3.83 ಲಕ್ಷ ವಜ್ರಗಳಿರುವ ಚಿನ್ನದ ಲೇಪನದ ಗಣಪನ ಮೂರ್ತಿ: ಹೈದರಾಬಾದ್ನ ಗಣೇಶನನ್ನು ನೋಡಲು ಜನಸಾಗರ
ದೇಶಾದ್ಯಂತ ಗಣೇಶ ಚತುರ್ಥಿಯ ಆಚರಣೆಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿವೆ. ಭಕ್ತರು ವಿವಿಧ ರೂಪಗಳು, ಆಕಾರಗಳು ಮತ್ತು ಅಲಂಕಾರಗಳಲ್ಲಿ ಗಣೇಶನನ್ನು ಪೂಜಿಸುವ ಮೂಲಕ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಸಾಮಾನ್ಯವಾಗಿ, ಬಹುತೇಕ ಕಡೆ ಮಣ್ಣಿನಿಂದ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ನೋಡುತ್ತೇವೆ. ಆದರೆ ಈ ಬಾರಿ, ಭಕ್ತರು ಹೈದರಾಬಾದ್ನಲ್ಲಿ 45 ಕೆಜಿ ಚಿನ್ನದಿಂದ ಮಾಡಿದ ಬಂಗಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಹೈದರಾಬಾದ್ನ ಬೇಗಂಬಜಾರ್ ಪ್ರದೇಶದ ಫೀಲ್ಖಾನಾದಲ್ಲಿ ಸ್ಥಾಪಿಸಲಾದ ಚಿನ್ನದ ಗಣೇಶನ ವಿಗ್ರಹವನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಹೈದರಾಬಾದ್, ಸೆಪ್ಟೆಂಬರ್ 15: ಗಣೇಶ ಚತುರ್ಥಿ ಉತ್ಸವದ ಅಂಗವಾಗಿ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಅತ್ಯಂತ ಅಪರೂಪದ ಗಣೇಶನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಭಕ್ತರು ಮತ್ತು ಸಾರ್ವಜನಿಕರು ಹರಿದುಬರುತ್ತಿದ್ದಾರೆ. ಸಂಪೂರ್ಣ 24 ಕ್ಯಾರೆಟ್ ಚಿನ್ನದ ಲೇಪನ ಹೊಂದಿರುವ ಈ ಮೂರ್ತಿಗೆ 3,83,800 ಅತ್ಯಮೂಲ್ಯ ವಜ್ರಗಳನ್ನು ಪೋಣಿಸಲಾಗಿದ್ದು, ಈ ಮೂರ್ತಿಯು ಎಲ್ಲರ ಗಮನ ಸೆಳೆಯುತ್ತಿದೆ.
3.83 ಲಕ್ಷ ವಜ್ರಗಳು ಮತ್ತು 24 ಕ್ಯಾರೆಟ್ ಚಿನ್ನ:
ಈ ಬಾರಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಈ ವಿಘ್ನನಿವಾರಕನ ಮೂರ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ. ಮೂರ್ತಿಯ ಮೇಲ್ಮೈಗೆ 24 ಕ್ಯಾರೆಟ್ ಚಿನ್ನದ ಲೇಪನ ನೀಡಲಾಗಿದ್ದು, ಗಣಪತಿಯ ಆಭರಣಗಳು ಮತ್ತು ವಸ್ತ್ರದ ಭಾಗಗಳನ್ನು 3,83,800 ಅಮೆರಿಕನ್ ವಜ್ರಗಳಿಂದ ಅಲಂಕರಿಸಲಾಗಿದೆ.
