ಅಂಡಮಾನ್, ನಿಕೋಬಾರ್ ಮಾದರಿಯಲ್ಲಿ ಕರಾವಳಿ ಕರ್ನಾಟಕದಕಲ್ಲೂ ದ್ವೀಪ ಪ್ರವಾಸೋದ್ಯಮ ಆರಂಭಿಸಲು ಸಿದ್ದತೆ
ಕರ್ನಾಟಕ ಬಂದರು ಇಲಾಖೆ ರಾಜ್ಯದ 15 ದ್ವೀಪಗಳಲ್ಲಿ ಪ್ರವಾಸೋದ್ಯಮ ಆರಂಭಿಸಲು ಯೋಜಿಸಿದೆ. ಉತ್ತರ ಕನ್ನಡದ 7 ದ್ವೀಪಗಳು ಮೊದಲ ಹಂತದಲ್ಲಿ ಅಭಿವೃದ್ಧಿಗೊಳ್ಳಲಿವೆ. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಒಂದು ಏಕರೆಗೆ 60 ಲಕ್ಷದಿಂದ 2 ಕೋಟಿ ರೂಪಾಯಿವರೆಗೆ ದರ ನಿಗದಿಯಾಗಿದೆ. ಈ ಮೂಲಕ ಉತ್ತರ ಕನ್ನಡದ ನೈಸರ್ಗಿಕ ಸೌಂದರ್ಯವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲಾಗುವುದು.

ಉತ್ತರ ಕನ್ನಡ, ಏಪ್ರಿಲ್ 19: ಲಕ್ಷದ್ವೀಪ (Lakshadweep), ಅಂಡಮಾನ್ ಮತ್ತು ನಿಕೋಬಾರ್ (Andaman and Nicobar) ಮಾದರಿಯ ಪ್ರವಾಸೋದ್ಯಮ (Tourism) ಕೆಲವೆ ತಿಂಗಳಲ್ಲಿ ರಾಜ್ಯದ ಕರಾವಳಿಯಲ್ಲೂ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯದ 15 ದ್ವೀಪಗಳನ್ನು (Island) ಆಯ್ಕೆ ಮಾಡಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಉತ್ತರ ಕನ್ನಡ (Uttar Kannada) ಜಿಲ್ಲೆಯ 7 ದ್ವೀಪಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ಕರ್ನಾಟಕ ಬಂದರು ಇಲಾಖೆ ಮುಂದಾಗಿದೆ. ದ್ವೀಪದ ಒಂದು ಏಕರೆ ಭೂಮಿಗೆ 60 ಲಕ್ಷದಿಂದ 2 ಕೋಟಿ ರೂಪಾಯಿಗೆ ದರ ನಿಗಧಿ ಮಾಡಲಾಗಿದೆ.
ದೇಶದಲ್ಲಿ ಕಾಣುವ ಬಹುತೇಕ ಪ್ರವಾಸಿ ತಾಣಗಳನ್ನು ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಕಾಣಬಹುದು. ಹೌದು, ಉತ್ತರ ಕನ್ನಡ ಜಿಲ್ಲೆ ಎಲ್ಲ ಬಗೆಯ ಆಕರ್ಷಣೀಯ ತಾಣಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಪ್ರವಾಸಿಗರ ನೆಚ್ಚಿನ, ನೈಸರ್ಗಿಕವಾಗಿ ಸಮೃದ್ಧವಾದ ಉತ್ತರ ಕನ್ನಡ ಜಿಲ್ಲೆ ಇನ್ನಷ್ಟು ವಿಶೇಷತೆಗಳ ಮೂಲಕ ಪ್ರವಾಸಿಗರನ್ನ ಆಕರ್ಷಿಸಲು ಮುಂದಾಗಿದೆ.
