ದಾಂಡೇಲಿ ಮನೆಯಲ್ಲಿತ್ತು 14 ಕೋಟಿ ರೂ. ನಕಲಿ ನೋಟು: ರಾಶಿ ರಾಶಿ ಕರೆನ್ಸಿ ನೋಡಿ ಪೊಲೀಸರೇ ಶಾಕ್
ಗೋವಾ ಮೂಲದ ವ್ಯಕ್ತಿಯೊಬ್ಬ ದಾಂಡೇಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಕಳೆದ ಒಂದು ತಿಂಗಳಿನಿಂದ ಆತ ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಮನೆಯ ಹಿಂದಿನ ಬಾಗಿಲು ಓಪನ್ ಆಗಿದ್ದನ್ನು ಕಂಡ ಸ್ಥಳಿಯರು ವಿಷಯ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆಯುತ್ತಿದ್ದಂತೆಯೇ ಕಂತೆ ಕಂತೆ ನೋಟುಗಳು ಕಾಣಿಸಿವೆ.

ಕಾರವಾರ, ಏಪ್ರಿಲ್ 9: ಬಾಗಿಲು ತೆರೆದಿದ್ದ ಮನೆ, ಒಳಗೆ ಹಣ್ಣು – ತರಕಾರಿ ರೀತಿಯಲ್ಲಿ ಬಿದ್ದಿರುವ ಕಂತೆ ಕಂತೆ (Fake Currency Notes) ನೋಟುಗಳು. ವಿಷಯ ತಿಳಿದು ಮನೆಯಿಂದ ಹೊರ ಬಾರದ ಜನರು. ಇಂಥದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ನಗರದ ಗಾಂಧಿನಗರ ಬಡಾವಣೆ. ಗಾಂಧಿನಗರದ ನೂರಜಾನ್ ಜುಂಜುವಾಡ್ಕರ ಎಂಬವವರ ಮನೆಯೊಂದರಲ್ಲಿ ಗೋವಾ (Goa) ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆದಾರನಾಗಿ ವಾಸ್ತವ್ಯವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮತ್ತು ಆ ಮನೆಯ ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು, ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ದಾಂಡೇಲಿ ನಗರ ಠಾಣೆಯ ಪೊಲೀಸರು ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆಯೇ, 500 ರೂ. ಮುಖ ಬೆಲೆಯ ಕಂತೆ ಕಂತೆ ನೋಟುಗಳು ಕಾಣಿವೆ. ಒಮ್ಮೆಲೇ ದಂಗಾದ ಪೊಲೀಸರು ಸ್ಥಳಕ್ಕೆ ಹಿರಿಯ ಪೊಲೀಸರನ್ನು ಕರೆಸಿದ್ದಾರೆ. ಕೂಡಲೇ ಮನೆ ಮಾಲೀಕರು ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆತ ಬೇರೆ ಕಡೆ ಇದ್ದಿದ್ದರಿಂದ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ವರೆಗೆ ನೋಟನ್ನು ತಮ್ಮ ಸುಪರ್ದಿಯಲ್ಲಿ ಇಟ್ಟಕೊಂಡಿದ್ದಾರೆ.
ಬೆಳಗ್ಗೆ ಅನುಮಾನ ಬಂದು ಮನೆ ಮಾಲೀಕರು ಕೆಲ ನೋಟುಗಳನ್ನು ಕಂತೆಯಿಂದ ಬಿಡಿಸಿ ನೋಡಿದಾಗ, 500 ರೂ. ಮುಖಬೆಲೆಯ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಬರಹ ಇರುವ ಮತ್ತು ಗವರ್ನರ್ ಸಹಿ ಇಲ್ಲದೆ ಇರುವ, ಜೊತೆಗೆ ನೋಟಿಗೆ ಸಂಖ್ಯೆಯಿರುವ ಜಾಗದಲ್ಲಿ ಸೊನ್ನೆಯನಷ್ಟೇ ನಮೂದಿಸಿರುವ ನೋಟುಗಳು ಪತ್ತೆಯಾಗಿವೆ. ‘‘ಮೂವಿ ಶೂಟಿಂಗ್ ಪರ್ಪಸ್ ಓನ್ಲಿ’’ ಎಂದು ಬರೆದಿರುವ ಶೈನಿಂಗ್ ಪೇಪರಿನಲ್ಲಿ ಮುದ್ರಿತ 500 ಮುಖಬೆಲೆಯ ನಕಲಿ ಐವತ್ತು ನೋಟುಗಳ ಬಂಡಲ್ ಇದೆ ಎಂಬುವುದು ದೃಢವಾಗಿದೆ. ಇನ್ನು ಅಂದಾಜು 14 ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿದ್ದು, ಅವುಗಳನ್ನು ಸದ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋಟಿಗಟ್ಟಲೇ ನಕಲಿ ನೋಟು ಸಿಕ್ಕಿರುವ ಸಂಬಂಧ ಆ ಮನೆಯಲ್ಲಿ ಬಾಡಿಗೆದಾರನಾಗಿದ್ದ ಅರ್ಷದ್ ಖಾನ್ನನ್ನು ವಶಕ್ಕೆ ಪಡೆಯಲು ದಾಂಡೇಲಿ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಈಗಾಗಲೇ ಅರ್ಷದ್ ಖಾನ್ನನ್ನು ಪೊಲೀಸರು ಸಂಪರ್ಕಿಸಿದ್ದು, ಆತ ಗೋವಾದಲ್ಲಿ ಇದ್ದು ಬರುವುದಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಸಹ ದಾಂಡೇಲಿಯಲ್ಲಿ ನಕಲಿ ಕರೆನ್ಸಿ ನೋಟು ಪತ್ತೆಯಾಗಿದ್ದು ಸದ್ದು ಮಾಡಿತ್ತು. ಸದ್ಯ ಮತ್ತೆ ಕೋಟಿಗಟ್ಟಲೇ ನಕಲಿ ನೋಟು ಪತ್ತೆಯಾಗಿದ್ದು, ಇದರ ಹಿಂದಿನ ಅಸಲಿ ಸತ್ಯವಾದರೂ ಏನು ಎಂಬ ಚರ್ಚೆ ಸಾರ್ವಜನಿಕರಲ್ಲಿ ಜೋರಾಗಿದೆ.
ಇದನ್ನೂ ಓದಿ: ರಾಮಕೃಷ್ಣ ಹೆಗಡೆ ಸ್ಮರಣಾರ್ಥ ಗ್ರಂಥಾಲಯ: ಸಾರ್ವಜನಿಕರಿಗೆ ಓದುವ ಗೀಳು ಹಿಡಿಸಿದ ಮಾಜಿ ಸಿಎಂ ಅನುಯಾಯಿ
ಸದ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್, ದಾಂಡೇಲಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಇನ್ನು ಈ ನೋಟು ಚಿತ್ರೀಕರಣಕ್ಕೆ ಬಳಕೆ ಮಾಡಲು ಮುದ್ರಿಸಲಾಗಿತ್ತೇ, ಇಲ್ಲವೇ ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಮುದ್ರಿಸಲಾಗಿತ್ತೇ ಎನ್ನುವುದರ ಬಗ್ಗೆ ಸಮಗ್ರ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 am, Wed, 9 April 25