
ನವದೆಹಲಿ, (ಏಪ್ರಿಲ್ 02): ಕರ್ನಾಟಕ ಸರ್ಕಾರ (Karnataka Government) EVM ಬದಲು ಬ್ಯಾಲೆಟ್ ಪೇಪರ್ ಬಳಸಿ ತಂತ್ರಜ್ಞಾನದಿಂದ ದೂರ ಸರಿದ ಬೆನ್ನಲ್ಲೇ ಇದೀಗ “EVಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದು ಲೈಫ್ಟೈಮ್ ರಸ್ತೆ ತೆರಿಗೆ ವಿಧಿಸುತ್ತಿರುವುದು ಸುಧಾರಣೆಯಿಂದ ಮತ್ತೊಂದು ಹೆಜ್ಜೆ ಹಿಂದೆ ಹೋದಂತಿದೆ” ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Union Minister pralhad joshi) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಈ ಮೂಲಕ EV ನೀತಿಗೆ ಭಾರೀ ಯು-ಟರ್ನ್ ಹೊಡೆಯುತ್ತಿದೆ. ಶುದ್ಧ ಇಂಧನಕ್ಕಾಗಿ ಇಡೀ ಜಗತ್ತೇ ಇಂದು ಭಾರತ ದೇಶದ ಜತೆ ಮುಂದಡಿ ಇಟ್ಟಿದೆ. ಅಂಥದ್ದರಲ್ಲಿ ಕರ್ನಾಟಕ ಏಕೆ ಹೀಗೆ ರಿವರ್ಸ್ ಗೇರ್ ಹಾಕುತ್ತಿದೆ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ (EV) ಮೇಲೆ ವಿಧಿಸಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದು, ಈಗ ಲೈಫ್ಟೈಮ್ ರಸ್ತೆ ತೆರಿಗೆ ವಿಧಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಮಧ್ಯಮ ವರ್ಗದವರ ಮೇಲೆ ಹೆಚ್ಚುವರಿ ಭಾರ ಹಾಕುತ್ತಿದೆ ಎಂದು ಜೋಶಿ ಕಿಡಿ ಕಾರಿದ್ದಾರೆ.
ದೇಶದಲ್ಲಿನ ಇತರೆ ರಾಜ್ಯಗಳು EV ಬಳಕೆಯನ್ನು ಉತ್ತೇಜಿಸುತ್ತಿವೆ. ವಾಸ್ತವ ಹೀಗಿರುವಾಗ ಕರ್ನಾಟಕ ಮಾತ್ರ ಹಸಿರು ಇಂಧನ ಆಯ್ಕೆಯನ್ನು ಪ್ರೋತ್ಸಾಹಿಸುವಲ್ಲಿ ನಿರುತ್ಸಾಹ ತೋರುತ್ತಿದೆ. ಸ್ವಚ್ಛ ಸಾರಿಗೆಗೆ ಮಾದರಿಯಾಗಿದ್ದ ಕರ್ನಾಟಕವನ್ನು ಸುಧಾರಣೆಯಿಂದ ಹಿಂದಡಿ ಇಡುವಂತೆ ಮಾಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರು EV ಖರೀದಿಸುವಾಗ ಹೆಚ್ಚುವರಿ ವೆಚ್ಚ ಭರಿಸುವಂತೆ ಆಗಿದೆ. ಮಧ್ಯಮ ವರ್ಗದವರಿಗೆ EV ತೆಗೆದುಕೊಳ್ಳುವುದು ಬಲು ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಇತರ ರಾಜ್ಯಗಳಲ್ಲಿ EVಗಳಿಗೆ ತೆರಿಗೆ ವಿನಾಯಿತಿ, ಮತ್ತು ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ. ಅಲ್ಲದೇ, ಹಸಿರು ಇಂಧನವನ್ನು ಉತ್ತೇಜಿಸುವ ನೀತಿಗಳು ಮುಂದುವರಿದಿವೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ಆವಿಷ್ಕಾರ, ತಂತ್ರಜ್ಞಾನ ನೀತಿಗಳಿಂದಾಗಿ ರಾಜ್ಯವನ್ನು ಹಿಮ್ಮುಖವಾಗಿ ಕೊಂಡೊಯ್ಯುತ್ತಿದೆ. ರಾಜ್ಯ ಸರ್ಕಾರದ ಈ ನಡೆ EV ಬಳಕೆಯನ್ನು ಉತ್ತೇಜಿಸುವ ಬದಲು, ಕಡಿಮೆ ಮಾಡುವ ಸಾಧ್ಯತೆ ಇದೆ ಆತಂಕ ಪಟ್ಟಿರುವ ಸಚಿವರು, ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.