ಪ್ರವಾಸಿಗರಿಗೆ ಗುಡ್​ನ್ಯೂಸ್​​: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳ ನಿಷೇಧ ತೆರವು

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳಿಗೆ ವಿಧಿಸಿದ್ದ ನಿಷೇಧವನ್ನು ಕೇವಲ ಒಂದು ದಿನದಲ್ಲಿ ತೆರವುಗೊಳಿಸಲಾಗಿದೆ. ಹವಾಮಾನ ವೈಪರೀತ್ಯದ ಕಾರಣ ನೀಡಿ ಪ್ರವಾಸೋದ್ಯಮ ಇಲಾಖೆ ನಿರ್ಬಂಧ ವಿಧಿಸಿತ್ತು. ಆದರೆ ಇದೀಗ ದಿಢೀರ್​ ಆದೇಶ ಹಿಂಪಡೆಯಲಾಗಿದೆ. ಹೀಗಾಗಿ ಗೋಕರ್ಣ, ಮುರುಡೇಶ್ವರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಾಹಸ ಕ್ರೀಡೆಗಳು ಮತ್ತೆ ಆರಂಭವಾಗಿವೆ.

ಪ್ರವಾಸಿಗರಿಗೆ ಗುಡ್​ನ್ಯೂಸ್​​: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳ ನಿಷೇಧ ತೆರವು
ವಾಟರ್ ಸ್ಪೋರ್ಟ್ಸ್ (ಎಐ ಚಿತ್ರ)
Image Credit source: tv9 kannada
Edited By:

Updated on: May 20, 2026 | 9:40 PM

ಕಾರವಾರ, ಮೇ 20: ಹವಾಮಾನ ವೈಪರಿತ್ಯ ಹಿನ್ನೆಲೆ ಅರಬ್ಬಿ ಸಮುದ್ರ, ಅಘನಾಶಿನಿ ನದಿ ಮತ್ತು ಶರಾವತಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳಿಗೆ (Water Sports) ವಿಧಿಸಿದ್ದ ನಿಷೇಧವನ್ನು ಜಿಲ್ಲಾಡಳಿತ 24 ಗಂಟೆಯೊಳಗೆ ಹಿಂಪಡೆದಿದೆ. ಹವಾಮಾನ ವೈಪರೀತ್ಯದ ಕಾರಣ ಮುಂಗಾರು ಮುಗಿಯುವವರೆಗೆ ಪ್ರವಾಸೋದ್ಯಮ ಇಲಾಖೆ ನಿರ್ಬಂಧ ವಿಧಿಸಿದ್ದತ್ತು. ಆದರೆ ಆದೇಶ ಹೊರಡಿಸಿದ ಮರುದಿನವೇ ಅದನ್ನು ವಾಪಸ್ ಪಡೆಯಲಾಗಿದೆ. ಆ ಮೂಲಕ ಪ್ರವಾಸಿಗರಿಗೆ (Tourist) ಗುಡ್​ನ್ಯೂಸ್​​ ಸಿಕ್ಕಿದೆ.

ಮುಖ್ಯಾಂಶಗಳು

  • ಉತ್ತರ ಕನ್ನಡ ಜಲಸಾಹಸ ಕ್ರೀಡೆ ನಿಷೇಧ ತೆರವು
  • ಉತ್ತರ ಕನ್ನಡ ಡಿಸಿ ಲಕ್ಷ್ಮೀ ಪ್ರಿಯಾರಿಂದ ಅಧಿಕಾರಿಗಳಿಗೆ ಸೂಚನೆ
  • ಪ್ರವಾಸಿಗರಿಗೆ ಗುಡ್​ನ್ಯೂಸ್​!

ದಿಢೀರ್​ ಆದೇಶ ಹಿಂಪಡೆದಿದ್ದೇಕೆ?

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಮುಗಿಯುವವರೆಗೂ ಜಲಸಾಹಸ ಕ್ರೀಡೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಪ್ರವಾಸೋದ್ಯಮ ಇಲಾಖೆ ನಿನ್ನೆ ಆದೇಶ ಹೊರಡಿಸಿತ್ತು. ಆದರೆ, ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಜಲಸಾಹಸ ಕ್ರೀಡೆಗೆ ನಿರ್ಬಂಧಿಸಲಾಗಿತ್ತು. ಆಡಳಿತ ವ್ಯವಸ್ಥೆಯಲ್ಲಿನ ಈ ಗಂಭೀರ ಸಮನ್ವಯ ಕೊರತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ತಕ್ಷಣ ಆದೇಶ ಹಿಂಪಡೆದು ನಿರ್ಬಂಧ ತೆರವು ಮಾಡಲು ಸೂಚಿಸಿದ್ದಾರೆ.

ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ನಿರಾಳ

ಜಿಲ್ಲಾಧಿಕಾರಿಗಳ ಖಡಕ್ ಸೂಚನೆ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಗೋಕರ್ಣ, ಮುರುಡೇಶ್ವರ, ಕಾರವಾರ, ಹೊನ್ನಾವರ ಹಾಗೂ ದಾಂಡೇಲಿ ಭಾಗದಲ್ಲಿ ಜಲಸಾಹಸ ಕ್ರೀಡೆಗಳಿಗೆ ವಿಧಿಸಲಾಗಿದ್ದ ನಿಷೇಧವನ್ನು ಅಧಿಕೃತವಾಗಿ ತೆರವುಗೊಳಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ದಿಢೀರ್ ನಿಷೇಧದ ನಿರ್ಧಾರದಿಂದ ಆತಂಕಕ್ಕೊಳಗಾಗಿದ್ದ ಸ್ಥಳೀಯ ಹೋಂ ಸ್ಟೇ, ರೆಸಾರ್ಟ್ ಮಾಲೀಕರು ಹಾಗೂ ಜಲಸಾಹಸ ಕ್ರೀಡೆಗಳನ್ನೇ ನಂಬಿಕೊಂಡಿದ್ದ ಉದ್ಯಮಿಗಳು ಜಿಲ್ಲಾಡಳಿತದ ಈ ಯು-ಟರ್ನ್ ನಿರ್ಧಾರದಿಂದ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಪ್ರವಾಸಿಗರಿಗೆ ನಿರಾಸೆ: ಹವಾಮಾನ ವೈಪರಿತ್ಯ ಹಿನ್ನೆಲೆ ಉತ್ತರ ಕನ್ನಡದಲ್ಲಿ ಜಲಸಾಹಸ ಕ್ರೀಡೆಗೆ ನಿರ್ಬಂಧ

ಒಟ್ಟಾರೆ ಅಧಿಕಾರಿಗಳ ಹಗ್ಗಜಗ್ಗಾಟ ಹಾಗೂ ಸಮನ್ವಯದ ಕೊರತೆಯಿಂದಾಗಿ ಕರಾವಳಿ ಭಾಗದಲ್ಲಿ ಒಂದೇ ದಿನದಲ್ಲಿ ಹೈಡ್ರಾಮಾ ನಡೆದಂತಾಗಿದ್ದು, ಸದ್ಯಕ್ಕಂತೂ ಪ್ರವಾಸಿಗರು ಎಂದಿನಂತೆ ಜಲಸಾಹಸ ಕ್ರೀಡೆಗಳ ಮಜಾ ಸವಿಯಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us