ಉತ್ತರ ಕನ್ನಡ, ಆ.08: ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಅನಾಹುತಗಳ ಮೇಲೆ ಅನಾಹುತ ಸಂಭವಿಸುತ್ತಿದೆ. ಇತ್ತೀಚೆಗಷ್ಟೇ ಶಿರೂರು ಗುಡ್ಡ ಕುಸಿತವಾಗಿ ಹಲವಾರು ಜನರು ಪ್ರಾಣಬಿಟ್ಟಿದ್ದರು. ಇನ್ನೂ ಕೂಡ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಹೀಗಿರುವಾಗ ಕಾಳಿ ನದಿ ಅಡ್ಡಲಾಗಿ ಕಟ್ಟಿರುವ ಸೇತುವೆ ಕುಸಿತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಹೊಸ ಸೇತುವೆ ಮೂಲಕ ವಾಹನ ಸಂಚಾರಕ್ಕೆ NHAI ಅವಕಾಶ ನೀಡಿದೆ.
ಹೌದು, ಘಟನೆ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಉ.ಕನ್ನಡ ಜಿಲ್ಲಾಧಿಕಾರಿ, ‘ಹೊಸ ಸೇತುವೆ ಧಾರಣ ಶಕ್ತಿ ಬಗ್ಗೆ ವರದಿ ಕೇಳಿದ್ದರು. ಅದರಂತೆ ಪರಿಶೀಲನೆ ಬಳಿಕ ವಾಹನ ಸಂಚಾರಕ್ಕೆ NHAI ಅವಕಾಶ ನೀಡಿದ್ದು, 2013ರಲ್ಲಿ ನಿರ್ಮಾಣವಾದ ಹೊಸ ಸೇತುವೆ ಸಂಚಾರಕ್ಕೆ ಸೂಕ್ತವಾಗಿದೆ ಎಂದಿದೆ. ಇದೀಗ NHAI ವರದಿ ಬಳಿಕ 2 ಬದಿಯ ಸಂಚಾರಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ. ಆದರೂ ಭಾರಿ ಗಾತ್ರದ ವಾಹನಗಳನ್ನು ಪೊಲೀಸರ ಕಟ್ಟೆಚ್ಚರದಲ್ಲಿ ಬಿಡಲಾಗುತ್ತಿದೆ.
ಇದನ್ನೂ ಓದಿ:ಕಾರವಾರ ಸೇತುವೆ ಕುಸಿತ: ತಾವೇ ನಿರ್ಮಿಸಿದ ಸೇತುವೆ ಸಾಮರ್ಥ್ಯದ ಬಗ್ಗೆ NHAIಗೆ ಸಂಶಯ?
ಇನ್ನು ಸೇತುವೆ ಕುಸಿತ ಸ್ಥಳಕ್ಕೆ ದೆಹಲಿಯಿಂದ NHAI, IRB ಇಂಜಿನಿಯರ್ ಸೇರಿ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಸೇತುವೆ ಕುಸಿತ ಸ್ಥಳವನ್ನು ವೀಕ್ಷಿಸಿ ಪರಿಶೀಲಿಸಿದೆ. ಜೊತೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ ಅವರ ಜೊತೆ ಸ್ಥಳದಲ್ಲೇ ಮಾಹಿತಿ ಹಂಚಿಕೊಂಡಿದೆ. ಹಳೆಯ ಸೇತುವೆ ಹೇಗೆ ಕುಸಿದಿರಬಹುದು ಎಂದು ವಿಶ್ಲೇಷಿಸಲಾಗಿದೆ. ಇನ್ನು ಹೊಸ ಸೇತುವೆ ಧಾರಣ ಶಕ್ತಿ ಕುರಿತು ಪ್ರಮಾಣಪತ್ರ ನೀಡುವಂತೆ ಜಿಲ್ಲಾಧಿಕಾರಿ ಕೇಳಿದ್ದ ಹಿನ್ನಲೆ ಸದ್ಯ ಸೇತುವೆ ಮೇಲೆ ಕೆಎಸ್ಆರ್ಟಿಸಿ ಬಸ್ ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸರಕು ಸಾಗಾಟದ ವಾಹನಗಳ ಓಡಾಟಕ್ಕೂ ಪೊಲೀಸರು ಅವಕಾಶ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Thu, 8 August 24