ಇತ್ತೀಚಿಗೆ ನಿಸರ್ಗದಲ್ಲಿ ಏಕಾಂತದಲ್ಲಿ ಕಾಲ ಕಳೆಯಬೇಕೆಂಬ ಅಭಿಲಾಷೆ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಹಳಷ್ಟು ಜನರು ದ್ವೀಪ ಪ್ರವಾಸೋದ್ಯಮದ ಮೊರೆ ಹೊಗುತ್ತಿದ್ದು, ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ಗೆ ಹೋಗುತ್ತಿದ್ದಾರೆ. ಇದನ್ನು ಮನಗಂಡ ಕರ್ನಾಟಕ ಬಂದರು ಇಲಾಖೆ ರಾಜ್ಯದ 15 ದ್ವೀಪಗಳಲ್ಲಿ ಪ್ರವಾಸೋದ್ಯಮ ಆರಂಭ ಮಾಡಲು ಸಿದ್ಧತೆ ನಡೆಸಿದೆ.
ರಾಜ್ಯದ ಕರಾವಳಿಯಲ್ಲಿ 180 ಕ್ಕೂ ಅಧಿಕ ದ್ವೀಪಗಳಿವೆ. ಆ ಪೈಕಿ ಬಂದರು ಇಲಾಖೆ ಪ್ರದೇಶದಲ್ಲಿರುವ 15 ದ್ವೀಪಗಳಿದ್ದು ಅವುಗಳನ್ನು ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಶಿಪ್) ಮಾದರಿಯಲ್ಲಿ ಅಭಿವೃದ್ಧಿ ಮಾಡಲು ತಿರ್ಮಾನಿಸಿದೆ. 15 ರ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ 7, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಹಾಗೂ ಉಡುಪಿ ಜಿಲ್ಲೆಯಲ್ಲಿ 7 ದ್ವೀಪಗಳನ್ನು ಆಯ್ಕೆ ಮಾಡಲಾಗಿದೆ.
ಒಂದೊಂದು ದ್ವೀಪಕ್ಕೂ ಕೋಟಿ ಕೋಟಿ ದರ ನಿಗಧಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ 7 ದ್ವೀಪಗಳ ಪೈಕಿ ಕಾರವಾರ ತಾಲೂಕಿನ ಕುರುಮಗಡ ದ್ವೀಪ 45 ಏಕರೆ ವಿಸ್ತಿರ್ಣ ಇದ್ದು ಆ ಪೈಕಿ 5 ಎಕರೆ ಭೂಮಿಯನ್ನ ಪಿಪಿಪಿ ಮಾದರಿಯಲ್ಲಿ ತಿರ್ಮಾನಿಸಲಾಗಿದ್ದು, ಒಂದು ಏಕರೆ ಭೂಮಿಗೆ ಬರೊಬ್ಬರಿ 1.20 ಕೋಟಿ ರೂಪಾಯಿ ದರ ನಿಗಧಿ ಮಾಡಲಾಗಿದೆ.
ಕುರುಮಗಡ ಪಕ್ಕದ ಮಧ್ಯಲಿಂಗ್ ಗಡ ದ್ವೀಪದ 6.16 ಏಕರೆ ಭೂಮಿ ಇದ್ದು, ಪ್ರತಿ ಏಕರೆಗೆ 2 ಕೋಟಿ ರೂಪಾಯಿ ದರ ನಿಗಧಿ ಮಾಡಲಾಗಿದೆ. ಓಯ್ ಸ್ಟಾರ್ ದ್ವಿಪದ 12.11 ಏಕರೆ ಭೂಮಿಗೆ ಪ್ರತಿ ಏಕರೆಗೆ 2 ಕೋಟಿ ರೂಪಾಯಿ ದರ ನಿಗಧಿ ಮಾಡಲಾಗಿದೆ. ಹೀಗೆ ಕಾರವಾರ ತಾಲೂಕಿನ ಮೊಗ್ರೆಗುಡ್ಡ, ಭಟ್ಕಳ ತಾಲೂಕಿನ ಕಿರಿ ಕುಂಡ ಹಾಗೂ ಹೊಗ ದ್ವಿಪ ಮತ್ತು ಅಂಕೋಲಾ ತಾಲೂಕಿನ ಅಂಕನಿ ಚೆಗ್ಗುಡು ದ್ವೀಪವನ್ನ ಆಯ್ಕೆ ಮಾಡಲಾಗಿದೆ.
