ಚಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿವೆ ಹೊಸ 32 ಸುಂದರ ತಾಣಗಳು!
ಉತ್ತರ ಕನ್ನಡ ಜಿಲ್ಲಾಡಳಿತವು ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದೆ. ಅರಣ್ಯ ಇಲಾಖೆಯ ಸರ್ವೆ ಪ್ರಕಾರ, ಜಿಲ್ಲೆಯಲ್ಲಿ 32 ಹೊಸ ಟ್ರೆಕ್ಕಿಂಗ್ ಮಾರ್ಗಗಳನ್ನು ಗುರುತಿಸಲಾಗಿದೆ. ಈ ಮಾರ್ಗಗಳಿಗೆ ಅನುಮತಿ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತ ನಂತರ, ಅನುಭವಿ ಮಾರ್ಗದರ್ಶಿಗಳೊಂದಿಗೆ ಈ ಮಾರ್ಗಗಳಲ್ಲಿ ಟ್ರೆಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದುವರೆಗೂ ನಿಷೇಧಿತವಾಗಿದ್ದ ಅನೇಕ ಪ್ರದೇಶಗಳನ್ನು ಈ ಮೂಲಕ ಅನ್ವೇಷಿಸಲು ಸಾಧ್ಯವಾಗಲಿದೆ.

ಕಾರವಾರ, ಏಪ್ರಿಲ್ 09: ಚಾರಣಕ್ಕೆ (Trekking) ಕೇವಲ ಚಿಕ್ಕಮಗಳೂರು (Chikkamagaluru) ಮತ್ತು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳತ್ತ ಹೊರಡುವ ಜನರಿಗೆ ಉತ್ತರ ಕನ್ನಡ (Uttar Kannada) ಜಿಲ್ಲಾಡಳಿತ ಸಿಹಿ ಸುದ್ದಿ ನೀಡಿದೆ. ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲದೆ ನಮ್ಮ ಜಿಲ್ಲೆಯಲ್ಲೂ 32 ಚಾರಣ ಪಥಗಳು ಇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ. ಹೌದು, ಟಿವಿ9 ಪ್ರತಿನಿಧಿ ಜೊತೆ ಮಾತನಾಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಅರಣ್ಯ ಇಲಾಖೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ವೆ ಮಾಡಿ 32 ಚಾರಣ ಪಥಗಳ ಗುರುತು ಮಾಡಿದೆ ಎಂದು ತಿಳಿಸಿದರು.
32 ಸ್ಥಳಗಳಲ್ಲಿ ಚಾರಣಕ್ಕೆ ಅನುಮತಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಕಳುಹಿಸಲಾಗಿದೆ. ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡಿದ ಬಳಿಕ 32 ಕಡೆ ಚಾರಣಕ್ಕೆ ಅವಕಾಶ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಯಾರೂ ಕಾಣದ ಪ್ರದೇಶಗಳನ್ನು ಇನ್ಮುಂದೆ ಕಾಣಬಹುದು. ಚಾರಣಕ್ಕೆ ಅನುಮತಿ ದೊರೆತ ಬಳಿಕ, ಅನುಭವಿ ಗೈಡ್ ಮೂಲಕ ಚಾರಣಕ್ಕೆ ಅವಕಾಶ ನೀಡಲಾಗುವುದು. ಈ ಚಾರಣದ ಬಗ್ಗೆ ಜಿಲ್ಲಾಡಳಿತ ವೆಬ್ಸೈಟ್ ಮತ್ತು ಪ್ರವಾಸೋದ್ಯಮ ಇಲಾಖೆ ಕಮಿಟಿ ಮುಖಾಂತರ ಪ್ರಚಾರ ಮಾಡಲಾಗುವುದು ಎಂದರು.
ಚಾರಣ ಸ್ಥಳಗಳನ್ನು ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿದೆ. ಜಿಲ್ಲೆಯಲ್ಲಿ ಶೇ72 ರಷ್ಟು ಅರಣ್ಯವಿದ್ದರೂ ಅಧಿಕೃತವಾಗಿ ಒಂದೆ ಚಾರಣ ಪಥವಿತ್ತು. ಕುಳಗಿ ನೇಚರ್ ಕ್ಯಾಂಪ್ನಲ್ಲಿ ಮಾತ್ರ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬಹಳಷ್ಟು ಪ್ರವಾಸಿಗರು ಇಲಾಖೆಯ ಕಣ್ಣು ತಪ್ಪಿಸಿ ನಿಷೇಧಿತ ಪಥದಲ್ಲಿ ಚಾರಣ ಮಾಡಿ ಅವಘಡಕ್ಕೆ ಸಿಲುಕಿದ್ದ ಘಟನೆಗಳು ನಡೆದಿವೆ. ಅನೇಕರು ಅಸುರಕ್ಷಿತ ತಾಣಗಳಲ್ಲಿ ಚಾರಣಕ್ಕೆ ಹೋಗಿ ಜೀವ ಕಳೆದುಕೊಂಡಿರುವ ಉದಾಹರಣಗಳಿವೆ. ಇದನ್ನು ತಪ್ಪಿಸಲು ಅರಣ್ಯ ಇಲಾಖೆ 32 ಚಾರಣ ಸ್ಥಳಗಳನ್ನು ಗುರುತು ಮಾಡಿದೆ.
