್ಲಿ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡುವುದನ್ನು ಜಗತ್ತಿಗೆ ಮೋದಿ ತೋರಿಸಿದ್ದಾರೆ. ನಾವು ಯಾರನ್ನೂ ಕೆಣಕುವುದಿಲ್ಲ, ಕೆಣಕಿದರೆ ನಾವು ಬಿಡುವುದೂ ಇಲ್ಲ ಎಂದು ಮೋದಿ ತೋರಿಸಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿದ್ದು ಮೋದಿಯವರ ರಾಜಕೀಯ ಬದ್ಧತೆ. 25 ಕೋಟಿ ಜನ ಬಿಪಿಎಲ್ ನಿಂದ ಹೊರ ಬಂದಿದ್ದಾರೆ. ಈಗ ಭಾರತ ಬೇಡುವ ದೇಶ ಅಲ್ಲ, ನೀಡುವ ದೇಶವಾಗಿದೆ. ಮೋದಿಯವರು ಹಗಲು ರಾತ್ರಿ ನಮಗಾಗಿ ಸೇವೆ ಮಾಡಿದವರು ಎಂದು ತಿಳಿಸಿದರು.
ಭಾರತದ ಮಾತುಗಳನ್ನು ಜಗತ್ತು ಕೇಳುತ್ತದೆ
ನಮ್ಮದು ವೇಗವಾಗಿ ಸಾಗುತ್ತಿರುವ ಆರ್ಥಿಕತೆಯ ದೇಶ. ಮೋದಿ ಆರ್ಥಿಕ ನೀತಿಗಳಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು, ಏರ್ಪೋರ್ಟ್ಗಳು, ರೈಲ್ವೇ, ಭದ್ರತೆ ವಿಚಾರದಲ್ಲಿ ದೇಶದಲ್ಲಿ ಸಾಕಷ್ಟು ಪ್ರಗತಿ ಆಗಿದೆ. ರಕ್ಷಣಾ ವಲಯದ ರಫ್ತು 5,500% ಹೆಚ್ಚಳ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾತುಗಳನ್ನು ಜಗತ್ತು ಕೇಳುತ್ತದೆ. ಬ್ರಿಕ್ಸ್ ಸಮ್ಮೇಳನದಲ್ಲೂ ಒಮ್ಮತದ ನಿರ್ಣಯ ಅಂಗೀಕಾರ ಆಗಿದೆ. 26 ದೇಶಗಳು ಮೋದಿಯವರಿಗೆ ತಮ್ಮ ಅತ್ಯುನ್ನತ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Tue, 15 September 26