ಸದ್ಯ ಈ ದ್ವೀಪಗಳ ಸರ್ವೆ ನಡೆಸಲು ಸರ್ವೇ ಆಯುಕ್ತರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಪತ್ರ ಬರೆದಿದ್ದು, ಸರ್ವೆ ಬಳಿಕ ದ್ವೀಪಗಳನ್ನ ಕಂದಾಯ ಇಲಾಖೆಯಿಂದ ಬಂದರು ಇಲಾಖೆಗೆ ನಿಯಮನುಸಾರ ಹಸ್ತಾತಂರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಡ್ಲಕುದ್ರು ದ್ವೀಪ, ಉಡುಪಿ ಜಿಲ್ಲೆಯ ಫಿಯೋನಿಕ್ಸ್, ಟ್ವೀನ್, ಸೆಂಟ್ ಮ್ಯಾರಿಸ್, ಜಾಸ್, ದಾರಿಯಾ ಬದ್ರಗುಡ್ಡ ಮತ್ತು ಮಲ್ಫೆ ಹೀಗೆ ಒಟ್ಟು 15 ದ್ವೀಪಗಳನ್ನು ಅಭಿವೃದ್ಧಿ ಮಾಡಲು ಕರ್ನಾಟಕ ಬಂದರು ಇಲಾಖೆ ಮುಂದಾಗಿದೆ. ಕಂದಾಯ ಇಲಾಖೆಯಿಂದ ಎಲ್ಲ ಕೆಲಸ ಮುಗಿದ ಬಳಿಕ ಬಂದರು ಇಲಾಖೆ ಹಾಗೂ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಒಂದೊಂದು ದ್ವಿಪದಲ್ಲಿ ಎಕೊ ಟೂರಿಸಮ್, ವೆಲ್ ನೆಸ್ ಆಂಡ್ ಡೈವ್ ಸೆಂಟರ್ ಎಕೊ ರಿಟ್ರೀಟ್ ಹಾಗೂ ಆಡ್ವೆಂಚರ್ ನೇಚರ್ ಕ್ಯಾಂಪ್ ರೀತಿಯಲ್ಲಿ ಪ್ರವಾಸೋದ್ಯಮ ಆರಂಭ ಮಾಡಲು ತಿರ್ಮಾನಿಸಲಾಗಿದೆ.
ಪ್ರತಿ ದ್ವೀಪದಲ್ಲಿ ಪರಿಸರ ಸ್ನೇಹಿ ಗುಡಿಸಲು ರೀತಿಯಲ್ಲಿ ರೂಮ್ಗಳನ್ನು ಮಾಡಿ ಯಾವುದೇ ಗಿಡ ಮರ ಹಾಗೂ ಜಲಚರಗಳಿಗೆ ಸಮಸ್ಯೆ ಆಗದಂತೆ ಪ್ರವಾಸಿ ತಾಣಗಳಾಗಲಿವೆ ಕರುನಾಡ ಕರಾವಳಿಯ ದ್ವೀಪಗಳು.
ಇದನ್ನೂ ಓದಿ: ಶಿರಸಿ ನಗರಕ್ಕೆ ನೀರು ಪೂರೈಸುತ್ತಿದ್ದ ಪೈಪ್ಗಳು ಕಳ್ಳತನ: ಮೂವರು ಅಧಿಕಾರಿಗಳು ಪರಾರಿ
ಒಟ್ಟಾರೆಯಾಗಿ ರಾಜ್ಯದಲ್ಲಿನ ನೈಸರ್ಗೀಕ ಸಂಪತ್ತನ್ನ ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ, ಕರ್ನಾಟಕ ಬಂದರು ಇಲಾಖೆ ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ. ಒಂದು ವೇಳೆ ದ್ವೀಪ ಪ್ರವಾಸೋದ್ಯಮ ಆರಂಭವಾದರೆ ಉತ್ತರ ಕನ್ನಡ ಜಿಲ್ಲೆಗೆ ಆದಾಯದ ಜೊತೆಗೆ ದೇಶದ ಪ್ರವಾಸೊದ್ಯಮದಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Sat, 19 April 25







