ಉತ್ತರ ಕನ್ನಡದ ಶಿವಪುರ ತೂಗು ಸೇತುವೆ ಮೇಲೆ ಮತಿಗೇಡಿಗಳ ‘ಕಾರು‘ಬಾರು: ಚಾಲಕ ಜೋಯಿಡಾದ ಯುವಕ ಅರೆಸ್ಟ್
ಮಹಾರಾಷ್ಟ್ರದಲ್ಲಿ ನೋಂದಣಿಯಾಗಿರುವ ಮಾರುತಿ ಸುಜುಕಿ 800 ಕಾರು ಕರ್ನಾಟಕದ ಕರಾವಳಿ ಭಾಗದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಶಿವಪುರ ತೂಗು ಸೇತುವೆಯ ಮೇಲೆ ಸಂಚರಿಸಿದೆ. ಆದರೆ ಕಾರಿನ ಭಾರದಿಂದ ಸೇತುವೆಗೆ ಹಾನಿಯಾಗಬಹುದು ಎಂದು ಸ್ಥಳೀಯರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉತ್ತರ ಕನ್ನಡ: ಅತ್ತ ರಾಜ್ಕೋಟ್ನಲ್ಲಿ ಮೊರ್ಬಿ ತೂಗು ಸೇತುವೆ ಕಳಚಿಬಿದ್ದು (Morbi Bridge Collapse) ನೂರಾರು ಮಂದಿ ನೀರುಪಾಲಾದರು. ಅದರ ಬೆನ್ನಿಗೆ ಅದೇ ಗುಜರಾತಿನ ಸಬರಮತಿ ನದಿಗೆರ ಅಡ್ಡಲಾಗಿ ಕಟ್ಟಿರುವ ನೂತುನ ಸೇತುವೆ ಅಟಲ್ ಸೇತುವೆ ಇತ್ತೀಚೆಗೆ ಉದ್ಘಾಟನೆಗೊಂಡಿದ್ದು, ಅದರ ಮೇಲೆ ಪಾದಚಾರಿಗಳು ಸಾವಿರಾರು ಮಂದಿ ಸಂಚರಿಸಬಹುದಾದರೂ ಮೊರ್ಬಿ ದುರಂತದಿಂದ ಎಚ್ಚೆತ್ತು ನೂರಾರು ಮಂದಿಯಷ್ಟೇ ಸಂಚರಿಸಬೇಕು ಎಂದು ಸ್ಥಳೀಯ ಆಡಡಳಿತ ಕಿವಿಮಾತು ಹೇಳಿದೆ. ಆದರೆ ಇದರ ಬೆನ್ನಿಗೆ ನಮ್ಮ ರಾಜ್ಯದಲ್ಲೇ ಅದೂ ಉತ್ತರ ಕನ್ನಡ ಜಿಲ್ಲೆಯ ಶಿವಪುರ ತೂಗು ಸೇತುವೆಯ (Shivapura Hanging Bridge) ಮೇಲೆ ಹುಚ್ಚಾಟವೊಂದು ನಡೆದಿದೆ.
ಹೌದು, ಮಹಾರಾಷ್ಟ್ರದಲ್ಲಿ ನೋಂದಣಿಯಾಗಿರುವ ಮಾರುತಿ ಸುಜುಕಿ 800 ಕಾರು ಕರ್ನಾಟಕದ ಕರಾವಳಿ ಭಾಗದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಶಿವಪುರ ತೂಗು ಸೇತುವೆಯ ಮೇಲೆ ಸಂಚರಿಸಿದೆ. ಆದರೆ ಕಾರಿನ ಭಾರದಿಂದ ಸೇತುವೆಗೆ ಹಾನಿಯಾಗಬಹುದು ಎಂದು ಸ್ಥಳೀಯರು ಚಾಲಕ ಮತ್ತು ಕಾರಿನೊಳಗಿದ್ದ ಪ್ರವಾಸಿಗರನ್ನು (Tourist) ತರಾಟೆಗೆ ತೆಗೆದುಕೊಂಡು ನಿಲ್ಲಿಸಿ, ವಾಪಸ್ ಕಳಿಸಿದ್ದಾರೆ.
