Tv9 Kannada News Live: GBA ಚುನಾವಣೆಗೆ ಜೆಡಿಎಸ್​​ ಪ್ರತ್ಯೇಕ ಸ್ಪರ್ಧೆ, ಪಾಕ್​​ನಲ್ಲಿ ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು

ಜಿಬಿಎ ಚುನಾವಣೆಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ ಕುರಿತು ಹೆಚ್.ಡಿ. ಕುಮಾರಸ್ವಾಮಿ ಇಂದು ಸಭೆ ನಡೆಸಲಿದ್ದಾರೆ. ಹೂವಿನಹಡಗಲಿಯಲ್ಲಿ ಪೊಲೀಸರೇ ರಸ್ತೆ ಗುಂಡಿ ಮುಚ್ಚಿದ್ದು, ಬಸ್‌ನಲ್ಲಿ ಪ್ರಯಾಣಿಕ ಮರೆತು ಹೋಗಿದ್ದ ಬ್ಯಾಗ್ ಮರಳಿಸಿ ಬೀದರ್​​ನ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 23 ಮಂದಿ ಮೃತಪಟ್ಟ ಘಟನೆ ನಡೆದಿದೆ. ಈ ಹೊತ್ತಿನ ಪ್ರಮುಖ ಸುದ್ದಿಗಳ ರೌಂಡಪ್​​ ಇಲ್ಲಿದೆ.

Tv9 Kannada News Live: GBA ಚುನಾವಣೆಗೆ ಜೆಡಿಎಸ್​​ ಪ್ರತ್ಯೇಕ ಸ್ಪರ್ಧೆ, ಪಾಕ್​​ನಲ್ಲಿ ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು
ಈ ಹೊತ್ತಿನ ಟಾಪ್​​ ಸುದ್ದಿ

Updated on: May 24, 2026 | 2:00 PM

ಬೆಂಗಳೂರು, ಮೇ 24: ಬಿಜೆಪಿ ಜೊತೆಗಿನ ಮೈತ್ರಿ ನಡುವೆಯೂ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಪ್ರತ್ಯೇಕವಾಗಿ ಸ್ಫರ್ಧಿಸಲು ಜೆಡಿಎಸ್​​ ಪ್ಲ್ಯಾನ್​​ ಮಾಡಿದೆ. ಇದರ ನಡುವೆ ಕೇಂದ್ರ ಸಚಿವ ಮತ್ತು ಜೆಡಿಎಸ್​​ ನಾಯಕ ಹೆಚ್​​.ಡಿ. ಕುಮಾರಸ್ವಾಮಿ ಜಿಬಿಎ ಜಿಬಿಎ ಚುನಾವಣೆ ಸಂಬಂಧ ಇಂದು (ಮೇ 24) ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ JDS ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಧ್ಯಕ್ಷರು, ಪದಾಧಿಕಾರಿಗಳು, ಪಾಲಿಕೆ ಮಾಜಿ ಸದಸ್ಯರು ಭಾಗಿಯಾಗಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಆಯ್ಕೆ ಹಾಗೂ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.

ರಸ್ತೆ ಗುಂಡಿಗಳನ್ನು ಮುಚ್ಚಿದ ಪೊಲೀಸರು

ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ತಾಲೂಕಿನ ಇಟಗಿ ಮೂಲಕ ಹಾದು ಹೋಗುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಗುಂಡಿಗಳಿಂದಲೇ ತುಂಬಿದ್ದು, ಮೇಲಿಂದ ಮೇಲೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ವಿಷಯವನ್ನು PWD ಗಮನಕ್ಕೆ ತಂದರೂ ಪ್ರಯೋಜನವಾಗದ ಕಾರಣ ಸ್ಥಳೀಯರ ಸಹಾಯದಿಂದ ರಸ್ತೆ ಗುಂಡಿಗಳನ್ನು ಪೊಲೀಸರೇ ಮುಚ್ಚಿರುವ ಪ್ರಸಂಗ ನಡೆದಿದೆ. ಇಟಗಿ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮುಖ್ಯಾಂಶಗಳು

ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ

ಬಸ್‌ನಲ್ಲಿ ಪ್ರಯಾಣಿಕ ಮರೆತು ಹೋಗಿದ್ದ ಬ್ಯಾಗ್ ಮರಳಿಸಿ ಬೀದರ್​​ನ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬಸವಕಲ್ಯಾಣದಿಂದ ನಲಂಡಿ ಗ್ರಾಮಕ್ಕೆ ಹೋಗುವಾಗ ಚಾವನ್ ಹಿಪ್ಪರ್ಗಾ ಗ್ರಾಮದ ಮಸೀದ್ ಅಲ್ಲಾವುದ್ದೀನ್ ಶೇಕ್ ಎಂಬವರು ಬಸ್​​ನಲ್ಲಿಯೇ ನಗದು ಮತ್ತು ಲಕ್ಷಾಂತರ ಮೌಲ್ಯದ ಆಭರಣಗಳಿದ್ದ ಬ್ಯಾಗ್ ಮರೆತು ತೆರಳಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಗ್ರಾಮದಲ್ಲಿ ಪ್ರಯಾಣಿಕನನ್ನು ಹುಡುಕಿರುವ ಸಾರಿಗೆ ಸಿಬ್ಬಂದಿ ಭಜರಂಗ ಮತ್ತು ನಿರ್ವಾಹಕ ವೀರಪ್ಪ ಕಾಳೆ ಬ್ಯಾಗ್​​ನ ಹಿಂತಿರುಗಿಸಿದ್ದಾರೆ. ಸಾರಿಗೆ ಸಿಬ್ಬಂದಿಯ ಈ ಮಾನವೀಯ ಕಾರ್ಯ ಕಂಡು ಗ್ರಾಮಸ್ಥರು ಹೂವಿನ ಹಾರ ಹಾಕಿ ಅವರನ್ನು ಸನ್ಮಾನಿಸಿದ್ದಾರೆ.

ಇದನ್ನೂ ಓದಿ: ಕಾರ್ಮಿಕರ ವೇತನ ಹೆಚ್ಚಳ, ತೆಲಂಗಾಣದಲ್ಲಿ ಉಷ್ಣ ಅಲೆ ಮತ್ತು ಚೇತನ್ ಅಹಿಂಸಾ ಹೇಳಿಕೆ ವಿವಾದ! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ

ಪಾಕಿಸ್ತಾನದ ಕ್ವೆಟ್ಟಾ ನಗರದ ರೈಲ್ವೆ ಟ್ರ್ಯಾಕ್​ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ 23 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ 47 ಜನರಿಗೆ ಗಂಭೀರ ಗಾಯಗಳಾಗಿದ್ದರೆ, ಬ್ಲಾಸ್ಟ್​​ ತೀವ್ರತೆಗೆ ರೈಲ್ವೆ ಹಳಿ ಬಳಿಯಿದ್ದ 10 ವಾಹನಗಳು ಸುಟ್ಟು ಭಸ್ಮವಾಗಿವೆ. ಘಟನೆ ಬೆನ್ನಲ್ಲೇ ಪಾಕ್​ನ ಕ್ವೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us