ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ: ಘಟನೆಯ ಸ್ಫೋಟಕ ಅಂಶ ಬಿಚ್ಚಿಟ್ಟ ಅರಣ್ಯ ಸಚಿವ ರಾಮಲಿಂಗಾರೆಡ್ಡಿ
Forest Staff Shootout: ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಜಿಂಕೆ ಬೇಟೆಗಾರರು ಬಲಿಯಾಗಿದ್ದು, ಈ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಮಧ್ಯಂತರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರು, ಆಗಸ್ಟ್ 15: ಚಾಮರಾಜನಗರದಲ್ಲಿ (chamarajanagar) ಅರಣ್ಯ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಮೂವರು ಬಲಿಯಾಗಿದ್ದಾರೆ. ಹನೂರು ತಾಲೂಕಿನ ಹೊಳೆದಟ್ಟಿ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ, ಮೂವರು ಸಾವನ್ನಪ್ಪಿದ್ದು (death), ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ‘ಸಿಎಂ ಡಿಕೆ ಶಿವಕುಮಾರ್ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಸಮಗ್ರ ತನಿಖೆಯ ಬಳಿಕವೇ ಸಂಪೂರ್ಣ ಸತ್ಯಾಂಶ ಹೊರಬರಲಿದೆ’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.
ವರದಿ ಕೈಸೇರಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಕ್ರಮ: ರಾಮಲಿಂಗಾರೆಡ್ಡಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಘಟನೆಯ ಸ್ಫೋಟಕ ಅಂಶ ಬಿಚ್ಚಿಟ್ಟಿದ್ದಾರೆ. ‘ಬೆಳಗ್ಗೆ ಕೋಲಾರಕ್ಕೆ ತೆರಳುತ್ತಿದ್ದ ವೇಳೆ ನನಗೆ ಘಟನೆಯ ಮಾಹಿತಿ ಲಭಿಸಿತು. ನಾಲ್ವರು ನಾಡಬಂದೂಕು ಹಿಡಿದು ಇಡೀ ರಾತ್ರಿ ಪ್ರಾಣಿಗಳನ್ನು ಬೇಟೆಯಾಡಿ, ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಶೇಖರಪ್ಪ, ರೋಹಿತ್ ಹಾಗೂ ಶಿವರಾಜ್ ಅವರನ್ನು ತಡೆದಿದ್ದಾರೆ’ ಎಂದರು.
ಎರಡೂ ಕಡೆಯಿಂದ ಫೈರಿಂಗ್
ಇನ್ನು ಈ ವೇಳೆ ‘ಬೇಟೆಗಾರರ ಬಳಿ ಎರಡು ಲೈಸೆನ್ಸ್ ಇಲ್ಲದ ನಾಡಬಂದೂಕು ಇತ್ತು. ಸಿಬ್ಬಂದಿಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ಹಂತದಲ್ಲಿ ಎರಡೂ ಕಡೆಯ ನಡುವೆ ಫೈರಿಂಗ್ ನಡೆದಿದ್ದು, ಅಂಟೋನಿಸ್ವಾಮಿ, ಜಾನ್ ಪೀಟರ್ ಹಾಗೂ ಸವಾರಿಯಪ್ಪನ್ ಎಂಬುವವರು ಮೃತಪಟ್ಟಿದ್ದಾರೆ. ಮಹಿಮ್ ದಾಸ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮದ ಜನರು ಹೇಳುವುದು ಬೇರೆ ಇದೆ. ನಾಲ್ಕು ಬ್ಯಾಗ್ ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚಾಮರಾಜನಗರ ಅರಣ್ಯದಲ್ಲಿ ಎನ್ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ
‘ಇನ್ನು ಪ್ರಕರಣದ ಮಧ್ಯಂತರ ತನಿಖಾ ವರದಿ ಕೈಸೇರಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು. ಹಾಗೆಯೇ ತನಿಖಾ ವರದಿಯ ಆಧಾರದ ಮೇಲೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರವಾಗಿಯೂ ಚರ್ಚೆ ನಡೆಸಲಾಗುವುದು’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Sat, 15 August 26




