ಭಟ್ಕಳದ ಮೂರಿನ್ ಕಟ್ಟೆಯ ಇತಿಹಾಸವೇನು? ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು?

ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಮೂರಿನ್​ ಕಟ್ಟೆ ವಿವಾದ ಉದ್ವಿಗ್ನಗೊಂಡಿದೆ. ಸದ್ಯ ತೀವ್ರ ವಿವಾದಕ್ಕೆ ಕಾರಣವಾಗಿರುವ ಉತ್ತರ ಕನ್ನಡದ ಭಟ್ಕಳದ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಶಿರಸಿ ಮತ್ತು ಸಾಗರದ ಮಾರಿಕಾಂಬೆಯ ಸಂಬಂಧ ಹೊಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಟ್ಕಳದ ಮೂರಿನ್ ಕಟ್ಟೆಯ ಇತಿಹಾಸವೇನು? ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು?
ಮೂರಿನ್ ಕಟ್ಟೆ
Image Credit source: tv9 kannada
Edited By:

Updated on: May 25, 2026 | 5:43 PM

ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಐತಿಹಾಸಿಕ ಮೂರಿನ್​ ಕಟ್ಟೆ (Moorinakatte) ಕಿಚ್ಚು ಜೋರಾಗಿದೆ. ಕಟ್ಟೆ ಪುನರ್​ ನಿರ್ಮಾಣಕ್ಕೆ ಅನ್ಯ ಕೋಮಿನ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಕಟ್ಟೆಯನ್ನ ತೆರವುಗೊಳಿಸಲಾಗಿದೆ. ಇದು ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹಾಗೂ ಭಕ್ತರ ಅಪಾರ ಶ್ರದ್ಧಾಕೇಂದ್ರವಾಗಿರುವ ಮೂರಿನ್ ಕಟ್ಟೆಯ ವಿವಾದ ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಭಟ್ಕಳದ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸ
  • ಮೂರಿನ್ ಕಟ್ಟೆಗೆ ಶಿರಸಿ ಮತ್ತು ಸಾಗರದ ಮಾರಿಕಾಂಬೆಯ ಸಂಬಂಧ
  • ಮುಸ್ಲಿಂರ ಆಕ್ರೋಶಕ್ಕೆ ಹಿಂದೂಗಳಿಂದ ಭಾರೀ ವಿರೋಧ

ಮೂರಿನ್ ಕಟ್ಟೆಯ ಇತಿಹಾಸವೇನು?

ಭಟ್ಕಳದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಐತಿಹಾಸಿಕ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಭಟ್ಕಳದ ಈ ಮೂರಿನ್ ಕಟ್ಟೆಗೆ ಸುಪ್ರಸಿದ್ಧ ಶಿರಸಿ ಮತ್ತು ಸಾಗರದ ಮಾರಿಕಾಂಬಾ ದೇವಿಯ ಧಾರ್ಮಿಕ ಸಂಬಂಧವಿದೆ. ಸಾಗರದಿಂದ ಶಿರಸಿವರೆಗೆ ಮಾರಿಕಾಂಬಾ ದೇವಿಯ ‘ವಜ್ಜೆ’ (ದೇವಿಯ ನಿತ್ಯೋಪಯೋಗದ ವಸ್ತುಗಳು) ಇಡುವ ಪವಿತ್ರ ಸ್ಥಳಗಳಿದ್ದು, ಆ ಪೈಕಿ ಭಟ್ಕಳದ ಈ ಮೂರಿನ್ ಕಟ್ಟೆ ಕೂಡ ಒಂದಾಗಿದೆ.

ಇದನ್ನೂ ಓದಿ: ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್​: ಇಂದಿನಿಂದ 3 ದಿನ ಇಡೀ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ದೇವಿಯ ಈ ಪವಿತ್ರ ವಜ್ಜೆಯನ್ನು ಕಾಲಕಾಲಕ್ಕೆ ಒಂದೂರಿಂದ ಇನ್ನೊಂದು ಊರಿಗೆ, ಅಂದರೆ ಸಾಗರದಿಂದ ಶಿರಸಿವರೆಗೆ ಸ್ಥಳಾಂತರಿಸಲಾಗುತ್ತಿರುತ್ತದೆ. ಈ ಕಟ್ಟೆಯ ಮೇಲೆ ದೇವಿಯ ವಜ್ಜೆಯನ್ನಿಟ್ಟು ಭಕ್ತರು ಹರಕೆ ಕೇಳಿಕೊಂಡರೆ, ತಾಯಿ ಮಾರಿಕಾಂಬೆ ಅದನ್ನು ಈಡೇರಿಸುತ್ತಾಳೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿದೆ.

ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು?

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಹೆದ್ದಾರಿಗೆ ಅಡ್ಡಿಯಾಗುತ್ತಿದ್ದ ಈ ಕಟ್ಟೆಯನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಅದರಂತೆ, ಮೂಲ ಮೂರಿನ್ ಕಟ್ಟೆಗೆ ಯಾವುದೇ ಧಕ್ಕೆ ಮಾಡದೆ, ಅದರ ಮೂಲ ಸ್ಥಾನದ ಪಕ್ಕದಲ್ಲೇ ಹೊಸದಾಗಿ ಮೂರಿನ್ ಕಟ್ಟೆ ನಿರ್ಮಿಸಲು ಇತ್ತೀಚೆಗೆ ಫೌಂಡೇಶನ್ ಹಾಕಲಾಗಿತ್ತು. ಆದರೆ, ಈ ಹೊಸ ಫೌಂಡೇಶನ್ ಕಲ್ಲನ್ನು ಕಿತ್ತೆಸೆದಿರುವ ಮುಸ್ಲಿಂ ಸಮುದಾಯದ ಕೆಲವರು, ಇಲ್ಲಿ ಕಟ್ಟೆ ನಿರ್ಮಾಣ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಸ್ಲಿಂ ಸಮುದಾಯದ ಈ ನಡೆಗೆ ಭಟ್ಕಳದ ಹಿಂದೂ ಮುಖಂಡರು ಹಾಗೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಭಟ್ಕಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ ಎಂ. ದೀಪನ್

ಇನ್ನು ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಒಟ್ಟಾರೆಯಾಗಿ, ಹೆದ್ದಾರಿ ಅಭಿವೃದ್ಧಿಯ ನಡುವೆ ಸೃಷ್ಟಿಯಾಗಿರುವ ಈ ಧಾರ್ಮಿಕ ಸಂಘರ್ಷ ಸದ್ಯ ಭಟ್ಕಳದಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:39 pm, Mon, 25 May 26

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us