
ಬೆಳಗಾವಿಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಂಜುನಾಥ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ (ಭಾವ) ಹಾಗೂ ಬಳ್ಳಾರಿ ಮಾಜಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರರಾಗಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಇವರ ಎರಡು ನಿವಾಸಗಳು ಸೇರಿದಂತೆ ಗೋವಾ ಹಾಗೂ ಬೆಳಗಾವಿಯ ಹಲವೆಡೆ ಎರಡು ಕಾರುಗಳಲ್ಲಿ ಬಂದ ಅಧಿಕಾರಿಗಳ ತಂಡ ಮುಂಜಾನೆ 5:30ರಿಂದಲೇ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ವೀಡಿಯೋವೊಂದರಲ್ಲಿ ನವಿಲು ಗರಿ ಬಳಸಿದ ವಿವಾದಕ್ಕೆ ಸಂಬಂಧಿಸಿದಂತೆ ನಟ, ಡ್ಯಾನ್ಸರ್ ಕಿಶನ್ ಬಿಳಗಲಿ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ. “ಹಾಡಿನ ಕಾನ್ಸೆಪ್ಟ್ಗಾಗಿ ನವಿಲು ಗರಿಯನ್ನು ಬಾಡಿಗೆಗೆ ಪಡೆದಿದ್ದೆವು. ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಇದು ತಪ್ಪು ಎಂಬುದು ನಮಗೆ ತಿಳಿದಿರಲಿಲ್ಲ. ನಮ್ಮಿಂದ ತಪ್ಪಾಗಿದೆ, ಯಾರೂ ಇಂತಹ ತಪ್ಪು ಮಾಡಬೇಡಿ. ವಿಷಯ ತಿಳಿಯುತ್ತಿದ್ದಂತೆ ವೀಡಿಯೋ ಡಿಲೀಟ್ ಮಾಡಿದ್ದೇವೆ” ಎಂದು ಕಿಶನ್ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ವಸಂತ ಕೊರವ ಎಂಬುವವರ ಮನೆಯಲ್ಲಿ ನಾಡಬಾಂಬ್ ಸ್ಫೋಟಗೊಂಡ ಬೆನ್ನಲ್ಲೇ, ಗ್ರಾಮದ ಕೆರೆ ಬಳಿ ಮತ್ತೂ ಎರಡು ನಾಡಬಾಂಬ್ ಪತ್ತೆಯಾಗಿವೆ. ಸ್ಫೋಟದ ಬಳಿಕ ವಸಂತ್ ಕುಟುಂಬ ಸಮೇತ ಪರಾರಿಯಾಗಿದ್ದು, ಈತ ಮನೆಯಲ್ಲೇ ಬಾಂಬ್ ತಯಾರಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳವನ್ನು ಪರಿಶೀಲಿಸಿದ ಬಾಂಬ್ ನಿಷ್ಕ್ರಿಯ ದಳಕ್ಕೆ ತಂತಿ, ಮದ್ದಿನ ಪೌಡರ್ ಹಾಗೂ ಕಾಡುಹಂದಿಯ ಹಲ್ಲುಗಳು ಸಿಕ್ಕಿವೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರೊ. ಕೆ.ಎಸ್. ಭಗವಾನ್ ಅವರಿಗೆ ಹರಿಹರ ಗ್ರಾಮಾಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಜೂನ್ 9 ರಂದು ಹನಗವಾಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಗವಾನ್ ನೀಡಿದ್ದ ಹೇಳಿಕೆ ವಿರುದ್ಧ ಹಿಂದೂ ಜಾಗರಣ ವೇದಿಕೆಯ ದಿನೇಶ್ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಇರಾನ್ ವಿರುದ್ಧದ ಯುದ್ಧ ನಿಲ್ಲಿಸಲು ಅಮೆರಿಕ ಸೆನೆಟ್ನಲ್ಲಿ ಮಹತ್ವದ ನಿರ್ಣಯ ಅಂಗೀಕಾರವಾಗುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ರಾಜಕೀಯ ಹಿನ್ನಡೆಯಾಗಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ವಿವಿಧ ರಂಗಗಳ ಸಾಧಕರಿಗೆ ಪ್ರತಿಷ್ಠಿತ ‘ಪದ್ಮ ಪ್ರಶಸ್ತಿ 2026’ ಅನ್ನು ಪ್ರದಾನ ಮಾಡಿದ್ದಾರೆ. ಇತ್ತ ಕ್ರೀಡಾಲೋಕದಲ್ಲಿ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೂ ಮುನ್ನ ಗಾಯಾಳು ನಿತೀಶ್ ರೆಡ್ಡಿ ಬದಲಿಗೆ 23 ವರ್ಷದ ಯುವ ಆಲ್ರೌಂಡರ್ ಸೂರ್ಯಂಶ್ ಶೆಡ್ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ, ನಟಿ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಪಿತೃಪ್ರಧಾನ ಮನಸ್ಥಿತಿ ಮತ್ತು ಐಟಂ ಸಾಂಗ್ಗಳ ಸಂಸ್ಕೃತಿ ಬಗ್ಗೆ ಮುಕ್ತವಾಗಿ ಅಸಮಾಧಾನ ಹೊರಹಾಕಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Published On - 8:30 am, Wed, 24 June 26