TV9 Kannada News Live: ಕರ್ನಾಟಕದಲ್ಲಿ ಮಳೆ, ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು; ಸಾಕಾನೆಗಳ ಕಾದಾಟದಲ್ಲಿ ಮಹಿಳೆ ಸಾವು
ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ ಇದ್ದು, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲೂ ಮಳೆಯ ನಿರೀಕ್ಷೆಯಿದೆ. ಇನ್ನೊಂದೆಡೆ, ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರದಲ್ಲೇ ಆರಂಭವಾಗಲಿದೆ. ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾದಾಟದ ವೇಳೆ ಮಹಿಳಾ ಪ್ರವಾಸಿಗರು ಮೃತಪಟ್ಟ ಘಟನೆ ನಡೆದಿದೆ. ಈ ಹೊತ್ತಿನ ಸುದ್ದಿಗಳು ಹೀಗಿವೆ.

ಬೆಂಗಳೂರು, ಮೇ 18: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ವಾತಾವರಣ ಮುಂದುವರಿಯಲಿದೆ. ಹೀಗಾಗಿ ಮೇ 19ರಂದು ರಾಜ್ಯದ (Karnataka) ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಖ್ಯಾಂಶಗಳು
- ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
- ಶೀಘ್ರದಲ್ಲೇ ಬರಲಿದೆ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು
- ದುಬಾರೆ ಆನೆ ಶಿಬಿರದಲ್ಲಿ ದುರಂತ: ಮಹಿಳಾ ಪ್ರವಾಸಿ ಸಾವು
ಬೀದರ್ ಮತ್ತು ಕಲಬುರಗಿ ಹೊರತುಪಡಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಬಹುತೇಕ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಮೇ 21ರವರೆಗೆ ಮಳೆಯ ಅಬ್ಬರ ಇರಲಿದ್ದು, ದಕ್ಷಿಣ ಒಳನಾಡಿನಲ್ಲೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು
ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾಗಲಿದೆ. ಪ್ರಸ್ತುತ ಇರುವ ಚೇರ್ ಕಾರ್ ರೈಲುಗಳಿಗಿಂತ ಭಿನ್ನವಾಗಿದ್ದು, ದೂರದ ಊರುಗಳಿಗೆ ಆರಾಮದಾಯಕವಾಗಿ ರಾತ್ರಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲು ಉಭಯ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿಸಲಿದೆ.
ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಏನಿದರ ವಿಶೇಷತೆ?
ಇದಕ್ಕಾಗಿ ಬೆಂಗಳೂರಿನ ಥಣಿಸಂದ್ರದಲ್ಲಿ 270 ಕೋಟಿ ರೂ. ವೆಚ್ಚದ ವಿಶೇಷ ನಿರ್ವಹಣಾ ಡಿಪೋ ಸಿದ್ಧವಾಗುತ್ತಿದೆ. ಐಷಾರಾಮಿ ಬರ್ತ್ಗಳು, ಸೆನ್ಸಾರ್ ಲೈಟಿಂಗ್, ಶಬ್ದ ನಿಯಂತ್ರಣ ತಂತ್ರಜ್ಞಾನ ಹಾಗೂ ಆಧುನಿಕ ಶೌಚಾಲಯಗಳನ್ನು ಹೊಂದಿರುವ ಈ ರೈಲು, ಆರ್ಥಿಕ ಮತ್ತು ಐಟಿ ರಾಜಧಾನಿಗಳ ನಡುವೆ ಸಂಚರಿಸುವ ಉದ್ಯಮಿಗಳು ಹಾಗೂ ಉದ್ಯೋಗಿಗಳಿಗೆ ವರದಾನವಾಗಲಿದೆ.
ದುಬಾರೆ ಆನೆ ಶಿಬಿರದಲ್ಲೇ ಘೋರ ದುರಂತ: ಮದಗಜಗಳ ಕಾದಾಟಕ್ಕೆ ಮಹಿಳೆ ಸಾವು
ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದಲ್ಲಿ ಮಹಿಳಾ ಪ್ರವಾಸಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಶಿಬಿರದಲ್ಲಿದ್ದ ಸಾಕಾನೆಗಳಾದ ಕಂಜನ್ ಮತ್ತು ಮಾರ್ತಾಂಡ ಕಾದಾಟ ಮಾಡಿವೆ. ಈ ವೇಳೆ ಆನೆಗಳು ಪ್ರವಾಸಿಗರು ನಿಂತಿದ್ದ ಜಾಗದತ್ತ ನುಗ್ಗಿ ಬಂದಿವೆ. ಇದರಿಂದ ಗಾಬರಿಗೊಂಡ ಪ್ರವಾಸಿಗರು ಪ್ರಾಣಭಯದಿಂದ ಓಡಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್ ಮಹಿಳೆ ಮೇಲೆ ಮಾರ್ತಾಂಡ ಆನೆ ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು
ಘಟನೆಯಲ್ಲಿ ಮತ್ತಷ್ಟು ಜನರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತದಿಂದಾಗಿ ದುಬಾರೆ ಆನೆ ಶಿಬಿರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Mon, 18 May 26