ಇದನ್ನೂ ಓದಿ: ಮದ್ದೂರಿನಲ್ಲಿ ಕಳೆದ ವರ್ಷದ ಕಲ್ಲೆಸೆತಕ್ಕೆ ದೋಸ್ತಿಗಳ ಉತ್ತರ: ನಾಳೆ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ, ಬೃಹತ್ ಮೆರವಣಿಗೆ
ಸುಮಾರು 48 ಕೆಜಿ ತೂಕದ ಈ ಗಣಪತಿಯ ಪ್ರತಿಮೆಯು ತನ್ನ ವಿಶಿಷ್ಟ ಅಲಂಕಾರದಿಂದ ಎಲ್ಲರ ಗಮನಸೆಳೆದಿದೆ. ಈ ಪ್ರತಿಮೆಯ ವಿನ್ಯಾಸದಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಲೇಪನ ಮತ್ತು 3.83 ಲಕ್ಷಕ್ಕೂ ಹೆಚ್ಚು ಅಮೇರಿಕನ್ ವಜ್ರಗಳನ್ನು ಬಳಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಪ್ರತಿಮೆಯನ್ನು ಅಲಂಕರಿಸಲು ಕಲಾವಿದರು ಹಗಲಿರುಳು ಶ್ರಮಿಸಿದ್ದಾರೆ. ಹೈದರಾಬಾದ್ನ ವಿವಿಧ ಭಾಗಗಳಿಂದ ಭಕ್ತರು ಚಿನ್ನದ ಗಣೇಶನನ್ನು ನೋಡಲು ಬರುತ್ತಿದ್ದಾರೆ. ವಿಗ್ರಹದ ಅಲಂಕಾರವೂ ವಿಶೇಷ ಆಕರ್ಷಣೆಯಾಗಿದೆ. ಈ ವಿಶೇಷ ಗಣೇಶನ ವಿನ್ಯಾಸದಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ಲಾಲ್ಬೌಗ್ಚ ರಾಜ ಮತ್ತು ತಿರುಮಲದ ಶ್ರೀವಾರಿ ಬಾಲಾಜಿಯ ರೂಪಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಲಾಗಿದೆ. ಬಾಲಾಜಿ ಶೈಲಿಯ ಅಲಂಕಾರದ ಜೊತೆಗೆ, ಈ ಗಣೇಶನಿಗೆ ಲಾಲ್ಬೌಗ್ಚ ರಾಜ ಶೈಲಿಯಲ್ಲಿ ರಾಜಮನೆತನದ ನೋಟವನ್ನು ನೀಡಲಾಗಿದೆ.
#WATCH | Hyderabad, Telangana: A 24-karat gold-plated Lord Ganesha idol, adorned with 3,83,800 American diamonds, has been installed at Lichi Pearl Set Jewels in Begum Bazar on the occasion of Ganesh Chaturthi. pic.twitter.com/uOxer0mCl4
— ANI (@ANI) September 14, 2026
ಕುಶಲಕರ್ಮಿಗಳ ಅದ್ಭುತ ಶ್ರಮ:
ದೇಶದ ಖ್ಯಾತ ಆಭರಣ ವಿನ್ಯಾಸಕರು ಹಾಗೂ ಅನುಭವಿ ಕುಶಲಕರ್ಮಿಗಳು ಹಲವು ತಿಂಗಳುಗಳ ಕಾಲ ನಿರಂತರವಾಗಿ ಶ್ರಮಿಸಿ ಈ ಅದ್ಭುತ ಗಣೇಶನ ಕಲಾಕೃತಿಯನ್ನು ಸಿದ್ಧಪಡಿಸಿದ್ದಾರೆ. ವಜ್ರಗಳನ್ನು ಮೂರ್ತಿಯ ಮೇಲೆ ಜೋಡಿಸಿರುವ ಕೌಶಲ್ಯ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ಇದನ್ನೂ ಓದಿ: ಗಣೇಶ ಹಬ್ಬದ ಬೆನ್ನಲ್ಲೇ ಸೂತಕದ ಛಾಯೆ: ಕರ್ನಾಟಕದ ವಿವಿಧೆಡೆ ಪ್ರತ್ಯೇಕ ಅವಘಡಗಳಲ್ಲಿ 12 ಮಂದಿ ಸಾವು
ಕೋಟಿಗಟ್ಟಲೆ ಮೌಲ್ಯದ ಚಿನ್ನ ಮತ್ತು ವಜ್ರಗಳನ್ನು ಒಳಗೊಂಡಿರುವ ಕಾರಣದಿಂದ ಈ ಗಣೇಶನ ಮಂಟಪ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಸಿಸಿಟಿವಿ ಕಾವಲು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿಯ ಜೊತೆಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಈ ವಜ್ರದ ಗಣೇಶನ ವೀಡಿಯೊಗಳು ಮತ್ತು ಫೋಟೋಗಳು ತೀವ್ರ ವೈರಲ್ ಆಗುತ್ತಿದ್ದು, ಈ ಬಾರಿಯ ಹೈದರಾಬಾದ್ ಗಣೇಶೋತ್ಸವಕ್ಕೆ ವಿಶೇಷ ಕಳೆ ತಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




