ಪ್ರತ್ಯೇಕ ಘಟನೆ: ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ನಾಲ್ವರು ಸಾವು

ತುಮಕೂರು ಜಿಲ್ಲೆಯ ದ್ವಾರಾಳು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟೈರ್ ಬ್ಲಾಸ್ ಆಗಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, 33 ಜನರಿಗೆ ಗಾಯಗಳಾಗಿವೆ. ಮತ್ತೊಂದು ಪ್ರಕರಣದಲ್ಲಿ ಚಾಮರಾಜನಗರದ ಗುಂಡ್ಲುಪೇಟೆ ಬಳಿ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ರತ್ಯೇಕ ಘಟನೆ: ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ನಾಲ್ವರು ಸಾವು
ರಸ್ತೆ ಅಪಘಾತ
Image Credit source: tv9 kannada
Edited By:

Updated on: Apr 14, 2026 | 8:52 PM

ತುಮಕೂರು, ಏಪ್ರಿಲ್​ 14: ಟೈರ್ ಬ್ಲಾಸ್ ಆಗಿ ನಿಂತ ಲಾರಿಗೆ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿ (KSRTC Bus Crashes) ಹೊಡೆದ ಪರಿಣಾಮ ಬಸ್ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ದ್ವಾರಾಳು ಬ್ರಿಡ್ಜ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಶ್ರೀಕಾಂತ್(35) ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ರೇಣುಕಮ್ಮ(59) ಮೃತರು. ಅಪಘಾತ ಸಂಬಂಧ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾವರೆಕೆರೆಯ ದ್ವಾರಾಳು ಬಿಡ್ಜ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ತೆರಳುತಿದ್ದ ಲಾರಿಯ ಟೈರ್ ಸ್ಫೋಟವಾಗಿ ರಸ್ತೆಯಲ್ಲೇ ನಿಂತಿದೆ. ಈ ವೇಳೆ ಹಿಂದೆಯೇ ಬರುತ್ತಿದ್ದ ಸರ್ಕಾರಿ ಬಸ್, ಲಾರಿಗೆ ಡಿಕ್ಕಿ ಹೊಡೆದಿದೆ. 33 ಪ್ರಯಾಣಿಕರಿಗೆ ಗಾಯಗಳಾಗಿದ್ದು, ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಮೃತದೇಹಗಳನ್ನ ಮರಣೊತ್ತರ ಪರಿಕ್ಷೆಗೆ ರವಾನಿಸಿದ್ದು, ಮೃತರ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಕಣ್ಣಾರೆ ಕಂಡ 15 ವರ್ಷದ ಬಾಲಕ ಹೇಳಿದ್ದಿಷ್ಟು 

ಘಟನೆ ಕಣ್ಣಾರೆ ಕಂಡ 15 ವರ್ಷದ ಬಾಲಕ ದಿಗಂತ್ ಪ್ರತಿಕ್ರಿಯಿಸಿದ್ದು, ಬಸ್ ಜೋರಾಗಿ ಹೋಗುತ್ತಿತ್ತು. ಮುಂದೆ ಲಾರಿ ನಿಂತಿತ್ತು. ಬ್ರೇಕ್ ಹಾಕುವ ಮುನ್ನ ಲಾರಿಗೆ ಡಿಕ್ಕಿ ಹೊಡೆಯಿತು‌. ಬಸ್​​ನಲ್ಲಿ ನಾನು ಕೊನೆಯಲ್ಲಿ ಕುಳಿತಿದ್ದೆ ಹಾಗಾಗಿ ನನಗೆ ಏಟಾಗಿಲ್ಲ. ಪಕ್ಕದಲ್ಲೇ ಸಣ್ಣ ಬಾಗಿಲಿತ್ತು. ಎಲ್ಲರೂ ಅದರಿಂದ ಇಳಿದು ನನನ್ನು ಇಳಿಸಿದರು. ನಂತರ ಆ್ಯಂಬುಲೆನ್ಸ್​ಗೆ ಫೋನ್ ಮಾಡಿ ಕರೆಸಿಕೊಂಡರು. ರಜೆ ಅಂತ ನಾನು, ನನ್ನ ತಮ್ಮ, ಅಜ್ಜಿ, ತಾತನ ಜೊತೆ ಊರಿಗೆ ಹೋಗುತ್ತಿದೆ. ಅಜ್ಜಿ, ತಾತ ಮತ್ತು ತಮ್ಮನಿಗೆ ಗಾಯಗಳಾಗಿವೆ. ನಾನು ಅಪಘಾತ ಕಂಡು ಕಿರುಚಿ ಬಳಿಕ ಧ್ವನಿ ಕಡಿಮೆ ಆಗಿದೆ ಎಂದು ಬಾಲಕ ಹೇಳಿದ್ದಾನೆ.

ಟಿಪ್ಪರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ

ಟಿಪ್ಪರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದ ಬಳಿ ನಡೆದಿದೆ. ಕೇರಳದ ಕಲ್ಲಿಕೋಟೆಯ ಆಯೇಷಾ ನೂರಿ(41) ಮತ್ತು ನೂಹಾ(18) ಮೃತರು. ಕಾರು ಚಾಲಕ ಮೊಹಮ್ಮದ್ ಅಜೀರ್(37), ನಹಿಯಾನ್(9) ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ವೇಗವಾಗಿ ಹೋಗುತ್ತಿದ್ದ ಕ್ಯಾಂಟರ್ ಟೈರ್ ಸ್ಫೋಟ! ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ

ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಗುಂಡ್ಲುಪೇಟೆ ಭಾಗದಲ್ಲಿ ಮತ್ತೆ ಹೆಚ್ಚಾಗಿರುವ ಟಿಪ್ಪರ್​ಗಳ ಹಾವಳಿ ಹೆಚ್ಚಾಗಿದ್ದು, ಗುಂಡ್ಲುಪೇಟೆಯಿಂದ ಎಂ ಸ್ಯಾಂಡ್ ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us