ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು: ಕೇಸ್​​ ತನಿಖೆ ಹೊಣೆ ಸಿಐಡಿಗೆ

ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕಾಂತರಾಜು ಅನುಮಾನಾಸ್ಪದ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಜೂಜು ವಿಚಾರಣೆಗಾಗಿ ಕರೆತರಲಾದ ಕಾಂತರಾಜು, ಪೊಲೀಸ್ ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರಬರಬೇಕು, ಆರೋಪಿ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕುಟುಂಬ ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು: ಕೇಸ್​​ ತನಿಖೆ ಹೊಣೆ ಸಿಐಡಿಗೆ
ಮೃತ ವ್ಯಕ್ತಿ
Image Credit source: Tv9 Kannada
Edited By:

Updated on: Mar 20, 2026 | 5:58 PM

ತುಮಕೂರು, ಮಾರ್ಚ್​​ 20: ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ಅವರೇ ಮಾಹಿತಿ ನೀಡಿದ್ದಾರೆ. ಜೂಜಾಟ ಕೇಸ್​​ ಸಂಬಂಧ ವಿಚಾರಣೆಗೆ ಪೊಲೀಸರು ಕರೆತಂದಿದ್ದ ಆರು ಮಂದಿಯ ಪೈಕಿ ಓರ್ವ ಮೃತಪಟ್ಟಿದ್ದರು. ಅನುಮಾನಾಸ್ಪದವಾಗಿ ಕಾಂತರಾಜು ಎಂಬವರು ಮೃತಪಟ್ಟಿದ್ದು, ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ನೀಡಿದೆ.

ಚಿಕ್ಕನಾಯಕನಹಳ್ಳಿಯ ಯಳನಾಡು ಗ್ರಾಮದ ನಿವಾಸಿ ಮೃತ ಕಾಂತರಾಜು ಜೊತೆ ನಿನ್ನೆ ಸಂಜೆ ಇದ್ದ ಪ್ರದೀಪ್​​ ಎಂಬವರು ಹೇಳುವಂತೆ, ಜೂಜಾಡದಿದ್ದರೂ ಕಾಂತರಾಜು ಸೇರಿ ಐವರನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಪೊಲೀಸ್​​ ಠಾಣೆಗೆ ಬರುವ ಹೊತ್ತಲ್ಲಿ ಕಾಂತರಾಜು ತುಂಬಾ ಸುಸ್ತಾಗಿರುವಂತೆ ಕಂಡಿದ್ದರು. ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿರುವಂತೆ ಕಂಡರೂ ಪೊಲೀಸರು ತಲೆಕೆಡಿಸಿಕೊಂಡಿರಲಿಲ್ಲ. ಹೇಳಿಕೆ ಪಡೆಯಲು ಬಂದಿದ್ದ ಸರ್ಕಲ್​​ ಇನ್ಸ್​​ಪೆಕ್ಟರ್​​ ಠಾಣೆಯಲ್ಲಿಯೇ ಮಲಗಿದ್ದ ಕಾಂತರಾಜು ಮುಖಕ್ಕೆ ಕಾಲಿನಿಂದ ಒದ್ದು ಎಬ್ಬಿಸಿದ್ದಾರೆ. ಎಲ್ಲ ಪ್ರಕ್ರಿಯೆ ಮುಗಿಸಿ ಹೊರ ಬರುವಾಗ ಕಾಂತರಾಜು ಠಾಣೆಯ ಬಾಗಿಲ ಬಳಿ ಕುಸಿದು ಬಿದ್ದು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಚಾರಣೆಗೆಂದು ಠಾಣೆಗೆ ಕರೆತಂದ ವ್ಯಕ್ತಿ ಲಾಕಪ್​​​ನಲ್ಲೇ ಡೆತ್? ಕೆರಳಿದ ಗ್ರಾಮಸ್ಥರು

ಮತ್ತೊಂದೆಡೆ ಕಾಂತರಾಜು ಕುಟುಂಬದ ದುಃಖದ ಕಟ್ಟೆ ಒಡೆದಿದ್ದು, ಪತ್ನಿ, ಇಬ್ಬರು ಮಕ್ಕಳು ನಮಗ್ಯಾರು ದಿಕ್ಕು ಎಂದು ಗೋಳಾಡುತ್ತಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ಆಗಬೇಕು.  ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಆಗಬೇಕು ಎಂದು ಮೃತನ ಮಗಳಾದ ನಂದಿತಾ ಆಗ್ರಹಿಸಿದ್ದಾರೆ. ಇನ್ನು ಕಾಂತರಾಜು ಮಗ ತಿಲಕ್ ಗೌಡ ತಂದೆಯ ಸಾವಿನ ಬಗ್ಗೆ ದೂರು ನೀಡಿದ್ದು, ಸಾವಿಗೆ ಪೊಲೀಸರೆ ಹೊಣೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದರೂ ಚಿಕಿತ್ಸೆ ಕೊಡಿಸದೆ, ತಂದೆಯ ತಲೆ, ಕಾಲು ಹಾಗೂ ಎದೆಗೆ ಬೂಟು ಕಾಲಿನಿಂದ ಒದ್ದಿರೋದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಹುಳಿಯಾರು ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us