ಶಿರಸಿ ನಗರಕ್ಕೆ ನೀರು ಪೂರೈಸುತ್ತಿದ್ದ ಪೈಪ್ಗಳು ಕಳ್ಳತನ: ಮೂವರು ಅಧಿಕಾರಿಗಳು ಪರಾರಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಕ್ಕೆ ನೀರು ಪೂರೈಸುತ್ತಿದ್ದ ಸುಮಾರು 60 ವರ್ಷಗಳ ಹಳೆಯ ಪೈಪ್ಪಗಳನ್ನೆ ಕಳ್ಳತನ ಮಾಡಲಾಗಿದೆ. ಪ್ರಕರಣ ಹೊರಬರುತ್ತಿದ್ದಂತೆ ನಗರಸಭೆ ಆಯುಕ್ತರು ಸೇರಿ ಮೂವರು ಅಧಿಕಾರಿಗಳು ತಲೆಮರಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ, ಏಪ್ರಿಲ್ 15: ಇದುವರೆಗೂ ಸರ್ಕಾರದ ಕಾಮಗಾರಿಯಲ್ಲಿ ಕಮಿಷನ್ ಪಡೆಯುವುದು ಹಾಗೂ ಕಾಮಗಾರಿಯೇ ಮಾಡದೆ ಹಣ ಕಬಳಿಸಿರುರುವ ಪ್ರಕರಣಗಳು ನಡೆದಿವೆ. ಆದರೆ, ಶಿರಸಿ (Sirsi) ನಗರಕ್ಕೆ ನೀರು ಪೂರೈಸುತ್ತಿದ್ದ ಸುಮಾರು 60 ವರ್ಷಗಳ ಹಳೆಯದಾದ ಸುಮಾರು 900 ಮೀಟರ್ ಉದ್ದದ ಕಬ್ಬಿಣದ ಪೈಪ್ಗಳನ್ನು ಕಳ್ಳತನ (Pipe Theft) ಮಾಡಿರುವ ಘಟನೆ ನಡೆದಿದೆ. ಪ್ರಕರಣ ಹೊರಬರುತ್ತಿದ್ದಂತೆ ನಗರಸಭೆ ಆಯುಕ್ತರು ಸೇರಿ ಮೂವರು ಅಧಿಕಾರಿಗಳು ತಲೆಮರಿಸಿಕೊಂಡಿದ್ದಾರೆ.
ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸಲು, ಶಿರಸಿ ತಾಲೂಕಿನ ಕೆಂಗ್ರೆ ಹೊಳೆಯಿಂದ ಶಿರಸಿ ನಗರಕ್ಕೆ ಸುಮಾರು 8 ಕಿ.ಮೀ ಕಾಸ್ಟ್ ಐರನ್ (ಗಟ್ಟಿ ಕಬ್ಬಿಣ) ಪೈಪ್ಗಳನ್ನು ಅಳವಡಿಸಲಾಗಿತ್ತು. ಪೈಪ್ಲೈನ್ ಬಹಳ ಹಳೆಯದಾಗಿದ್ದರಿಂದ ಕಳೆದ ಕೆಲ ವರ್ಷಗಳಿಂದ, ಪೈಪ್ಗಳು ಲಿಕೇಜ್ ಜಾಸ್ತಿ ಆಗಿ ನೀರು ಪೊಲಾಗುವುದು ಹಾಗೂ ನೀರು ಪೂರೈಕೆಯಲ್ಲೂ ವ್ಯತ್ಯಯ ಆಗುತಿತ್ತು. ಹೀಗಾಗಿ ಕಳೆದ ಎರಡು ವರ್ಷಗಳ ಹಿಂದೆ ಅಂದ್ರೆ 2023 ರಲ್ಲಿ ಕೆಂಗ್ರೆ ಹೊಳೆಯಿಂದಲೇ ಹೊಸ ಪೈಪ್ಲೈನ್ ಮಾಡಲಾಗಿತ್ತು.