ಪ್ರವಾಸೋದ್ಯಮಕ್ಕೆ ಇಂಬು ನೀಡಲು ಮುಂದಾದ ಡಿಸಿ
ಉತ್ತರ ಕನ್ನಡ ಜಿಲ್ಲೆಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಕೆಲವರಿಗೆ ದೇವಸ್ಥಾನ ಇಷ್ಟ ಆದ್ರೆ, ಇನ್ನೂ ಕೆಲವರಿಗೆ ಚಾರಣಕ್ಕೆ ಹೋಗುವ ಆಶಯ ಇರುತ್ತೆ. ಇನ್ನೂ, ಕೆಲವರಿಗೆ ಕಡಲ ತೀರ ಹಾಗೂ ಕಾಡಿನಲ್ಲಿ ಸುತ್ತಾಡುವ ಮಾಡುವ ಅಭಿರುಚಿ ಇರುತ್ತದೆ. ಹೀಗಾಗಿ, ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುವವರಿಗೆ ಜಿಲ್ಲಾಡಳಿತ ಹೊಸ ವೆಬ್ ಪೋರ್ಟಲ್ ತೆರದಿದೆ. ಈ ವೆಬ್ ಪೋರ್ಟಲ್ನಲ್ಲಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ತಾವು ಭೇಟಿ ಕೊಡಲು ಮುಂದಾಗಿರುವ ದೇವಸ್ಥಾನದ ಸುತ್ತಮುತ್ತಲಿನ ಅತ್ಯಾಕರ್ಷಣೆ ಸ್ಥಳಗಳ ಹಾಗೂ ಐತಿಹಾಸಿಕ ದೇವಸ್ಥಾನಗಳ ರೂಟ್ ಮ್ಯಾಪ್ ಹಾಗೂ ಅಲ್ಲಿನ ಮಾಹಿತಿಯನ್ನು ಒದಗಿಸಲಾಗಿತ್ತೆ.
ಉತ್ತರ ಕನ್ನಡ ಅಂದ್ರೆ ಗೋಕರ್ಣ, ಮುರ್ಡೆಶ್ವರ, ಕಡಲ ತೀರ ಮತ್ತು ರೆಸಾರ್ಟ್ಗಳಿಗೆ ಅಷ್ಟೇ ಸಿಮಿತ ಎಂಬುವುದು ಅನೇಕರ ಅಭಿಪ್ರಾಯ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ತಾಣಗಳಿಗಿಂತ, ಬೆಳಕಿಗೆ ಬಾರದ ತಾಣಗಳೇ ಹೆಚ್ಚಿವೆ. ಕೇವಲ ಸ್ಥಳಿಯರಿಗೆ ಮತ್ತು ವಿಶೇಷ ತಾಣಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಮಾತ್ರ ಗೊತ್ತಿದೆ.
ಇದನ್ನೂ ಓದಿ: ಉತ್ತರ ಕನ್ನಡ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್ ಮಾಡ್ತಿದ್ದೀರಾ? ಹಾಗಾದರೆ ಈ ವಿಚಾರ ಗಮನಿಸಿ
ಇಂತಹ ತಾಣಗಳ ಬಗ್ಗೆ ಎಲ್ಲರಿಗೂ ಪರಿಚಯಿಸಿ ಜಿಲ್ಲೆಯ ಪ್ರವಾಸೊದ್ಯಮಕ್ಕೆ ಇಂಬು ನೀಡಲು ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, “ಅನಸೀನ್ ಉತ್ತರ ಕನ್ನಡ” ಎಂಬ ಶಿರ್ಷಿಕೆ ಅಡಿಯಲ್ಲಿ ಖಾಸಗಿ ಕಂಪನಿಗಳ ಮೂಲಕ, ಜಿಲ್ಲೆಯಲ್ಲಿ ಬೆಳಕಿಗೆ ಬಾರದ ಪ್ರವಾಸಿ ತಾಣಗಳ ಬಗ್ಗೆ ಅಧ್ಯಯನ ಮಾಡಿಸಿ, ಜನರಿಗೆ ಪರಿಚಯಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Wed, 9 April 25