ಮೊರ್ಬಿ ದುರಂತ ಇನ್ನೂ ನೆಪಿನಲ್ಲಿರುವಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿವಪುರ ತೂಗು ಸೇತುವೆಯ ಮೂಲಕ ವಾಹನವೊಂದು ನಿನ್ನೆ ಮಂಗಳವಾರ ಹಾದು ಹೋಗುತ್ತಿರುವುದು ಕಂಡುಬಂದಿದೆ. ಕಾರಿನ ಭಾರದೊಂದಿಗೆ ಸೇತುವೆಗೆ ಧಕ್ಕೆಯಾಗಬಹುದು ಎಂದು ಸ್ಥಳೀಯರು ಚಾಲಕ ಮತ್ತು ಕಾರಿನೊಳಗಿದ್ದ ಪ್ರವಾಸಿಗರನ್ನು ನಿಲ್ಲಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ, ಮಹಾರಾಷ್ಟ್ರದಲ್ಲಿ ನೋಂದಣಿ ಹೊಂದಿರುವ ಮಾರುತಿ ಸುಜುಕಿ 800 ಕಾರು ಶಿವಪುರ ತೂಗು ಸೇತುವೆಯನ್ನು ಪ್ರವೇಶಿಸಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು ಪ್ರವಾಸಿಗರಿಗೆ ಸೇತುವೆಯಿಂದ ಕೆಳಗಿಳಿಯುವಂತೆ ಎಚ್ಚರಿಕೆ ನೀಡಿದ್ದಾರೆ. ಸೇತುವೆಯ ಮೇಲೆ ಕಾರು ಪ್ರವೇಶಿಸುತ್ತಿದ್ದಂತೆ ಇಬ್ಬರು ಯುವಕರು ಕಾರನ್ನು ಹಿಂದಕ್ಕೆ ತಳ್ಳಿ ನೇತಾಡುವ ಸೇತುವೆಯಿಂದ ಅದನ್ನು ಹೊರಕ್ಕೆ ಕಳಿಸುತ್ತಿರುವುದು ಕಂಡುಬಂದಿದೆ.
ಕರಾವಳಿ ಕರ್ನಾಟಕ ಪ್ರದೇಶದಲ್ಲಿ ವರ್ಷವಿಡೀ ಭಾರಿ ಮಳೆ ಬೀಳುವ ಸಾಧ್ಯತೆಯಿರುವುದರಿಂದ ತೂಗು ಸೇತುವೆಗಳ ಮೇಲೆ ಸರ್ಕಾರ ವಿಶೇಷವಾಗಿ ನಿಗಾ ಇಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಗುಜರಾತ್ನ ಮೊರ್ಬಿಯಲ್ಲಿ ಕೇಬಲ್ ಸೇತುವೆಯೊಂದು ಭಾನುವಾರ ಕುಸಿದ ನಂತರ ಈ ಮನವಿ ಬಂದಿದೆ. ಈ ಭೀಕರ ಅಪಘಾತದಲ್ಲಿ ನೂರಾರು ಮಂದಿ ಬಲಿಯಾಗಿದ್ದಾರೆ. ಖಾಸಗಿ ಗುತ್ತಿಗೆದಾರ ಒರೆವಾ ಗ್ರೂಪ್ನ ವ್ಯವಸ್ಥಾಪಕರು, ಟಿಕೆಟ್ ಗುಮಾಸ್ತರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ತೂಗು ಸೇತುವೆ ಮೇಲೆ ಕಾರು ಚಲಾಯಿಸಿದವನನ್ನು ಬಂಧಿಸಿದ ಪೊಲೀಸರು
ಕಾರವಾರದ ಯಲ್ಲಾಪುರ ತಾಲೂಕಿನ ಶಿವಪುರ ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ್ದ ಮುಜಾಹಿದ್ ಆಜಾದ್ ಸಯ್ಯದ್ ಎಂಬಾತನನ್ನು ಜೋಯಿಡಾ ಠಾಣೆ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಈತ ಜೋಯಿಡಾ ತಾಲೂಕಿನ ಉಳವಿ ಗ್ರಾಮದ ನಿವಾಸಿ 25 ವರ್ಷದ ಸಯ್ಯದ್.
Published On - 10:50 am, Wed, 2 November 22