ಹೀಗಾಗಿ, ಹಳೆಯ ಪೈಪ್ಲೈನ್ ಕಳೆದ ಎರಡು ವರ್ಷಗಳಿಂದ ಉಪಯೋಗಿಸದೆ ಹಾಗೆ ಇತ್ತು. ಕಳೆದ ಕೆಲ ತಿಂಗಳ ಹಿಂದೆ ನಗರದ ಕೆಲವಡೆ ಅಭಿವೃದ್ಧಿ ಕಾಮಗಾರಿ ಸಂಬಂಧ ಪೈಪ್ ತೆಗೆಯಬೇಕಾದಾಗ, ನಗರಸಭೆಯವರು ಶಿವಮೊಗ್ಗ ಮೂಲದ ಜಕ್ರಿಯಾ ಎಂಬ ಗುತ್ತಿಗೆದಾರರಿಗೆ, ಪೈಪ್ ತೆಗೆದು ಮಾರಾಟ ಮಾಡಲು ಗುತ್ತಿಗೆಯನ್ನ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಸುಮಾರು 6 ಲಕ್ಷ ರೂಪಾಯಿ ನಗರಸಭೆಗೆ ಕೊಟ್ಟು ಪೈಪ್ ತೆಗೆದು ಗುತ್ತಿಗೆದಾರ ಮಾರಾಟ ಮಾಡಿದ್ದ ಎನ್ನಲಾಗಿದೆ. ಆದರೆ, ಇದಾದ ಬಳಿಕ ನಗರಸಭೆಯಿಂದ ಯಾವುದೇ ಪರವಾನಗಿ ಹಾಗೂ ಗುತ್ತಿಗೆ ಪಡೆಯದೆ ಶಿರಸಿ ನಗರದ ಹೊರವಲಯದಲ್ಲಿರುವ ಸುಮಾರು 116ಕ್ಕೂ ಹೆಚ್ಚು ಪೈಪ್ ಸುಮಾರು 900 ಮೀಟರ್ ಉದ್ದ ನೆಲದಲ್ಲಿದ್ದ ಪೈಪ್ ತೆಗೆದು ಮಾರಾಟ ಮಾಡಲಾಗಿದೆ.
ಕೆಂಗ್ರೆಯಿಂದ ಶಿರಸಿಗೆ ಜನ ಒಡಾಡುವ ಮುಖ್ಯ ರಸ್ತೆಯ ಪಕ್ಕದಲ್ಲೆ ಇರುವ ಪೈಪ್ ಲೈನ್ ಕಳ್ಳತನ ಆಗಿರುವುದರಿಂದ, ಈ ವಿಷಯ ನಗರಸಭೆ ಅಧಿಕಾರಿಗಳಿಗೆ ಯಾಕೆ ಗೊತ್ತಗಿಲ್ಲ ಹಾಗೂ ಈ ವಿಷಯವಾಗಿ ನಗರಸಭೆ ಸದಸ್ಯರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಜನರು ಪ್ರಶ್ನಿಸಿದ್ದಾರೆ.
ಪೈಪ್ ಕಳ್ಳತನ ನಮ್ಮನ್ನು ಮುಜುಗರಕ್ಕೆ ತಳ್ಳಿದೆ. ಈ ವಿಚಾರವಾಗಿ ಪಾರದರ್ಶಕವಾಗಿ ತನಿಖೆಯಾಗಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷ ಆಗಬೇಕು. ಸದ್ಯದ ಪರಿಸ್ಥಿತಿ ನೋಡಿದರೇ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ತನಿಖೆ ಸರಿಯಾಗಿ ನಡೆಯದೆ ಇದ್ರೆ ನಾನು ಸೇರಿದಂತೆ ನನ್ನ ಜೊತೆಗಿರುವ 7 ಜನ ಸದಸ್ಯರು ರಾಜಿನಾಮೆ ಕೊಡುತ್ತಾರೆ ಎಂದು ಕೆಂದು ಶಿರಸಿ ನಗರಸಭೆ ವಿಪಕ್ಷ ನಾಯಕ ಪ್ರದೀಪ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಚಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿವೆ ಹೊಸ 32 ಸುಂದರ ತಾಣಗಳು!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಠಾಣೆಯಲ್ಲಿ, ಶಿರಸಿ ನಗರಸಭೆಯಿಂದ ಗುತ್ತಿಗೆ ಪಡೆದ ಜಕ್ರಿಯಾ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಇತ್ತ ಕೆಸ್ ದಾಖಲಾಗಿ ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ, ಶಿರಸಿ ನಗರ ಸಭೆಯ ಆಯುಕ್ತ ಕಾಂತರಾಜು ಹಾಗೂ ಇಂಜಿನಿಯರ್ಗಳಾದ ಸುಫಿಯನ್ ಮತ್ತು ಪ್ರಶಾಂತ ತಲೆ ಮರಿಸಿಕೊಂಡಿದ್ದಾರೆ. ಸದ್ಯ ಶಿರಸಿ ನಗರಸಭೆ ಆಯುಕ್ತರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Tue, 15 April 25